`ಸಿದ್ದು ಪೂರ್ಣಾವಧಿ ಸಿಎಂ’ – ಕಾಂಗ್ರೆಸ್ ಒಳಗೆ ಬೆಂಕಿ ಹಚ್ಚಿದ ಎಂಬಿಪಿ

Public TV
2 Min Read

ಬೆಂಗಳೂರು: ಸಿದ್ದರಾಮಯ್ಯ (Siddaramaiah) ಸರ್ಕಾರ ಟೇಕಾಫ್‌ ಆಗಿ 4 ದಿನ ಕಳೆಯುವಷ್ಟರಲ್ಲೇ ಸಚಿವ ಸಿದ್ದು ಆಪ್ತ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್‌ (MB Patil) ಬಾಂಬ್‌ ಸಿಡಿಸುವ ಮೂಲಕ ಡಿಸಿಎಂ ಡಿಕೆ ಶಿವಕುಮಾರ್‌ಗೆ ಬಣಕ್ಕೆ ಠಕ್ಕರ್‌ ಕೊಟ್ಟಿದ್ದಾರೆ.

ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿ ಮಾಧ್ಯಮಗಳ ಜೊತೆ ಮಾತನಾಡಿದ ಎಂಬಿ ಪಾಟೀಲ್‌ ಸಿದ್ದರಾಮಯ್ಯ ಐದು ವರ್ಷ ಪೂರ್ಣಾವಧಿಗೆ ಅಧಿಕಾರ ನಡೆಸಲಿದ್ದಾರೆ ಎಂದು ಹೇಳಿಕೆ ನೀಡುವ ಮೂಲಕ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ. ಎಂಬಿ ಪಾಟೀಲ್‌ ಹೇಳಿಕೆಯಿಂದ ಡಿಕೆಶಿ ಬಣ ಗರಂ ಆಗಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ರಾತ್ರೋರಾತ್ರಿ ಟ್ರಕ್‌ನಲ್ಲಿ ಪ್ರಯಾಣ – ಚಾಲಕನ ಸಮಸ್ಯೆ ಆಲಿಸಿದ ರಾಗಾ

 

ಎಂಬಿಪಿ ಹೇಳಿದ್ದೇನು?
ರಾಜ್ಯದಲ್ಲಿ ಸಿದ್ದರಾಮಯ್ಯ ಅವರೇ 5 ವರ್ಷ ಪೂರ್ಣಾವಧಿ ಸಿಎಂ ಆಗಿರಲಿದ್ದಾರೆ. ಅಧಿಕಾರ ಹಂಚಿಕೆ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ಲೋಕಸಭೆ ಚುನಾವಣೆ ಬಳಿಕ ಯಾವುದೇ ಬದಲಾವಣೆ ಇಲ್ಲ. ಸಿಎಂ ಬದಲಾವಣೆ ಮಾಡುವ ಬಗ್ಗೆ ಎಐಸಿಸಿ ಮಟ್ಟದಲ್ಲಿ ಚರ್ಚೆಯೂ ನಡೆದಿಲ್ಲ, ಸಿದ್ದರಾಮಯ್ಯ ಅವರೇ ಮುಂದಿನ 5 ವರ್ಷ ಸಿಎಂ ಆಗಿರಲಿದ್ದಾರೆ. ಈ ಬಗ್ಗೆ ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ್‌ ಸ್ಪಷ್ಟಪಡಿಸಿದ್ದಾರೆ.

ವದಂತಿ ಏನಿತ್ತು?
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ (DK Shivakumar) ಸಿಎಂ ಪಟ್ಟಕ್ಕೆ ಪಟ್ಟು ಹಿಡಿದಿದ್ದರು. ಕೊನೆಗೆ ಹೈಕಮಾಂಡ್‌ ಸಂಧಾನ ಸೂತ್ರ ಸಿದ್ದಪಡಿಸಿತ್ತು. ಮೊದಲ ಎರಡೂವರೆ ವರ್ಷ ಸಿದ್ದರಾಮಯ್ಯ ನಂತರ ಎರಡೂವರೆ ವರ್ಷ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್‌ ಅಧಿಕಾರ ಹಿಡಿಯಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಈ ವದಂತಿ ಬಗ್ಗೆ ಯಾರು ಸ್ಪಷ್ಟನೆ ನೀಡಿರಲಿಲ್ಲ.

ಗೊಂದಲ ಯಾಕೆ?
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್‌ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್‌ ಮತ್ತು ಕರ್ನಾಟಕ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಆದರೆ ಅಧಿಕಾರ ಹಂಚಿಕೆಯ ಸೂತ್ರ ಯಾವುದು ಎಂದು ಕೇಳಿದ್ದಕ್ಕೆ ಇಬ್ಬರು ಯಾವುದೇ ಉತ್ತರ ನೀಡಿರಲಿಲ್ಲ.

ಒಂದು ವೇಳೆ ಸಿದ್ದರಾಮಯ್ಯ ಅವರೇ ಪೂರ್ಣಾವಧಿವರೆಗೂ ಸಿಎಂ ಆಗಿರುತ್ತಾರೆ ಎಂದು ಹೈಕಮಾಂಡ್‌ ಹೇಳಿದ್ದರೆ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಸಹ ಈ ವಿಚಾರದ ಬಗ್ಗೆ ಅಧಿಕೃತವಾಗಿ ತಿಳಿಸಿರಲಿಲ್ಲ.

 

ಎಂಬಿಪಿ Vs ಡಿಕೆಶಿ:
ಈ ಹಿಂದೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಎಂಬಿ ಪಾಟೀಲ್‌ ಸಿಎಂ ಆಯ್ಕೆ ವಿಚಾರ ಬಂದಾಗ ಸಿದ್ದರಾಮಯ್ಯ ಮೊದಲ ಸ್ಥಾನದಲ್ಲಿದ್ದಾರೆ. ನಾನು ಡಿಕೆಶಿ ಉಳಿದವರು ನಂತರದ ಸ್ಥಾನದಲ್ಲಿದ್ದಾರೆ ಎಂದು ತಿಳಿಸಿದ್ದರು.

ಭಾನುವಾರ ಪಕ್ಷದ ಕಾರ್ಯಕ್ರಮದಲ್ಲಿ ಡಿಕೆಶಿ ಮಾತನಾಡುತ್ತಿದ್ದಾಗ ಸಿಎಂ ಸಿದ್ದರಾಮಯ್ಯ ಜೊತೆ ಎಂಬಿ ಪಾಟೀಲ್‌ ಮಾತನಾಡುತ್ತಿದ್ದರು. ಈ ವೇಳೆ ಸಿಟ್ಟಾದ ಡಿಕೆಶಿ ವೇದಿಕೆಯಲ್ಲೇ ಡೋಂಟ್‌ ಡಿಸ್ಟರ್ಬ್‌ ಎಂದು ಗದರಿದ್ದರು.

Share This Article