ಬೆಂಗಳೂರಿಗೆ ಮೇಘ ಸ್ಫೋಟದ ಭೀತಿ – ಮೊನ್ನೆ ದಿಢೀರ್ ಮಳೆಯಾಗಿದ್ದು ಯಾಕೆ?

Public TV
1 Min Read

ಬೆಂಗಳೂರು: ಮುನ್ಸೂಚನೆ ಇಲ್ಲದೇ ಈ ವರ್ಷ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಕಳೆದ ಮಂಗಳವಾರ ರಾತ್ರಿ ಬೆಂಗಳೂರಿನಲ್ಲಿ ದಿಢೀರ್ ಭಾರೀ ಮಳೆಯಾಗಿತ್ತು. ಈ ರೀತಿ ಮಳೆ ಯಾಕೆ ಆಗುತ್ತದೆ ಎಂದು ಪಬ್ಲಿಕ್ ಟಿವಿ ಭೂಗರ್ಭ ವಿಜ್ಞಾನಿ ಪ್ರಕಾಶ್ ಅವರನ್ನು ಸಂಪರ್ಕಿಸಿದಾಗ ಅವರು ಹಲವಾರು ವಿಚಾರಗಳನ್ನು ತಿಳಿಸಿದ್ದಾರೆ.

ಸಾಧಾರಣವಾಗಿ ಮುಂಗಾರು ಪೂರ್ವ, ಮುಂಗಾರು ಮಳೆ ಆಗುವುದನ್ನು ನಾವು ಅಂದಾಜಿಸುತ್ತೇವೆ. ಆದರೆ ದಿಢೀರ್ ಆಗಿ ಮಳೆ ಆಗುವುದನ್ನು ಅಂದಾಜಿಸುವುದು ಬಹಳ ಕಷ್ಟ. ಮೊನ್ನೆ ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿಯೊಂದು ಸ್ಫೋಟಗೊಂಡ ಪರಿಣಾಮ ಮಳೆಯಾಗಿದೆ. ಸುಮತ್ರಾ ದ್ವೀಪದಲ್ಲಿರುವ ಸ್ಫೋಟಗೊಂಡ ಸಿನಾಬಂಗ್ ಜ್ವಾಲಾಮುಖಿಯ ದಟ್ಟ ಹೊಗೆ 15 ಸಾವಿರ ಅಡಿ ಎತ್ತರಕ್ಕೆ ಹೋಗಿತ್ತು. ಇದರಿಂದಾಗಿ ಬೆಂಗಳೂರು ನಗರದಲ್ಲಿ ದಿಢೀರ್ ಮಳೆಯಾಗಿದೆ ಎಂದು ವಿವರಿಸಿದರು.

ಪ್ರಕೃತಿಯಲ್ಲಿ ಈ ರೀತಿ ವಿದ್ಯಮಾನಗಳು ನಡೆದಾಗ ಹವಾಮಾನ ಇಲಾಖೆಗೆ ಈ ಪ್ರದೇಶದಲ್ಲೇ ಮಳೆಯಾಗುತ್ತದೆ ಎಂದು ಹೇಳಲು ಬರುವುದಿಲ್ಲ. ಸುಮತ್ರಾ ಭಾರತಕ್ಕೆ ಹತ್ತಿರದಲ್ಲಿರುವ ಕಾರಣ ಇಲ್ಲಿ ಮಳೆಯಾಗುತ್ತದೆ. ಬೆಂಗಳೂರು ಮಾತ್ರ ಅಲ್ಲ ಭಾರತದ ಯಾವುದೇ ಪ್ರದೇಶದಲ್ಲಿ ಮುನ್ಸೂಚನೆ ಇಲ್ಲದೇ ಭಾರೀ ಮಳೆಯಾಗಬಹುದು ಎಂದು ಅವರು ತಿಳಿಸಿದರು.

ಭಾರತದಲ್ಲಿ ಜೂನ್ ತಿಂಗಳಿನ ಮೊದಲ ವಾರದಲ್ಲಿ ಸಾಧಾರಣವಾಗಿ ಮುಂಗಾರು ಮಳೆ ಆಗುತ್ತದೆ. ಆದರೆ ಈ ರೀತಿಯ ದಿಢೀರ್ ಮಳೆಯಿಂದಾಗಿ ಮುಂಗಾರು ಮಳೆಯ ಪಥವೇ ಬದಲಾಗಬಹುದು. ಈ ವರ್ಷ ಮತ್ತಷ್ಟು ದಿಢೀರ್ ಮಳೆಯಾಗಬಹುದು ಎಂದು ಪ್ರಕಾಶ್ ಅವರು ಮಾಹಿತಿಯನ್ನು ನೀಡಿದರು.

ಇಂಡೋನೇಷ್ಯಾದಲ್ಲಿ ಸುಮಾರು 130 ಜ್ವಾಲಾಮುಖಿಗಳು ಕಾರ್ಯ ಪ್ರವೃತ್ತವಾಗಿದ್ದು. 400 ವರ್ಷಗಳಲ್ಲೇ ಮೊದಲ ಬಾರಿಗೆ 2010ರಲ್ಲಿ ಸಿನಾಬಂಗ್ ಪರ್ವತದಿಂದ ಜ್ವಾಲಾಮುಖಿ ಸ್ಫೋಟಿಸಿತ್ತು. ನಂತರ 2013ರಲ್ಲಿಯೂ ಜ್ವಾಲಾಮುಖಿ ಸ್ಫೋಟಿಸಿ, ಅಂದಿನಿಂದ ನಿರಂತರವಾಗಿ ಜ್ವಾಲಾಮುಖಿ ಸಕ್ರಿಯವಾಗಿದೆ. 2014ರಲ್ಲಿ ಉಂಟಾದ ಸ್ಫೋಟದಲ್ಲಿ 16 ಮಂದಿ ಸಾವನ್ನಪ್ಪಿದ್ದರೆ, 2016ರಲ್ಲಿ ಸಂಭವಿಸಿದ್ದ ಜ್ವಾಲಾಮುಖಿ ಸ್ಫೋಟದಲ್ಲಿ 7 ಮಂದಿ ಮೃತಪಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *