ಸಿದ್ದು ಸರ್ಕಾರಕ್ಕೆ 4 ವರ್ಷ, ಮೋದಿ ಸರ್ಕಾರಕ್ಕೆ 3 ವರ್ಷ ಬೆಸ್ಟ್ ಯಾರು?

Public TV
3 Min Read

ಸಿದ್ದರಾಮಯ್ಯ ಸರ್ಕಾರ ಬೆಸ್ಟೋ? ಮೋದಿ ಸರ್ಕಾರ ಬೆಸ್ಟೋ? ಈ ಚರ್ಚೆಗಳು ಜೋರಾಗಿಯೇ ನಡೀತಾ ಇವೆ. ರಾಜ್ಯ ಸರ್ಕಾರಕ್ಕೆ ನಾಲ್ಕು, ಮೋದಿ ಸರ್ಕಾರಕ್ಕೆ ಮೂರು ವರ್ಷದ ಹೊಸ್ತಿಲು. ಈ ಅವಧಿಯಲ್ಲಿ ಯಾರು ಏನು ಮಾಡಿದ್ರು..? ಯಾರಿಗೆಷ್ಟು ಲಾಭ, ನಷ್ಟ? ಡಿಟೇಲ್ ಸ್ಟೋರಿ ಇಲ್ಲಿದೆ.

ಎದ್ದೇಳ್ತಾರೆ.. ಬಿದ್ದೋಗ್ತಾರೆ.. ಎದ್ದೇಳ್ತಾರೆ.. ಬಿದ್ದೋಗ್ತಾರೆ.. ಇದು ಕೈ ಸರ್ಕಾರದಲ್ಲಿ ನಡೆದ ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಎದ್ದು ಬಿದ್ದೇಳುವ ಪ್ರಸಂಗ. ಈ ಪ್ರಸಂಗವನ್ನು ಸುಳ್ಳಾಗಿಸಿ ಐದನೇ ವರ್ಷಕ್ಕೆ ಕಾಲಿಡ್ತಿದ್ದಾರೆ ಸಿದ್ದರಾಮಯ್ಯ. ಯೆಸ್, ಮೇ 13ಕ್ಕೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ 4 ವರ್ಷ.

ಭಾಗ್ಯಗಳ ಸರದಾರ, ಅಹಿಂದ ಪರ ಎನ್ನಿಸಿಕೊಂಡ ಸಿದ್ದು ಸರ್ಕಾರ ಕೂಡ ಅನೇಕ ಟೀಕೆಗಳು, ಆರೋಪಗಳಿಂದ ಹೊರತಾಗಿರಲಿಲ್ಲ. ಸಮಾಜವಾದಿ ನೆಲೆಗಟ್ಟಿನಲ್ಲೇ ಬೆಳೆದ ನಾಯಕ ಮಜಾವಾದಿತನ ಪ್ರದರ್ಶಿಸಿದ ಟೀಕೆಗೂ ಗುರಿಯಾಗಿ ದೇಶದ ಗಮನ ಸೆಳೆದಿದ್ದು ಕೂಡ ವಿಪರ್ಯಾಸವೇ ಸರಿ. ಸ್ವಪಕ್ಷೀಯರ ಮೇಲಾಟ, ವಿಪಕ್ಷಗಳ ಕಾದಾಟದ ನಡುವೆಯೇ ಸಿದ್ದರಾಮಯ್ಯ ಚದುರಾಂಗದಾಟ ಸಕ್ಸಸ್ ಆಯ್ತಾ ಅನ್ನೋ ಚರ್ಚೆಗಳು ಕೂಡ ಜೋರಾಗಿಯೇ ನಡೀತಾ ಇವೆ.ಸಿದ್ದರಾಮಯ್ಯ ವೈಯುಕ್ತಿಕವಾಗಿ ಸಕ್ಸಸ್ ಆದ್ರೆ, ಪಕ್ಷಕ್ಕೆ ಸಕ್ಸಸ್ ತರುವ ವಿಚಾರದಲ್ಲಿ ಸೋತಿದ್ದಾರೆ ಅನ್ನೋ ಲೆಕ್ಕಚಾರಗಳು ನಡೆದಿವೆ. ಹಾಗಾದ್ರೆ ಸಿದ್ದು ಸರ್ಕಾರದ ಕಳಂಕಗಳು, ಸಾಧನೆಗಳು, ಸಂಕಷ್ಟಗಳು ಏನು ಅನ್ನೋದ್ರ ಹೈಲೈಟ್ಸ್ ಇಲ್ಲಿದೆ.

4 ವರ್ಷದ 4 ಕಳಂಕಗಳು
1. ಹೈಕಮಾಂಡ್‍ಗೆ ಕಪ್ಪ ಡೈರಿ
2. ವಿವಾದಾತ್ಮಕ ಸ್ಟೀಲ್ ಬ್ರಿಡ್ಜ್ ಯೋಜನೆ
3. ಹ್ಯುಬ್ಲೋಟ್ ವಾಚು ಹಗರಣ
4. ಅರ್ಕಾವತಿ ಡಿ ನೋಟಿಫಿಕೇಷನ್ ಹಗರಣ ಆರೋಪ

4 ಕೇಸು, 4 ರಾಜೀನಾಮೆ
1. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಂತೋಷ್ ಲಾಡ್ ರಾಜೀನಾಮೆ
2. ಡಿವೈಎಸ್ಪಿ ಅನುಪಮಾ ಶೆಣೈ ಪ್ರಕರಣ- ಪಿ.ಟಿ. ಪರಮೇಶ್ವರ ನಾಯಕ್ ತಲೆದಂಡ
3. ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ಸಚಿವ ಕೆ.ಜೆ. ಜಾರ್ಜ್ ರಾಜೀನಾಮೆ
4. ರಾಸಲೀಲೆ ಪ್ರಕರಣದಲ್ಲಿ ಸಚಿವ ಎಚ್.ವೈ. ಮೇಟಿ ರಾಜೀನಾಮೆ

 4 ವರ್ಷದ 4 ಪ್ರಮುಖ ಸಾಧನೆಗಳು
1. ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ, ವಿದ್ಯಾಸಿರಿ ಯೋಜನೆ
2. ರಾಜ್ಯಾದ್ಯಂತ ಶುದ್ಧ ನೀರಿನ ಘಟಕಗಳ ಆರಂಭ
3. ಬುಡಕಟ್ಟು, ತಾಂಡಾದಲ್ಲಿ ವಾಸಿಸುವವರೇ ಮನೆ ಒಡೆಯ ಹಕ್ಕು
4. ತಮಿಳುನಾಡು ಮಾದರಿಯಲ್ಲೇ ಇಂದಿರಾ ಕ್ಯಾಂಟೀನ್

ಮೋದಿ ಸಾಧನೆ, ವೈಫಲ್ಯ:
ಈ ನಡುವೆ ಮೂರು ವರ್ಷದಲ್ಲಿ ಮೋದಿ ಸರ್ಕಾರದ ಸಾಧನೆ, ವೈಫಲ್ಯಗಳ ಲೆಕ್ಕಚಾರ ಕೂಡ ನಡೆಯುತ್ತಿದೆ. ಮೇ 23ಕ್ಕೆ ಮೋದಿ ಸರ್ಕಾರಕ್ಕೆ 3 ವರ್ಷ ತುಂಬಲಿದೆ. ಈ ಮೂರು ವರ್ಷದಲ್ಲಿ ಹೆಚ್ಚು ಸದ್ದು ಮಾಡಿದ್ದು, ಇಡೀ ಪ್ರಪಂಚವೇ ದೇಶದತ್ತ ತಿರುಗಿ ನೋಡಿದ್ದು ನೋಟ್‍ಬ್ಯಾನ್‍ನಿಂದಾಗಿ.

ಯೆಸ್, ನೋಟ್‍ಬ್ಯಾನ್ ಮೋದಿ ಸರ್ಕಾರದ ಸಾಧನೆ ಅಂತಾ ಕಮಲ ಪಡೆ ಬಣ್ಣಿಸುತ್ತಿದೆ. ಆದರ ಜತೆಗೆ ಸರ್ಜಿಕಲ್ ಸ್ಟ್ರೈಕ್ ಕೂಡ ಮೋದಿ ಸರ್ಕಾರ ಉತ್ತಮ ಕಾರ್ಯ ಅಂತಾ ಶ್ಲಾಘಿಸಲಾಗ್ತಿದೆ. ಆದ್ರೆ ಈ ಎರಡು ನಿರ್ಧಾರಗಳೇ ಅಷ್ಟೇ ಟೀಕೆಗಳಿಗೂ ಕಾರಣವಾಗಿದ್ವು ಎನ್ನುವುದನ್ನ ಮರೆಯುವಂತಿಲ್ಲ. ಈ ನಡುವೆ ಸ್ವಚ್ಛ ಭಾರತ್, ಡಿಜಿಟಲ್ ಇಂಡಿಯಾ, ಜನಾಧನ್‍ಯೋಜನೆಗಳು ಹೆಚ್ಚು ಜನಪ್ರಿಯವಾಗಿವೆ. ಆದ್ರೆ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ ಅಂತಾ ವಿವಾದ ಸೃಷ್ಟಿಯಾಗಿದ್ದೇ ದೊಡ್ಡ ಸುದ್ದಿ. ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ ಅಂತಾ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳೇ ನಡೆದವು.

ಒಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ 4 ವರ್ಷ, ಮೋದಿ ಸರ್ಕಾರಕ್ಕೆ 3 ವರ್ಷ. ಈ ಎರಡು ಸರ್ಕಾರಗಳ ಸಾಧನೆ, ವೈಫಲ್ಯಗಳನ್ನ ರಾಜ್ಯದ ಜನರು ಅಳೆದು ತೂಗುತ್ತಿದ್ದು, 2018ರ ಚುನಾವಣೆಯಲ್ಲಿ ಈ ಮೋದಿಯ ಸಕ್ಸಸ್ ಜಾತ್ರೆ, ಸಿದ್ದರಾಮಯ್ಯ ಗೆಲುವಿನ ಯಾತ್ರೆಗೆ ತೊಡಕಾಗುತ್ತಾ…? ಮೋದಿ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡ್ತಾರಾ..? ಯಾರು ಯಾರನ್ನ ಕೆಡವಲು ಮುಂದಾಗ್ತಾರೆ ಅನ್ನೋದು ಸದ್ಯದ ಕುತೂಹಲ.

Share This Article
Leave a Comment

Leave a Reply

Your email address will not be published. Required fields are marked *