ಕುಡಿದ ಮತ್ತಲ್ಲಿ ಅಪ್ಪನನ್ನೇ ಕೊಂದ – ಸದ್ದಿಲ್ಲದೆ ಶವ ಸಂಸ್ಕಾರಕ್ಕೆ ಸ್ಕೆಚ್ ಹಾಕಿ ಲಾಕ್ ಆದ ಮಗ

Public TV
1 Min Read

ಚಿಕ್ಕಮಗಳೂರು: ಕುಡಿದ ಮತ್ತಿನಲ್ಲಿ ಮಗನೇ ತಂದೆಯನ್ನ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು (Chikkamagaluru) ತಾಲೂಕಿನ ಆಲ್ದೂರು (Alduru) ಸಮೀಪದ ಗುಪ್ತಶೆಟ್ಟಿಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ಮಂಜುನಾಥ್ (51) ಮಗನಿಂದಲೇ ಕೊಲೆಯಾದ ದುರ್ದೈವಿ, ರಂಜನ್ (21) ಕೊಲೆಗೈದ ಆರೋಪಿಯಾಗಿದ್ದಾನೆ. ಪೋಷಕರ ನಡುವೆ ನಡೆದ ಗಲಾಟೆಯ ವೇಳೆ ಆರೋಪಿ ಈ ಕೃತ್ಯ ಎಸಗಿದ್ದಾನೆ. ಬಳಿಕ ಸದ್ದಿಲ್ಲದೇ ತಂದೆಯ ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಚಿಕ್ಕಮಗಳೂರು | ಪೊಲೀಸರ ಕಿರುಕುಳಕ್ಕೆ ಆಟೋ ಚಾಲಕ ಆತ್ಮಹತ್ಯೆ – ಕಾನ್‌ಸ್ಟೇಬಲ್‌ ಅರೆಸ್ಟ್‌

ಆರೋಪಿ ರಂಜನ್‌ ಆ.16ರ ಸಂಜೆ ಆಲ್ದೂರಿಗೆ ಹೋಗಿ ಸಂತೆ ಮುಗಿಸಿಕೊಂಡು, ಮಧ್ಯಪಾನ ಮಾಡಿ ಮನೆಗೆ ಬಂದಿದ್ದ. ಈ ವೇಳೆ ತಂದೆ-ತಾಯಿ ನಡುವೆ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದೆ. ಜಗಳ ಬಿಡಿಸಲು ಹೋದ ರಂಜನ್, ತಂದೆಗೆ ಹಿಂದಿನಿಂದ ಚಾಕು ಇರಿದ್ದಿದ್ದಾನೆ. ಕೊನೆಗೆ ಜಗಳ ಬಿಡಿಸಿದ ತಾಯಿ ಚಾಕುವಿನಿಂದ ಆದ ಗಾಯಕ್ಕೆ ಅರಿಶಿನ ಪುಡಿ ಹಚ್ಚಿ ಮಲಗಿಸಿದ್ದಾರೆ. ರಾತ್ರಿ ರಕ್ತಸ್ರಾವ ಹೆಚ್ಚಾಗಿ ಮಂಜುನಾಥ್ ಪ್ರಾಣ ಪಕ್ಷಿ ಹಾರಿಹೋಗಿದೆ.

ತಂದೆಯ ಪ್ರಾಣ ಪಕ್ಷಿ ಹಾರಿಹೋಗುತ್ತಿದ್ದಂತೆ ರಂಜನ್ ಒಬ್ಬೊಬ್ಬರ ಬಳಿ ಒಂದೊಂದು ಕಥೆ ಕಟ್ಟಿದ್ದಾನೆ. ತಂದೆ-ತಾಯಿ ಜಗಳದಲ್ಲಿ ನಾನು ಬಿಡಿಸುವ ವೇಳೆ ತಂದೆಗೆ ಮಚ್ಚು ತಾಗಿ ಗಾಯವಾಗಿ ತೀರಿಕೊಂಡ್ರು ಎಂದು ಕೆಲವರ ಬಳಿ ಹೇಳಿದ್ದನಂತೆ. ಇನ್ನೂ ಕೆಲವರ ಬಳಿ ತಂದೆ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಕತೆ ಕಟ್ಟಿದ್ದ. ಆರೋಪಿಯ ಕಥೆ ಕೇಳಿದ್ದವರು ನಿಜವೆಂದು ಮಂಜುನಾಥ್ ಶವ ಸಂಸ್ಕಾರಕ್ಕೆ ತಯಾರಿ ಮಾಡಿಕೊಂಡಿದ್ದರು.

ಪ್ರಕರಣದ ಮಾಹಿತಿ ಪಡೆದ ಆಲ್ದೂರು ಪೊಲೀಸರು, ಅನುಮಾನದ ಮೇಲೆ, ಮಗನನ್ನು ವಿಚಾರಣೆ ನಡೆಸಿದಾಗ ಗುಟ್ಟು ರಟ್ಟಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮೋಟೆಬೆನ್ನೂರಿನಲ್ಲಿ ಖಾಸಗಿ ಬಸ್‌ ಪಲ್ಟಿ – ಇಬ್ಬರು ಸಾವು, 6 ಜನರಿಗೆ ಗಂಭೀರ ಗಾಯ

Share This Article