ಹಣದ ಹಿಂದೆ ಬಿದ್ದಿದ್ದ, ಚಿನ್ನ ಮಾರಿ ಮನೆ ಖರೀದಿಸಿ ಹೊರ ಹಾಕ್ದ: ಗಾಯಕಿ ಸುಶ್ಮಿತಾ ತಾಯಿ

Public TV
2 Min Read

ಬೆಂಗಳೂರು: ಖ್ಯಾತ ಗಾಯಕಿ ಸುಶ್ಮಿತಾ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ತಾಯಿ ಪ್ರತಿಕ್ರಿಯಿಸಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸುಶ್ಮಿತಾ ಅವರ ತಾಯಿ, ಎಲ್ಲರೂ ಸೇರಿ ನನ್ನ ಮಗಳನ್ನು ಪ್ಲಾನ್ ಮಾಡಿ ಕೊಲೆ ಮಾಡಿದ್ದಾರೆ. 150 ಗ್ರಾಂ ಚಿನ್ನ ಕೊಟ್ಟು ನಾನು ನನ್ನ ಮಗಳ ಮದುವೆ ಮಾಡಿಸಿದ್ದೆ. ಆದರೆ ಶರತ್ ಆ ಚಿನ್ನವನ್ನು ಮಾರಿ ತನ್ನ ಹೆಸರಿನಲ್ಲಿ ಮನೆಯನ್ನು ಖರೀದಿಸಿದ್ದಾನೆ. ಬಳಿಕ ನನ್ನ ಮಗಳಿಗೆ ಮನೆಯಿಂದ ಹೊರ ಹೋಗು ಎಂದು ಬಲವಂತ ಮಾಡುತ್ತಿದ್ದನು. ಶರತ್ ಹಣದ ಹಿಂದೆ ಬಿದ್ದಿದ್ದನು. ನನ್ನ ಮಗಳಿಗೆ ಪ್ರೀತಿ ನೀಡಿಲ್ಲ. ಆಕೆಗೆ ಏನೂ ಕೊಡಿಸಲಿಲ್ಲ. ನನ್ನ ಮಗಳು ಬೇರೆ ಬೇರೆ ಶಾಲೆಯಲ್ಲಿ ಮ್ಯೂಸಿಕ್ ಟೀಚರ್ ಆಗಿ ಕೆಲಸ ಮಾಡುತ್ತಿದ್ದಳು. ಆಕೆಗೆ 45 ಸಾವಿರ ರೂ. ಸಂಬಳ ಬರುತ್ತಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ‘ಅಮ್ಮಾ, ನನ್ನ ಪತಿಯನ್ನು ಸುಮ್ಮನೆ ಬಿಡಬೇಡ’ – ಖ್ಯಾತ ಗಾಯಕಿ ಸುಶ್ಮಿತಾ ಆತ್ಮಹತ್ಯೆ

ಶರತ್ ನನ್ನ ಮಗಳಿಗೆ ಯಾವುದೋ ಮಾತ್ರೆಗಳನ್ನು ನೀಡುತ್ತಿದ್ದನು. ಅಲ್ಲದೆ ಆಕೆಗೆ ನೀನು ಮಗುವಿನ ಆಸೆ ಇಟ್ಟುಕೊಳ್ಳಬೇಡ ಎಂದು ಹೇಳಿದ್ದನಂತೆ. ನನ್ನ ಮಗಳು ಸಾವನ್ನಪ್ಪಿದ್ದಾಳೆ ಎಂಬ ವಿಷಯ ಶರತ್ ಕುಟುಂಬಸ್ಥರಿಗೆ ತಿಳಿಸಿದರೆ, ಅವಳು ಬದುಕಿದ್ದಾಳಾ, ಸತ್ತಿದ್ದಾಳಾ ಎಂದು ಶರತ್ ದೊಡ್ಡಮ್ಮ ಕೇಳಿದ್ದಾರೆ. ನಾನು ಕೂಲಿ ಮಾಡಿ ನನ್ನ ಮಗಳನ್ನು ಸಾಕಿದ್ದೇನೆ. ನಾನು ನನ್ನ ಮಗಳನ್ನು ಪುರುಷನಂತೆ ಸಾಕಿದ್ದೇನೆ. ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಎಂದು ನಾನು ಎಂದುಕೊಂಡಿರಲಿಲ್ಲ. ನನ್ನ ಮಗಳಿಲ್ಲದ ಜೀವನ ನನಗೆ ಬೇಡ. ನಾನು ಸತ್ತು ಹೋಗುತ್ತೇನೆ ಎಂದು ಸುಶ್ಮಿತಾ ತಾಯಿ ಕಣ್ಣೀರು ಹಾಕಿದ್ದಾರೆ.

ಶರತ್, ಆತನ ದೊಡ್ಡಮ್ಮ ಹಾಗೂ ಕುಟುಂಬಸ್ಥರು ಆಕೆಯನ್ನು ಮನೆಯಿಂದ ಹೊರ ಹಾಕಲು ಪ್ಲಾನ್ ಮಾಡಿದ್ದಾರೆ. ಆದರೆ ನನ್ನ ಮಗಳು ಮರ್ಯಾದೆಗೆ ಅಂಜಿ ಮನೆಯಿಂದ ಹೊರ ಹೋಗಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಶರತ್ ಹಾಗೂ ಆತನ ಕುಟುಂಬಸ್ಥರು ನನ್ನ ಮಗಳಿಗೆ ಕಿರುಕುಳ ನೀಡಿದ್ದಾರೆ. ಆದರೆ ಈಗ ನನ್ನ ತಾಯಿಯ ಮರ್ಯಾದೆ ಹೋಗುತ್ತೆ ಎಂದು ಸುಶ್ಮಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶರತ್ ನನ್ನ ಮಗಳ ಮೇಲೆ ಹಲ್ಲೆ ಮಾಡಿದ್ದಾನೆ. ನನ್ನ ಮಗಳು ಶರತ್ ಕಾಲು ಹಿಡಿದುಕೊಂಡು ನನ್ನನ್ನು ಬಿಡಬೇಡ ಎಂದು ಅಂಗಲಾಚಿದರೂ, ಆತನ ಮನಸ್ಸು ಕರಗಲಿಲ್ಲ ಎಂದು ಸುಶ್ಮಿತಾ ತಾಯಿ, ಶರತ್ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *