ಸೈನಿಕರಿಂದ ಕೃಷ್ಣಜನ್ಮಾಷ್ಟಮಿ ಆಚರಣೆ

Public TV
1 Min Read

ಬೆಳಗಾವಿ: ಸಾವಿರಾರು ಜನರನ್ನು ಪ್ರವಾಹದಲ್ಲಿ ರಕ್ಷಿಸಿದ ಸೈನಿಕರು ಇಂದು ಕೃಷ್ಣ ಜನ್ಮಾಷ್ಟಮಿ ಆಚರಣೆಯಲ್ಲಿ ತೊಡಗಿಕೊಂಡಿದ್ದರು.

ಬೆಳಗಾವಿ ನಗರದಲ್ಲಿರುವ ಮರಾಠಾ ರೆಜಿಮೆಂಟ್‍ನ ಮೈದಾನದಲ್ಲಿ ಕೃಷ್ಣ ಜನ್ಮಾಷ್ಟಮಿಯ ಆಚರಣೆ ನಡೆದಿದೆ. ಕೇವಲ ದೇಶ ಕಾಯುವುದರಲ್ಲಿ ಬ್ಯುಸಿಯಾಗಿರುತ್ತಿದ್ದ ಸೈನಿಕರು ಇಂದು ಫುಲ್ ರಿಲ್ಯಾಕ್ಸ್ ಮೂಡಿನಲ್ಲಿದ್ದರು. ಬೆಳಗಾವಿ ನಗರದ ಕ್ಯಾಂಪ್ ಪ್ರದೇಶದಲ್ಲಿರುವ ಮರಾಠಾ ರೆಜಿಮೆಂಟ್‍ನಲ್ಲಿ ಹೊಸದಾಗಿ ಸೈನ್ಯಕ್ಕೆ ಸೇರುವ ಯುವಕರ ತರಬೇತಿಯಿಂದ ಹಿಡಿದು ದೇಶದಲ್ಲಿ ನಡೆಯುವ ಯುದ್ಧಗಳ ತರಬೇತಿ ಕೂಡ ಇಲ್ಲೇ ಆಗುತ್ತದೆ.

ಈ ಪ್ರದೇಶದಲ್ಲಿ ಇಂದು ಗುಂಡು ಮದ್ದಿನ ಸದ್ದು ಇರಲಿಲ್ಲ ಬದಲಿಗೆ ಡಿಜೆ ಸೌಂಡ್ ಕೇಳಿ ಬರುತ್ತಿತ್ತು. ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಸೈನಿಕರಿಗೆ ಗಡಿಗೆ ಒಡೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಒಂದು ಆಫೀಸರ್ ತಂಡ, ಆಡಳಿತ ವಿಭಾಗ ತಂಡ, ಹೊಸದಾಗಿ ಸೈನ್ಯಕ್ಕೆ ಸೇರಿಕೊಂಡ ಯುವಕರ ತಂಡ ಹೀಗೆ ಮೂರು ತಂಡಗಳನ್ನು ಮಾಡಿ ಗಡಿಗೆ ಒಡೆಯಲು ಕಾಲಾವಕಾಶ ನಿಗದಿ ಮಾಡಲಾಗಿತ್ತು.

ಆರಂಭದಲ್ಲಿ ಮೂರು ತಂಡಗಳು ಗಡಿಗೆ ಒಡೆಯುವ ಮಾದರಿಯಲ್ಲೇ ಒಬ್ಬರ ಮೇಲೊಬ್ಬರು ಹತ್ತಿ ಸೆಲ್ಯೂಟ್ ಹೊಡೆದು ಗೌರವ ಸಲ್ಲಿಸಿದರು. ಇದಾದ ಬಳಿಕ ಡಿಜೆ ಸಾಂಗ್ ಹಾಕಿ ಕೇಸರಿನಲ್ಲಿ ನಿಂತು ಒಬ್ಬರ ಮೇಲೊಬ್ಬರು ಹತ್ತುತ್ತಾ ಗಡಿಗೆ ಒಡೆಯುವ ಪ್ರಯತ್ನ ಮಾಡಿದರು. ಇದೇ ಸಂದರ್ಭದಲ್ಲಿ ಉಳಿದ ವಿರೋಧಿ ತಂಡದವರು ಅವರಿಗೆ ಜೋರಾಗಿ ನೀರು ಎರಚಿ ಕೆಡವುವ ಪ್ರಯತ್ನ ಮಾಡಿ ಯಶಸ್ವಿಯಾದರು. ಇದಾದ ಬಳಿಕ ಮತ್ತೊಂದು ರೌಂಡ್ ನಲ್ಲಿ ಆಫೀಸರ್ಸ್ ತಂಡ ಗಡಿಗೆ ಒಡೆಯವುದರಲ್ಲಿ ಯಶಸ್ವಿಯಾದರು.

ಮೊಸರಿನ ಗಡಿಗೆ ಒಡೆದ ತಂಡಕ್ಕೆ ಬಹುಮಾನ ನೀಡಿ ಗೌರವಿಸಿದರು. ಇದಾದ ಬಳಿಕ ಎಲ್ಲ ಸೈನಿಕರು ಸೇರಿಕೊಂಡು ಅದೇ ಕೆಸರಿನಲ್ಲಿ ಸಖತ್ ಸ್ಟೆಪ್ಸ್ ಹಾಕಿ ಎಂಜಾಯ್ ಕೂಡ ಮಾಡಿದರು. ಕಾರ್ಯಕ್ರಮಕ್ಕೆ ಸೈನಿಕರ ಕುಟುಂಬ ಆಗಮಿಸಿ ಅವರು ಕೂಡ ಸಂಭ್ರಮದಲ್ಲಿ ಭಾಗಿಯಾದರು. ಕಳೆದ 15 ದಿನಗಳ ಹಿಂದಷ್ಟೇ ಬೆಳಗಾವಿ, ಬಾಗಲಕೋಟೆ ಜಿಲ್ಲೆಯಲ್ಲಿನ ಪ್ರವಾಹಕ್ಕೆ ಸಿಕ್ಕ ಸಾವಿರಾರು ಜನರನ್ನು ಇಲ್ಲಿನ ಸೈನಿಕರೇ ಕಾರ್ಯಾಚರಣೆ ಮಾಡಿ ರಕ್ಷಿಸಿ ಬಂದಿದ್ದರು. ಇಂತಹ ಹೆಮ್ಮೆಯ ಸೈನಿಕರು ಇಂದು ದೇವರ ನಾಮಸ್ಮರಣೆ ಜೊತೆಗೆ ಕೊಂಚ ರಿಲ್ಯಾಕ್ಸ್ ಆಗಿ ಕಾಲ ಕಳೆದರು.

Share This Article
Leave a Comment

Leave a Reply

Your email address will not be published. Required fields are marked *