ಸಾಲ ಪಡೆದಿದ್ದ ಹಣ ಮರಳಿ ಕೊಡದಿದ್ದಕ್ಕೆ ಸ್ವಂತ ಅಕ್ಕ, ಭಾವನಿಂದ ತಂಗಿ-ಮೈದುನನ ಕಿಡ್ನ್ಯಾಪ್

1 Min Read

ಬೆಂಗಳೂರು: ಸ್ವಂತ ಅಕ್ಕ-ಭಾವನಿಂದಲೇ ತಂಗಿ-ಮೈದುನನ ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಿದ ಆರೋಪ ಬೆಂಗಳೂರಿನ ಚಂದ್ರಾ ಲೇಔಟ್‌ನಲ್ಲಿ (Chandra Layout) ನಡೆದಿದೆ.

ಅಕ್ಕ ಪ್ರಫುಲ್ಲಾ ಎಂಬಾಕೆಯಿಂದ ತಂಗಿ ಪೃಥ್ವಿ ಎಂಬಾಕೆ 9.5 ಲಕ್ಷ ರೂ. ಸಾಲ ಪಡೆದಿದ್ದಳು. 5 ಲಕ್ಷ ಸಾಲ ಹಿಂತಿರುಗಿಸಿದ್ದು, ಇನ್ನು 4.5 ಲಕ್ಷ ರೂ. ಬಾಕಿ ನೀಡಬೇಕಿತ್ತು. ಈ ಸಾಲದ ಹಣಕ್ಕಾಗಿ ಅಕ್ಕನಿಂದ ತನ್ನ ತಂಗಿಯನ್ನ ಕಿಡ್ನ್ಯಾಪ್ ಜೊತೆಗೆ ಹಲ್ಲೆ ಆರೋಪ ಕೇಳಿಬಂದಿದೆ. ಕಳೆದ ಎರಡು ದಿನದ ಹಿಂದೆ ಅಕ್ಕ ಪ್ರಫುಲ್ಲಾ, ಭಾವ ಸಲೀಮ್ ಶೇಖ್ ಹಾಗೂ ಸಹಚರ ಬೀರೇಶ್ ಸೇರಿ ಹಲವರು ಹೆಬ್ಬಗೋಡಿ ಪೃಥ್ವಿ ಮನೆಗೆ ನುಗ್ಗಿ ದಂಪತಿ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಪೊಲೀಸ್ ಠಾಣೆಗೆ ಹೋಗೋಣ ಎಂದು ಮನೆಗೆ ಕರೆದೊಯ್ದು ಹಲ್ಲೆ ಮಾಡಿದ್ದಾರೆ. ಅಲ್ಲದೇ ಪೊಲೀಸರಿಗೆ ದೂರು ಕೊಟ್ಟರೆ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ.

ಕಿಡ್ನ್ಯಾಪ್ ಆದ ಮಾಹಿತಿ ತಿಳಿದ ಪೃಥ್ವಿ ಸಹೋದರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಲ್ಲೆಗೊಳಗಾದ ಪೃಥ್ವಿ ಹಾಗೂ ಪತಿ ಅಭಿತೇಜ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಿದ ಅಕ್ಕ ಪ್ರಫುಲ್ಲಾ, ಭಾವ ಸಲೀಮ್ ಶೇಖ್ ಹಾಗೂ ಸಹಚರ ಬೀರೇಶ್‌ನನ್ನ ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share This Article