ಬಿಜೆಪಿಯವರು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ – ಸತೀಶ್ ಜಾರಕಿಹೊಳಿ

Public TV
2 Min Read

ಬೆಳಗಾವಿ: ಬಿಜೆಪಿಯ ಕೆಲವರು ಕಾಂಗ್ರೆಸ್ ಸೇರ್ಪಡೆ ಕುರಿತು ಈಗಾಗಲೇ ಹೈಕಮಾಂಡ್‍ಗೆ ಅಪ್ರೋಚ್ ಮಾಡಿದ್ದಾರೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಕೆಲವರು ಈಗಾಗಲೇ ಕಾಂಗ್ರೆಸ್ ಸೇರ್ಪಡೆ ಕುರಿತು ಹೈಕಮಾಂಡ್ ಸಂಪರ್ಕಿಸಿದ್ದಾರೆ. ಉಪಚುನಾವಣೆಗೆ ಬಿಜೆಪಿಯಲ್ಲಿ ಟಿಕೆಟ್ ಸಿಗದ ಕೆಲವರು ನಮ್ಮ ಹೈಕಮಾಂಡ್ ಜತೆಗೆ ಮಾತುಕತೆ ನಡೆಸಿದ್ದಾರೆ. ಹೈಕಮಾಂಡ್ ಮತ್ತು ನಮ್ಮ ಜತೆಗೆ ಬಿಜೆಪಿಯ ಕೆಲವರು ಸಂಪರ್ಕದಲ್ಲಿದ್ದಾರೆ. ಆಯಾ ಕ್ಷೇತ್ರದ ಆಗುಹೋಗು ನೋಡಿಕೊಂಡು ಪಕ್ಷಕ್ಕೆ ಸೇರಿಸಿಕೊಳ್ಳುವ ಚಿಂತನೆಯಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‍ಗೆ ಬಂದವರಿಗೆ ಹೈಕಮಾಂಡ್ ಟಿಕೆಟ್ ಕೊಡಬಹುದು. ಅವರಿಗೂ ಸಹ ಶಕ್ತಿ ಇರುತ್ತದೆ. ಆದಷ್ಟು ಬೇಗ ಉಪಚುನಾವಣೆಯ ಅಭ್ಯರ್ಥಿ ಆಯ್ಕೆ ಪಟ್ಟಿ ಘೋಷಣೆ ಮಾಡಿ ಎಂದು ಹೇಳಿದ್ದೇವೆ. ಗೋಕಾಕ್ ಉಪಚುನಾವಣೆ ಕುರಿತು ಸಹ ಈಗಾಗಲೇ ಎರಡನೇ ಹಂತದ ಪ್ರಚಾರ ಆರಂಭವಾಗಿದೆ. ಸನ್ನಿವೇಶಕ್ಕೆ ತಕ್ಕಂತೆ ಗೋಕಾಕ್ ಲೂಟಿ ಮಾಡಿದವರ ಕುರಿತು ಹಾಡು ಮಾಡಿದ್ದೇವೆ. ಜನ ಅಳುತ್ತಿದ್ದಾರೆ ಇನ್ನೊಂದು ಕಡೆ ಕೆಲವು ನಗರ ಸಭೆ ಸದಸ್ಯರು, ಮುಖಂಡರು ಸೇರಿ ಲೂಟಿ ಮಾಡುತ್ತಿದ್ದಾರೆ. ಎಂಟು ಸಾವಿರ ಮಣ್ಣಿನ ಟ್ರಿಪ್ ಲೂಟಿ ಮಾಡಿದ್ದಾರೆ ಎಂದು ಕಿಡಿಕಾರಿದರು.

ಪ್ರಚಾರ ಸಭೆಯಲ್ಲಿ ಅಂಬಿರಾವ್ ಪಾಟೀಲ್ ಟಾರ್ಗೆಟ್ ಮಾಡಲಾಗಿದ್ದು, ರಮೇಶ್ ಜಾರಕಿಹೊಳಿ ನಾಮಕಾವಸ್ತೆ, ಎಲ್ಲದರಲ್ಲೂ ಅಂಬಿರಾವ್ ಪಾಟೀಲ್ ಇದ್ದಾರೆ. ಜಾರಕಿಹೊಳಿ ಅಣ್ತಮ್ಮಂದಿರು ಒಂದಿಲ್ಲ ನಾವೆಲ್ಲಾ ಬೇರೆ ಬೇರೆ. ಜಾರಕಿಹೊಳಿ ಅಣ್ತಮ್ಮಂದಿರು ಒಂದೇ ಎನ್ನುತ್ತಾರೆ. ಆದರೆ ಗೋಕಾಕ್‍ನಲ್ಲಿ ವಸ್ತು ಸ್ಥಿತಿ ಬೇರೆ ಇದೆ. ಎಲ್ಲಾ ಒಂದಿದ್ದಾರೆ ಎಂದು ಜನರಲ್ಲಿ ಆ ಭ್ರಮೆ ಇದೆ. ಇದನ್ನು ಹೋಗಲಾಡಿಸಿ, ನಾವು ಒಂದಿಲ್ಲ ಎಂದು ತೋರಿಸಲು ಹೋರಾಟ ನಡೆಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಜನರ ಬಳಿ ಹೋಗಿ ರಮೇಶ್ ಮತ್ತು ನಾವು ಬೇರೆ ಬೇರೆ ಅಂತಾ ಹೇಳುವ ಸರ್ಕಸ್ ಮಾಡುತ್ತಿದ್ದೇವೆ. ರಾಜಕೀಯ ವಿಚಾರದಲ್ಲಿ ನಾನು ರಮೇಶ್ ಒಂದೇ ಅಲ್ಲ. ಯಾವತ್ತಿಂದಲೂ ಭಿನ್ನ. ರಮೇಶ್ ಜಾರಕಿಹೊಳಿ ಅಮೆರಿಕ ಟೂರ್ ಓಡಾಡುತ್ತಿದ್ದಾರೆ. ಜನರ ಸಮಸ್ಯೆ ಕೇಳಬೇಕಿದ್ದ ರಮೇಶ್ ಅಮೆರಿಕಕ್ಕೆ ಹೋಗಿದ್ದಾರೆ. ಹೀಗಾಗಿ ಜನರ ಸಮಸ್ಯೆ ನಾವು ಕೇಳುತ್ತಿದ್ದೇವೆ. ಗೋಕಾಕ್‍ನಲ್ಲಿ ಅಂಬಿರಾವ್ ಮತ್ತು ಅಧಿಕಾರಿಗಳು ನೋಡಿಕೊಳ್ಳುತ್ತಾರೆ. ಗೋಕಾಕ್‍ನ ಕೆಲವು ಅಧಿಕಾರಿಗಳಿಗೆ ವರ್ಗಾವಣೆ ಮಾಡುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ ಎಂದರು.

ಗೋಕಾಕ್‍ನ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಅಂಬಿರಾವ್ ಪಾಟೀಲ್ ರಮೇಶ್ ಅಳಿಯ. ಟೀಮ್ ಅವರದ್ದೇ ಇದೆ ಹೀಗಾಗಿ ಅವರನ್ನು ಗೋಕಾಕ್‍ನಿಂದ ಹೊರ ಹಾಕಬೇಕಿದೆ. ಈಗಾಗಲೇ ಚುನಾವಣಾ ಆಯೋಗ ಜಿಲ್ಲಾಧಿಕಾರಿಗಳಿಂದ ವರದಿ ಕೇಳಿದೆ. ಗೋಕಾಕ್ ನಗರ ಸಭೆಯಲ್ಲಿ ನಡೆದ ಅವ್ಯವಹಾರ ಕುರಿತು ಸಹ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಭ್ರಷ್ಟಾಚಾರದಲ್ಲಿ ತಾಲೂಕು ಪಂಚಾಯತಿ ಇಒ ದಿಂದ ರಮೇಶ್ ಜಾರಕಿಹೊಳಿ ಬೆಂಬಲಿಗರ ಪಾಲಿದೆ. ಗೋಕಾಕ್ ನಲ್ಲಿ ನಡೆದ ಭ್ರಷ್ಟಾಚಾರ ಕುರಿತು ಹಂತ ಹಂತವಾಗಿ ತೆರೆದಿಡುತ್ತೇವೆ ಎಂದು ತಿಳಿಸಿದರು.

ಅಂಬಿರಾವ್ ಪಾಟೀಲ್ ನಿಯಂತ್ರಣ ತಪ್ಪಿಸಲು ನಾವು ಹೋರಾಟ ಮಾಡುತ್ತಿದ್ದೇವೆ. ಗೋಕಾಕ್‍ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಎಲ್ಲರೂ ಪ್ರಚಾರಕ್ಕೆ ಬರಲಿದ್ದಾರೆ ಎಂದು ಇದೇ ವೇಳೆ ಮಾಹಿತಿ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *