ಸಿದ್ದರಾಮಯ್ಯಗೆ ಜನ ಗೃಹಬಂಧನದ ಶಿಕ್ಷೆ ಕೊಟ್ಟಿದ್ದಾರೆ: ಸೊಗಡು ಶಿವಣ್ಣ

Public TV
1 Min Read

ತುಮಕೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಈ ನಾಡಿನ ಜನ ಉಪಚುನಾವಣೆಯಲ್ಲಿ ತಿರಸ್ಕರಿಸುವ ಮೂಲಕ ಗೃಹ ಬಂಧನ ಶಿಕ್ಷೆ ಕೊಟ್ಟಿದ್ದಾರೆ. ಮಾನ ಮರ್ಯಾದೆ ಇದ್ದರೆ ಸಿಎಂ ಸಿದ್ದರಾಮಯ್ಯ ಕೇವಲ ರಾಜೀನಾಮೆ ಕೊಡುವುದಷ್ಟೇ ಅಲ್ಲ ಈ ನಾಡಿನ ಜನರ ಕ್ಷಮೆ ಕೇಳಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಸಿದ್ದರಾಮಯ್ಯ ಮಾತೆತ್ತಿದರೆ ಯಡಿಯೂರಪ್ಪ ಜೈಲಿಗೆ ಹೋದವರು ಎಂದು ಪದೇ ಪದೇ ಅವಹೇಳ ಮಾಡುತ್ತಿದ್ದರು. ಇವರೇ ಪಿತೂರಿ ಮಾಡಿ ಜೈಲಿಗೆ ಕಳುಹಿಸಿ ಬಳಿಕ ಟೀಕೆ ಮಾಡುತ್ತಿದ್ದರು. ಯಡಿಯೂರಪ್ಪಗೆ ಮಾಡಿದ್ದ ಅವಮಾನಕ್ಕೆ ಜನರು ಸಿದ್ದರಾಮಯ್ಯರಿಗೆ ತಕ್ಕ ಶಿಕ್ಷೆ ಕೊಟ್ಟಿದ್ದಾರೆ ಎಂದು ಸೊಗಡು ಗುಡುಗಿದ್ದಾರೆ. ಇದನ್ನೂ ಓದಿ: ಸಿಎಲ್‍ಪಿ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

ದುರಹಂಕಾರಿ ಸಿದ್ದರಾಮಯ್ಯ ಹೋಗಬೇಕು ಎಂದು ಕರ್ನಾಟಕದ ಜನ ಯಡಿಯೂರಪ್ಪ ಪರ ತೀರ್ಪು ಕೊಟ್ಟಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ಕೊಡುವುದರ ಜೊತೆಗೆ ಯಡಿಯೂರಪ್ಪ ಹಾಗೂ ನಾಡಿನ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ವಿಧಾನ ಸೌಧದಲ್ಲಿ ತೊಡೆ ತಟ್ಟುತ್ತಾರೆ. ಪೈಲ್ವಾನರ ರೀತಿ ನಡೆದು ಕೊಳ್ತಾರೆ ನಾನೇ ಧೀರ ಶೂರ ಎಂದು ಮೆರೆಯುತ್ತಿದ್ದರು. ಜನರ ತೀರ್ಪಿಗಿಂತ ಹೆಚ್ಚಿನ ಶಿಕ್ಷೆ ಬೇಕೆ ಎಂದು ಸೊಗಡು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ

ಇನ್ನೂ ಮೂರೂವರೆ ವರ್ಷ ಮುಖ ತೋರಿಸದೇ ಗೃಹ ಬಂಧನದಲ್ಲಿ ಇರುವಂತೆ ನಾಡಿನ ಜನತೆ ಸಿದ್ದರಾಮಯ್ಯಗೆ ತಕ್ಷ ಶಿಕ್ಷೆ ನೀಡಿದ್ದಾರೆ. ಯಡಿಯೂರಪ್ಪ ಹಾಗೂ ಬಿಜೆಪಿ ವಿರುದ್ಧ ಮಾತನಾಡುವಾಗ ಸಿದ್ದರಾಮಯ್ಯರ ಹಾವಭಾವ ಅಸಹ್ಯ ಹುಟ್ಟಿಸುವಂತಿರುತಿತ್ತು. ಅದನ್ನೆಲ್ಲಾ ಅರಿತ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದು ಗರಂ ಆದರು.

ಸಿದ್ದರಾಮಯ್ಯರ ದಬ್ಬಾಳಿಕೆ ಕಾಂಗ್ರೆಸ್ ಹಿರಿಯ ನಾಯಕರ ಮೇಲೂ ನಡೆದಿದೆ. ಕಾಂಗ್ರೆಸ್ಸಿನ ಹಿರಿಯ ನಾಯಕರೆಲ್ಲರೂ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದಕ್ಕೆಲ್ಲಾ ಅವರ ದುರಹಂಕಾರವೇ ಕಾರಣ ಎಂದು ಗುಡುಗಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *