ಮೀನೂಟ ತಿಂದುಬಂದ ಸಿಎಂ, ಉಪವಾಸದಲ್ಲೇ ಧರ್ಮಸ್ಥಳಕ್ಕೆ ಬಂದ ಮೋದಿ!

Public TV
1 Min Read

ಮಂಗಳೂರು/ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮೋದಿ ಭೇಟಿಯ ಬೆನ್ನಲ್ಲೇ ಇದೀಗ ಕರಾವಳಿ ಕರ್ನಾಟಕ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಶುರುವಾಗಿದೆ.

ಹೌದು. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು. ಆದ್ರೆ ಅವರು ಮೀನು ಊಟ ಸೇವಿಸಿ ಬಳಿಕ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದರು ಎಂದು ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆದ್ರೆ ಈ ಕುರಿತು ಸಿಎಂ ಪ್ರತಿಕ್ರಿಯಿಸಿ, ದೇವರು ಮಾಂಸಾಹಾರ ತಿಂದು ಬರಬೇಡ ಅಂತ ಎಲ್ಲೂ ಹೇಳಿಲ್ಲ ಎಂದು ಬೇಡರ ಕಣ್ಣಪ್ಪನ ಉದಾಹರಣೆ ಕೊಟ್ಟು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು.

ಇದೀಗ ಇಂದು ಪ್ರಧಾನಿ ನರೇಂದ್ರ ಮೋದಿಯವರು ಕೂಡ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದು, ಆದ್ರೆ ಅವರು ಪೂಜೆ ಮುಗಿಯುವವರೆಗೆ ಉಪವಾಸವಿದ್ದರು. ಅಲ್ಲದೇ ಪೂಜೆಯ ವೇಳೆ ಪಂಚೆ, ಶಲ್ಯ ಧರಿಸಿದ್ದರು. ಪೂಜೆಯ ಬಳಿಕ ಫಲಹಾರ ಸೇವಿಸಿ ಅಲ್ಲಿಂದ ಉಜಿರೆಯಲ್ಲಿ ನಡೆಯುತ್ತಿರೋ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ, ಮೋದಿ ಧರ್ಮಸ್ಥಳ ಭೇಟಿಯ ಪರ-ವಿರೋಧಗಳು ಇದೀಗ ಆರಂಭವಾಗಿದೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮೋದಿ ಹಾಗೂ ಸಿಎಂ ದೇವಸ್ಥಾನಕ್ಕೆ ಭೇಟಿ ನೀಡಿರುವ ರೀತಿಯ ಕುರಿತು ತೀವ್ರ ಚರ್ಚೆಗಳಾಗುತ್ತಿವೆ. ಉಪವಾಸ ಮಾಡಿ ದರ್ಶನ ಪಡೆದ ಮೋದಿ ಹಾಗು ಮೀನೂಟ ಸೇವಿಸಿ ದೇವಾಲಯದೊಳಗೆ ಪ್ರವೇಸಿದ ಸಿಎಂ, ಇವರಲ್ಲಿ ಯಾರು ಸಂಸ್ಕಾರವಂತರು ಎಂಬುವುದರ ಕುರಿತು ಭಾರೀ ಚರ್ಚೆಗಳಾಗುತ್ತಿವೆ.

ಇನ್ನು ಈ ಸಂಬಂಧ ಬೆಂಗಳೂರಿನ ಎಲ್‍ಎಎಲ್ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರವಿಂದ ಲಿಂಬಾವಳಿ, ಪ್ರಧಾನಿ ಮೋದಿ ನಿಜವಾದ ಜನಸೇವಕ. ಅವರು ಧರ್ಮಸ್ಥಳ ಮಂಜುನಾಥನ ದರ್ಶನಕ್ಕಾಗಿ ದೆಹಲಿಯಿಂದಲೇ ಏನೂ ತಿನ್ನದೆ ಉಪವಾಸ ಬಂದಿದ್ರು. ಧರ್ಮಸ್ಥಳದ ಮಂಜುನಾಥಸ್ವಾಮಿ ದರ್ಶನವಾದ ಬಳಿಕವೇ ಪ್ರಧಾನಿ ಮೋದಿಯವರು ಉಪಹಾರ ಸೇವಿಸಿದ್ರು. ರಾಜ್ಯದ ಮುಖ್ಯಮಂತ್ರಿಗಳು ಏನು ಮಾಡಿದ್ರು ಅಂತ ನಿಮಗೆಲ್ಲಾ ತಿಳಿದಿದೆ. ಇದು ನಮ್ಮ ಪ್ರಧಾನಿ ಹಾಗೂ ರಾಜ್ಯದ ಮುಖ್ಯಮಂತ್ರಿಗಿರುವ ವ್ಯತ್ಯಾಸ ಅಂತ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *