ಬೆಂಗಳೂರು: ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರ (Aland Assembly Constituency) ಹಾಗೂ ಬೆಂಗಳೂರಿನ ಮಹದೇವಪುರ ಕ್ಷೇತ್ರ ಸೇರಿದಂತೆ ರಾಜ್ಯದ ಎಲ್ಲಾ ಮತಗಳ್ಳತನ ಪ್ರಕರಣಗಳನ್ನ ತನಿಖೆ ನಡೆಸಲು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (SIT) ರಚನೆ ಮಾಡಿ ಆದೇಶ ಹೊರಡಿಸಿದೆ.
ಸಿಐಡಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಬಿ.ಕೆ ಸಿಂಗ್ ಅವರ ನೇತೃತ್ವದಲ್ಲಿ ಸರ್ಕಾರ ಎಸ್ಐಟಿ ರಚನೆ ಮಾಡಿದೆ. ಬಿಕೆ ಸಿಂಗ್ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿರಲಿದ್ದು, ಸಿಸಿಡಿ, ಸಿಐಡಿ ಅಧೀಕ್ಷಕ ಸೈದುಲು ಅದಾವತ್ ಹಾಗೂ ಎಸ್ಇಡಿ, ಸಿಐಡಿ ಅಧೀಕ್ಷಕಿ ಶುಭಾನ್ವಿತ ಅವರು ತಂಡದಲ್ಲಿ ಇರಲಿದ್ದಾರೆ. ಇದನ್ನೂ ಓದಿ: ಆಳಂದ ಫೈಲ್ಸ್ | ಆನ್ಲೈನ್ನಲ್ಲಿ ಮತ ಅಳಿಸಲು ಸಾಧ್ಯವಿಲ್ಲ – ಇಂಚಿಚು ವಿವರ ನೀಡಿದ ಚುನಾವಣಾ ಆಯೋಗ
ಸರ್ಕಾರದ ಆದೇಶದಲ್ಲಿ ಏನಿದೆ?
2023 ರಲ್ಲಿ ಕಲಬುರಗಿ ಜಿಲ್ಲೆಯ ಆಳಂದ (Aland) ವಿಧಾನಸಭಾ ಕ್ಷೇತ್ರದಲ್ಲಿ ಮತಗಳನ್ನು ಅಳಿಸಲು ಕೆಲವು ವಿಫಲ ಪ್ರಯತ್ನಗಳನ್ನು ಮಾಡಲಾಗಿತ್ತು. ಈ ವಿಷಯದ ಬಗ್ಗೆ ತನಿಖೆ ನಡೆಸಲು ಚುನಾವಣಾ ಆಯೋಗದಿಂದಲೇ ಎಫ್ಐಆರ್ ದಾಖಲಿಸಲಾಗಿದೆ. 2023ರ ಫೆಬ್ರವರಿ 21ರಂದು ನೀಡಿದ ದೂರಿನ ಮೇರೆಗೆ ಆಳಂದ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 182, 419, 464, 465 ರಂತೆ ಪ್ರಕರಣ (ಮೊಕದ್ದಮೆ ಸಂಖ್ಯೆ: 26/2023) ದಾಖಲಾಗಿದೆ. ಈ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಗೂ ರಾಜ್ಯದ ಇತರೇ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಹಾಗೂ ದಾಖಲಾಗಬಹುದಾದ ಇತರೇ ಪ್ರಕರಣಗಳ ಸಮಗ್ರ ತನಿಖೆ ನಡೆಸಲು ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ. ಅದಕ್ಕಾಗಿ ಸಿಐಡಿ ಪೊಲೀಸ್ ಮಹಾ ನಿರ್ದೇಶಕರಾದ ಬಿ.ಕೆ ಸಿಂಗ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನ ರಚಿಸಲಾಗಿದೆ. ಇದನ್ನೂ ಓದಿ: ಸಾಫ್ಟ್ವೇರ್ ಬಳಸಿ ಆಳಂದದಲ್ಲಿ 6018 ಮತದಾರರು ಡಿಲೀಟ್: ರಾಹುಲ್ ಗಾಂಧಿ ಬಾಂಬ್
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ – 2023ರ ಕಲಂ 2(ಯು) ಅಡಿಯಲ್ಲಿ ತನಿಖಾ ತಂಡಕ್ಕೆ ಪೊಲೀಸ್ ಠಾಣಾಧಿಕಾರ ನೀಡಲಾಗಿದೆ. ಈ ಎಸ್ಐಟಿ ತಂಡಕ್ಕೆ ಆಳಂದ ಪ್ರಕರಣ ಸೇರಿದಂತೆ ರಾಜ್ಯದ ಇತರೇ ಪೊಲೀಸ್ ಠಾಣೆಗಳಲ್ಲೂ ದಾಖಲಾಗಿರುವ ಹಾಗೂ ದಾಖಲಾಗುವ ಎಲ್ಲಾ ಕ್ರಿಮಿನಲ್ ಪ್ರಕರಣಗಳನ್ನು ತನಿಖೆ ನಡೆಸುವ ಜವಾಬ್ದಾರಿ ನೀಡಲಾಗಿದೆ. ಆದ್ದರಿಂದ ಡಿಜಿ & ಐಜಿಪಿ ಈ ವಿಶೇಷ ತನಿಖಾ ತಂಡಕ್ಕೆ ಅವಶ್ಯಕವಿರುವ ಇತರೇ ಅಧಿಕಾರಿ ಅಥವಾ ಸಿಬ್ಬಂದಿಗಳನ್ನು ಒಸಗಿಸುವಂತೆ ಆದೇಶದಲ್ಲಿ ತಿಳಿಸಿದೆ.
ಅದರಂತೆ ತನಿಖಾ ತಂಡವು ಎಲ್ಲಾ ಆಮಾಯಗಳಲ್ಲಿ ಪ್ರಕರಣಗಳ ಸಮಗ್ರ ತನಿಖೆ ಕೈಗೊಂಡು, ಶೀಘ್ರದಲ್ಲೇ ತನಿಖೆಯನ್ನು ಪೂರ್ಣಗೊಳಿಸಬೇಕು. ಬಳಿಕ ತನಿಖಾ ವರದಿಯನ್ನು ಸಕ್ಷಮ ನ್ಯಾಯಾಲಯಗಳಿಗೆ ಸಲ್ಲಿಸಬೇಕು ಎಂದು ಸೂಚನೆ ನೀಡಿದೆ. ಇದನ್ನೂ ಓದಿ: ರಾಹುಲ್ ಆರೋಪಿಸಿದಂತೆ ಆನ್ಲೈನಿನಲ್ಲಿ ಮತ ಅಳಿಸಲು ಸಾಧ್ಯವಿಲ್ಲ: ಚುನಾವಣಾ ಆಯೋಗ