ಜಿಲ್ಲಾಡಳಿತ, ಸರ್ಕಾರಕ್ಕೆ ದಿಡ್ಡಳ್ಳಿ ಆದಿವಾಸಿಗಳಿಂದ ಶಾಕ್!

Public TV
1 Min Read

– ಪೊಲೀಸ್ರು ಬಂದ್ರೆ ಸಾಮೂಹಿಕ ಆತ್ಮಹತ್ಯೆಯ ಎಚ್ಚರಿಕೆ

ಮಡಿಕೇರಿ: ಕಳೆದ 5 ತಿಂಗಳಿನಿಂದ ಬಗೆಹರಿಯದೆ ಕಗ್ಗಂಟಾಗಿದ್ದ ದಿಡ್ಡಳ್ಳಿ ವಿವಾದ ಜಿಲ್ಲಾಧಿಕಾರಿಗಳ ಸಂಧಾನ ಸಭೆಯ ಬಳಿಕ ಮುಗಿಯಿತು ಎನ್ನುವಷ್ಟರಲ್ಲಿ ಮತ್ತೆ ಭುಗಿಲೆದ್ದಿದೆ. ಇದ್ದಕ್ಕಿದ್ದಂತೆ ರಾತ್ರಿ ಬೆಳಗಾಗೋದ್ರೊಳಗೆ ದಿಡ್ಡಳ್ಳಿಯಲ್ಲಿ ಅರಣ್ಯ ಇಲಾಖೆ ಈ ಹಿಂದೆ ತೆರವುಗೊಳಿಸಿದ್ದ ಸ್ಥಳದಲ್ಲಿ ನೂರಾರು ಗುಡಿಸಲುಗಳು ತಲೆ ಎತ್ತಿದ್ದು, ಜಿಲ್ಲಾಡಳಿತ ಅರಣ್ಯ ಇಲಾಖೆ ಹಾಗೂ ಸರ್ಕಾರಕ್ಕೆ ಶಾಕ್ ನೀಡಿದೆ.

ಕಳೆದ ಡಿಸೆಂಬರ್ 7ರಂದು ದಿಡ್ಡಳ್ಳಿ ವ್ಯಾಪ್ತಿಯ ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗದಲ್ಲಿ ತಲೆ ಎತ್ತಿದ್ದ ನೂರಾರು ಆದಿವಾಸಿ ಜನರ ಗುಡಿಸಲುಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಪೊಲೀಸರ ಸಹಕಾರ ಪಡೆದು ತೆರವು ಮಾಡಿದ್ದರು. ಬಳಿಕ ನಿರಾಶ್ರಿತರಾಗಿ ತೆರವು ಮಾಡಿದ ಸ್ಥಳದ ರಸ್ತೆ ಬದಿಯಲ್ಲೇ ಕಳೆದ 5 ತಿಂಗಳಿಂದ ಬದುಕು ಕಟ್ಟಿಕೊಂಡಿದ್ದ ಆದಿವಾಸಿ ಜನರು ಭೂಮಿ ಮತ್ತು ವಸತಿಗೆ ಆಗ್ರಹಿಸಿ ನಿರಂತರ ಹೋರಾಟ ನಡೆಸಿದ್ದರು.

ಹೋರಾಟದ ಫಲವಾಗಿ ಜಿಲ್ಲಾಡಳಿತ ಜಿಲ್ಲೆಯ 3-4 ಕಡೆಗಳಲ್ಲಿ ದಿಡ್ಡಳ್ಳಿ ನಿರಾಶ್ರಿತರಿಗೆಂದು ಭೂಮಿ ಗುರುತಿಸಿತ್ತು. ಆದರೆ ದಿಡ್ಡಳ್ಳಿಯಲ್ಲಿಯೇ ನಿವೇಶನ ನೀಡಬೇಕು. ಬೇರೆಡೆ ನೀಡುವುದಾದರೆ 4 ಏಕರೆ ಭೂಮಿಯನ್ನು ಪ್ರತೀ ಕುಟುಂಬಕ್ಕೆ ಕೊಡಬೇಕು ಎಂದು ಜಿಲ್ಲಾಡಳಿತ ಗುರುತಿಸಿದ್ದ ಸ್ಥಳಕ್ಕೆ ತೆರಳಲು ನಿರಾಕರಿಸಿದ್ದರು. ಈ ಹಿನ್ನಲೆ ದಿಡ್ಡಳ್ಳಿ ಆದಿವಾಸಿ ಜನರು ಹಾಗೂ ಜಿಲ್ಲಾಡಳಿತದ ನಡುವೆ ಹಗ್ಗಜಗ್ಗಾಟ ಏರ್ಪಟ್ಟಿತ್ತು.

ಕೊನೆಗೆ ಜಿಲ್ಲಾಧಿಕಾರಿಗಳು ಏ.28ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಜಿಲ್ಲಾಡಳಿತ ಗುರುತಿಸಿದ್ದ ಸ್ಥಳಗಳಿಗೆ ತೆರಳಲು ಆದಿವಾಸಿ ಜನರು ಒಪ್ಪಿಗೆ ಸೂಚಿಸಿದ್ದರು. ಪರಿಣಾಮ ದಿಡ್ಡಳ್ಳಿ ಹೋರಾಟ ಸುಖಾಂತ್ಯ ಕಂಡಿದೆ ಎಂದೇ ಹೇಳಲಾಗಿತ್ತು. ಆದರೆ ಕಳದೆ ಮೂರು ದಿನಗಳಿಂದ 500 ಕ್ಕೂ ಅದಿಕ ಆದಿವಾಸಿಗಳು ಈ ಹಿಂದೆ ಅರಣ್ಯದೊಳಗೆ ನಿರ್ಮಿಸಿಕೊಂಡಿದ್ದ ಜಾಗದಲ್ಲಿ ಮತ್ತೆ ಗುಡಿಸಲು ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ಆದಿವಾಸಿಗಳು ದಿಡ್ಡಳ್ಳಿಯಲ್ಲಿಯೇ ಜಾಗ ನೀಡಬೇಕು ಒಂದು ವೇಳೆ ತೆರವು ಮಾಡಲು ಅರಣ್ಯಧಿಕಾರಿಗಳು ಮತ್ತು ಪೊಲೀಸರು ಬಂದರೆ ನಾವು ಸಾಮೂಹಿಕವಾಗಿ ಆಹ್ಮಹತ್ಯೆ ಮಾಡಿಕೊಳ್ಳುವುದಾಗಿ ಹಾಡಿಯ ನಿವಾಸಿ ಮಾರ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *