ಬಾದಾಮಿಯಾದ್ರು ಹುಡುಕಿಕೊಂಡು ಹೋಗಲಿ, ಗೋಡಂಬಿಯಾದ್ರೂ ಹುಡುಕಿಕೊಂಡು ಹೋಗಲಿ ಸೋಲು ಖಚಿತ: ಎಚ್‍ಡಿಕೆ

Public TV
1 Min Read

ಮೈಸೂರು: ಸಿಎಂ ಸಿದ್ದರಾಮಯ್ಯ ಅವರು ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಯಾವುದೇ ಪ್ರಯೋಜನ ಇಲ್ಲ. ಬಾದಾಮಿಯಾದರು ಹುಡುಕಿಕೊಂಡು ಹೋಗಲಿ, ಗೋಡಂಬಿ ಯಾದರು ಹುಡುಕಿಕೊಂಡು ಹೋಗಲಿ ಅವರು ಗೆಲ್ಲಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.

ಮೈಸೂರಿನಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಮಾತನಾಡಿದ ಅವರು, ಮೊದಲಿನಿಂದಲೂ ಸಿಎಂ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಸ್ಪರ್ಧಿಸುತ್ತೆನೆ. ಇದು ನನ್ನ ಕೊನೆಯ ಚುನಾವಣೆ ಎಂದು ಹೇಳುತ್ತಾ ಬಂದಿದ್ದರು. ಆದರೆ ಇಂದು ಚಾಮುಂಡೇಶ್ವರಿಯಲ್ಲಿ ಅವರಿಗೆ ಸೋಲಿನ ಮನವರಿಕೆ ಆಗಿದೆ. ಈ ಭಯದಿಂದ ಸದ್ಯ ಬಾದಾಮಿಯಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ. ಇದು ಅವರ ಮೊದಲ ಸೋಲಾಗಿದ್ದು, ಎರಡು ಕ್ಷೇತ್ರದಲ್ಲಿ ಸೋಲುವುದು ಖಚಿತ. ಅವರ ದುರಹಂಕಾರಿ ಮಾತು, ಉದ್ಧಟನ ತನ ವರ್ತನೆ ಅವರ ಸಿಎಂ ಸ್ಥಾನಕ್ಕೆ ಗೌರವ ತರುವುದಿಲ್ಲ ಎಂದು ಹೇಳಿದರು.

ಈಗಾಗಲೇ ಬಾದಾಮಿ ಕ್ಷೇತ್ರದಿಂದ ನಮ್ಮ ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ. 25 ರಿಂದ 35 ಸಾವಿರ ಮತಗಳ ಅಂತರದಿಂದ ನಮ್ಮ ಅಭ್ಯರ್ಥಿ ಗೆಲುವು ಪಡೆಯುತ್ತಾರೆ. ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಆಶೀರ್ವಾದ ಇಲ್ಲ ಎಂಬುದು ಗೊತ್ತಾಗಿದೆ. ಸದ್ಯ ಬನಶಂಕರಿ ದೇವಿ ಆಶೀರ್ವಾದಕ್ಕೆ ಹೋಗಿದ್ದಾರೆ. ಅವರ ಸೋಲು ಖಚಿತ. ಬಾದಾಮಿ ಗೊಂದಲ ಕುರಿತು ಅನಗತ್ಯವಾಗಿ ಮಾಧ್ಯಮಗಳ ಮೇಲೆ ಆರೋಪ ಮಾಡಿದ್ದಾರೆ ಎಂದು ಹೇಳಿದರು.

ಸಿಎಂ ತಿರುಗೇಟು:  ಮುಖ್ಯಮಂತ್ರಿ ಆಕಾಂಕ್ಷಿಯಾಗಿರುವ  ಕುಮಾರಸ್ವಾಮಿಯವರು ಬಾದಾಮಿ ಅಥವಾ ಗೋಡಂಬಿ ಎಂದು ಹೇಳುವ ಮೂಲಕ ಚಾಲುಕ್ಯರ ರಾಜಧಾನಿ ಬಾದಾಮಿಯ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಗೆ ಯಾವುದೇ ಅಸ್ಥಿತ್ವ ಇಲ್ಲ ಎಂದು ಟ್ವೀಟ್ ಮಾಡುವ ಮೂಲಕ ತಿರುಗೇಟು ಕೊಟ್ಟಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *