ಪತ್ರಕರ್ತನ ಹತ್ಯೆ ಕೇಸ್- ಗುರ್ಮಿತ್ ಬಾಬಾ ದೋಷಿ

Public TV
1 Min Read

ಚಂಡೀಗಢ: ಪತ್ರಕರ್ತರೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡೇರಾ ಸಚ್ಛಾ ಸೌಧ ಮುಖ್ಯಸ್ಥ ಗುರ್ಮೀತ್ ಬಾಬಾ ರಹೀಂ ಸಿಂಗ್ ಸೇರಿದಂತೆ ನಾಲ್ವರು ದೋಷಿಗಳೆಂದು ಸಿಬಿಐ ವಿಶೇಷ ನ್ಯಾಯಾಲಯವು ತೀರ್ಪು ನೀಡಿದೆ.

ದೋಷಿಯಾಗಿರುವ ಅಪರಾಧಿಗಳಿಗೆ ಜನವರಿ 17ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಾಗುತ್ತದೆ ಎಂದು ಸಿಬಿಐ ಕೋರ್ಟ್ ತಿಳಿಸಿದೆ.

ಪಂಜಾಬ್‍ನ ಸಿರ್ಸಾ ಮೂಲದ ಪತ್ರಕರ್ತ ರಾಮಚಂದ್ರ ಛತ್ರಪತಿ ಅವರನ್ನು 2002ರ ಅಕ್ಟೋಬರ್ ನಲ್ಲಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಒಂದು ವರ್ಷದ ಬಳಿಕ 2003ರಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ 2006ರಲ್ಲಿ ತನಿಖೆಯನ್ನು ಸಿಬಿಐಗೆ ಒಪ್ಪಿಸಲಾಗಿತ್ತು. ಈ ಮೂಲಕ ತನಿಖೆ ನಡೆಸಿದ ಸಿಬಿಐ ರಾಮಚಂದ್ರ ಛತ್ರಪತಿ ಕೊಲೆಯಾದ 16 ವರ್ಷಗಳ ಬಳಿಕ ನ್ಯಾಯ ದೊರಕಿಸಿಕೊಟ್ಟಿದೆ.

ಕೊಲೆ ಮಾಡಿದ್ದು ಯಾಕೆ?
ಪಂಜಾಬ್‍ನ ಸಿರ್ಸಾದಲ್ಲಿರುವ ಡೇರಾ ಸಚ್ಛಾ ಸೌಧದ ಮುಖ್ಯಕಚೇರಿಯಲ್ಲಿ ರಾಮ್ ರಹೀಮ್ ಬಾಬಾ ಮಹಿಳೆಯರನ್ನು ಲೈಂಗಿಕ ಕ್ರಿಯೆಗೆ ಬಳಿಸಿಕೊಳ್ಳುತ್ತಿದ್ದ. ಈ ಕುರಿತು ರಾಮಚಂದ್ರ ಛತ್ರಪತಿ ಅವರು ತಮ್ಮ ಪತ್ರಿಕೆಯಲ್ಲಿ ಸುದ್ದಿಯನ್ನು ಪ್ರಕಟಿಸಿದ್ದರು. ಈ ಸುದ್ದಿಯನ್ನು ನೋಡಿದ್ದ ರಾಮ್ ರಹೀಮ್ ಬಾಬಾ ಹಾಗೂ ಆತನ ಸಹಚರರು 2002ರ ಅಕ್ಟೋಬರ್ ನಲ್ಲಿ ರಾಮಚಂದ್ರ ಛತ್ರಪತಿ ಅವರನ್ನು ಕೊಲೆಗೈದ ವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿತ್ತು.

ಈಗಾಗಲೇ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಡೇರಾ ಸಚ್ಛಾ ಸೌಧ ಮುಖ್ಯಸ್ಥ ಬಾಬಾ ರಾಮ್ ರಹೀಂ 20 ವರ್ಷ ಜೈಲು ಶಿಕ್ಷೆಯಲ್ಲಿದ್ದಾನೆ. ಅತ್ಯಾಚಾರ ಪ್ರಕರಣದ ಕುರಿತು ಆಗಸ್ಟ್ 2017ರಲ್ಲಿ ವಿಚಾರಣೆ ನಡೆಸಿದ ಪಂಚಕುಲಾದ ಸಿಬಿಐ ಕೋರ್ಟ್ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *