ಬೆಂಗಳೂರು: ಒಂದೆಡೆ ಸಿಎಂ ಅಮೆರಿಕದಲ್ಲೂ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಯುರೋಪ್ ಪ್ರವಾಸದಲ್ಲಿದ್ದರೆ, ಇವತ್ತು ಸಿದ್ದರಾಮಯ್ಯ ಮೈಸೂರಿಗೆ ಹೋಗಲಿದ್ದಾರೆ. ಕಾಂಗ್ರೆಸ್ ಬುಡ ಅಲ್ಲಾಡುತ್ತಿದ್ದರೂ ಸಿದ್ದರಾಮಯ್ಯ 2 ದಿನ ಮೈಸೂರಿಗೆ ಭೇಟಿ ನೀಡುತ್ತಿರುವುದು ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ.
ಶಾಸಕರ ರಾಜೀನಾಮೆಯಿಂದ ಎರಡು ದಿನ ಸಿದ್ದರಾಮಯ್ಯನವರ ಬೆಂಗಳೂರು ನಿವಾಸದದಲ್ಲಿ ರಾಜಕೀಯ ಭೇಟಿ ಬಿರುಸು ಪಡೆದಿತ್ತು. ಪಕ್ಷದಲ್ಲಿ ಇಷ್ಟೆಲ್ಲ ಬೆಳವಣಿಗೆ ನಡೆಯುತ್ತಿದ್ದರೂ ಸಿದ್ದರಾಮಯ್ಯ ಮೈಸೂರಿಗೆ ಹೋಗುತ್ತಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.
ದೋಸ್ತಿ ಸರ್ಕಾರದ ಸಮನ್ವಯ ಸಮಿತಿ ಮುಖ್ಯಸ್ಥರಾಗಿರುವ ಸಿದ್ದರಾಮಯ್ಯ ಈ ಹಿಂದೆ ಶಾಸಕರಿಗೆ ವಿಪ್ ಜಾರಿ ಮಾಡಿ ಸರ್ಕಾರ ರಕ್ಷಿಸುವ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಈಗ ಮುಖ್ಯಮಂತ್ರಿಗಳಿಗೆ ಹಾಗೂ ತಮ್ಮ ಪಕ್ಷದ ಅಧ್ಯಕ್ಷರಿಗೆ ಇಲ್ಲದ ತಲೆಬಿಸಿ ನನಗ್ಯಾಕೆ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.
ಬೆಂಗಳೂರಿನಲ್ಲಿ ಇದ್ದರೆ ಅನವಶ್ಯಕ ಗೊಂದಲ ಜಾಸ್ತಿ. ಒಬ್ಬರಲ್ಲ ಒಬ್ಬರು ಮನೆಗೆ ಬರುತ್ತಿರುತ್ತಾರೆ. ಅದರ ಬದಲು ಮೈಸೂರಿನಲ್ಲಿದ್ದರೆ ಈ ಕಿರಿಕಿರಿಯಿಂದ ಪಾರಾಗಬಹುದು ಎನ್ನುವ ತೀರ್ಮಾನಕ್ಕೆ ಮಾಜಿ ಸಿಎಂ ಬಂದಿದ್ದಾರೆ.
ಸದ್ಯ ಎದ್ದಿರುವ ಗೊಂದಲಗಳಿಗೆ ಸಿದ್ದರಾಮಯ್ಯ ಪೂರ್ಣ ವಿರಾಮ ಹಾಕಬಹುದು ಎನ್ನುವ ನಿರೀಕ್ಷೆಯಲ್ಲಿ ದೋಸ್ತಿ ನಾಯಕರಿದ್ದರು. ಆದರೆ ಸಿದ್ದರಾಮಯ್ಯ ಈ ಸಹವಾಸವೇ ಬೇಡ ಎಂದು ಹೇಳಿ ಮೈಸೂರಿಗೆ ಹೊರಟು ರಾಜಕೀಯ ಗೊಂದಲದಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿರುವ ನಡೆ ಅಚ್ಚರಿ ಮೂಡಿಸಿದೆ.
ಬಿಎಸ್ವೈ ಪ್ರವಾಸ ರದ್ದು: ಇವತ್ತು ಮತ್ತು ನಾಳೆ ನಿಗದಿ ಆಗಿದ್ದ ಬರ ಪ್ರವಾಸವನ್ನ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ದಿಢೀರ್ ಮುಂದೂಡಿದ್ದಾರೆ. ಇವತ್ತು ಹಾಸನ, ನಾಳೆ ಮಂಡ್ಯದಲ್ಲಿ ಬರ ಅಧ್ಯಯನ ಕೈಗೊಳ್ಳಬೇಕಿತ್ತು.