ಆನೇಕಲ್: ಕೆರೆಯಲ್ಲಿ ಬೆಂಕಿ ಹಾಗೂ ನೊರೆಯಿಂದ ಕುಖ್ಯಾತಿಗೆ ಒಳಗಾಗಿದ್ದ ವರ್ತೂರು ಕೆರೆಗೆ ಇದೀಗ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೋಳಿ, ದನದ ಮಾಂಸದ ಕಸ ತುಂಬಿಕೊಂಡು ಗಬ್ಬು ನಾರುತ್ತಿದೆ.
ವರ್ತೂರು ಗ್ರಾಮದಿಂದ ಕೆರೆಯ ಕೋಡಿವರೆಗೂ ಅಳವಡಿಸಿರುವ ತಂತಿ ಬೇಲಿ ಅಲ್ಲಲ್ಲಿ ತೆರೆದಿದೆ. ಇದನ್ನು ದುರ್ಬಳಕೆ ಮಾಡಿಕೊಂಡು ಕೆಲವು ಕೋಳಿ, ಕಸಾಯಿಖಾನೆ ಅಂಗಡಿಗಳ ಮಾಲೀಕರು ಮಾಂಸದ ತ್ಯಾಜ್ಯವನ್ನು ರಾತ್ರೋ ರಾತ್ರಿ ತಂದು ಕೆರೆಗೆ ಸುರಿದು ಹೋಗುತ್ತಿದ್ದಾರೆ. ಇದರಿಂದಾಗಿ ಸ್ಥಳದಲ್ಲಿ ನಾಯಿ ಹಾಗೂ ಹದ್ದುಗಳ ಕಾಟ ಹೆಚ್ಚಾಗಿದ್ದು, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಅಧಿಕಾರಿಗಳು, ಮಂತ್ರಿಗಳು ಇಲ್ಲಿಗೆ ಭೇಟಿ ನೀಡುತ್ತಿದ್ದಾಗ ಕೆಲವು ಬಿಬಿಎಂಪಿ ಕಾರ್ಮಿಕರು ದಂಡೆಯ ಮೇಲಿದ್ದ ಕಸವನ್ನು ಕೆರೆಗೆ ನೂಕುತ್ತಿದ್ದು, ಸ್ಥಳಾಂತರ ಮಾಡುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಅಲ್ಲಿ ಬಿದ್ದ ಮಾಂಸವನ್ನು ತಿನ್ನಲು ಹಾವುಗಳು ಬರುತ್ತಿವೆ. ಹೀಗಾಗಿ ನಮಗೆ ಹುಲ್ಲು ಕಟಾವ್ ಮಾಡಲು ಹೆದರಿಕೆ ಆಗುತ್ತಿದೆ. ಕೆರೆಗೆ ಕಸ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವರ್ತೂರು ನಿವಾಸಿ ಲೋಕೇಶ್ ಆಗ್ರಹಿಸಿದ್ದಾರೆ.
ಸ್ಥಳೀಯರಿಗೆ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ. ಕೆರೆಯ ದಂಡೆ ಮಾರ್ಗವಾಗಿ ಸಂಚಾರ ಮಾಡಿದರೆ ಗಬ್ಬುನಾಥಕ್ಕೆ ವಾಂತಿ ಬರುತ್ತದೆ. ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದ್ದು, ತಕ್ಷಣವೇ ಕಸ ತೆರವು ಮಾಡಲು ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv