ಅಪ್ಪ-ಮಗನಿಗಾಗಿ ವರುಣಾ, ಚಾಮುಂಡೇಶ್ವರಿ ಮೀಸಲು-ಸಿದ್ದರಾಮಯ್ಯ ಸೋಲಿಸಲು ಜೆಡಿಎಸ್, ಬಿಜೆಪಿ ಒಂದಾಗುತ್ತಾ ?

Public TV
1 Min Read

ಬೆಂಗಳೂರು: ಪುತ್ರ ಯತೀಂದ್ರರ ರಾಜಕೀಯ ಭವಿಷ್ಯಕ್ಕಾಗಿ ಸಿಎಂ ಸಿದ್ದರಾಮಯ್ಯ ಸರ್ಕಸ್ ಆರಂಭಿಸಿದ್ದಾರೆ. ವರುಣಾ ಕ್ಷೇತ್ರದಲ್ಲೇ ಪುತ್ರನನ್ನು ಕಣಕ್ಕಿಳಿಸಲು ಸಿಎಂ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದು, ವರುಣಾ ಕ್ಷೇತ್ರದ ಮುಖಂಡರೊಂದಿಗೆ ವಾರದ ಹಿಂದೆ ರಹಸ್ಯ ಸಭೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ನನ್ನ ಮಗನ ಸ್ಪರ್ಧೆಗೆ 2018ರ ವಿಧಾನಸಭೆ ಚುನಾವಣೆ ಸರಿಯಾದ ಸಮಯ. ನಾನು ಸಿಎಂ ಆಗಿರೋದ್ರಿಂದ ಪಕ್ಷದಲ್ಲಿ ಎಲ್ಲವೂ ನಡೆಯುತ್ತೆ. ಹಾಗಾಗಿ ವರುಣಾ ಕ್ಷೇತ್ರದಲ್ಲಿ ನನ್ನ ಮಗನ ಗೆಲುವಿಗೆ ಶ್ರಮಿಸಬೇಕು ಎಂದು ಸಭೆಯಲ್ಲಿ ಉಳಿದ ನಾಯಕರುಗಳಿಗೆ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಾನು ಪಕ್ಕದ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಅಲ್ಲಿನ ಜನರು ನನ್ನ ಕಷ್ಟ ಕಾಲದಲ್ಲಿಯೇ ಕೈಬಿಟ್ಟಿಲ್ಲ. ಇನ್ನು ಈಗ ಕೈ ಬಿಡ್ತಾರಾ? ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂದು ಹೇಳಿದ್ದಾರೆ. ಸಿಎಂ ನಿಲುವಿಗೆ ವರುಣಾ ಕ್ಷೇತ್ರದ ಕಾಂಗ್ರೆಸ್ ಮುಖಂಡರೂ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ನಿಂತರೆ ಕಾಂಗ್ರೆಸ್ ವಿರುದ್ಧ ಬಿಜೆಪಿ, ಜೆಡಿಎಸ್ ಒಂದಾಗುತ್ತಾ ಎನ್ನುವ ಪ್ರಶ್ನೆ ಎದುರಾಗಿದೆ.

Share This Article
Leave a Comment

Leave a Reply

Your email address will not be published. Required fields are marked *