ನನ್ನ ಸ್ನೇಹಿತ ರಾಜಶೇಖರ ಲಿಂಗಾಯತ, ಮೂಳೆಯಲ್ಲಿದ್ದ ಮಾಂಸ ಬಿಡದೇ ತಿಂತಿದ್ದ: ಸಿದ್ದರಾಮಯ್ಯ

Public TV
2 Min Read

ಬೆಂಗಳೂರು: ನನ್ನ ಜೊತೆ ಶಿವಮೊಗ್ಗದ ಒಬ್ಬ ಲಿಂಗಾಯತ ಸ್ನೇಹಿತ ಇದ್ದ ಅವನು ಮೂಳೆಯಲ್ಲಿ ಒಂದಿಷ್ಟು ಮಾಂಸ ಪೀಸ್ ಉಳಿಯದಂತೆ ತಿನ್ನುತ್ತಿದ್ದ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಸ್ವಾರಸ್ಯಕರ ಘಟನೆಯೊಂದನ್ನು ಮೆಲುಕು ಹಾಕಿದರು.

 

ಮಾಂಸ ತಿನ್ನುವ ವಿಚಾರ ವಿಧಾನಸಭೆಯಲ್ಲಿ ಚರ್ಚೆಗೆ ಗ್ರಾಸವಾಯ್ತು. ಚುನಾವಣೆ ಸುಧಾರಣೆ ಅಗತ್ಯತೆ ಕುರಿತ ಚರ್ಚೆ ವೇಳೆ ಕಾರಜೋಳ ಅವರು ಚುನಾವಣೆಯಲ್ಲಿ ಹೆಂಡ ಕೊಟ್ಟಿಲ್ಲ ಅಂತ ಹೇಳುತ್ತಿದ್ದರು ಅಂತಾ ಸಿದ್ದರಾಮಯ್ಯ ಉಲ್ಲೇಖಿಸಿದ್ರು. ಆಗ ಗೋವಿಂದ ಕಾರಜೋಳ ಎದ್ದು ನಿಂತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಒಬ್ಬ ಎರಡು ಕೋಳಿ ನೀಡಿದ್ದ. ಮತ್ತೊಬ್ಬ ಕುರಿ ನೀಡಿ ಜೊತೆಗೆ ಸ್ವೀಟ್ ಬಾಕ್ಸ್ ನೀಡಿದ್ದ ಏಕೆಂದರೆ, ರಮೇಶ್ ಕುಮಾರ್ ಮತ್ತು ಕಾಗೇರಿ ಅಂತವರು ಇರುತ್ತಾರೆ ಅವರಿಗೆ ಸ್ವೀಟ್ ಕೊಟ್ಟಿದ್ದ ಎಂದು ಕಾರಜೋಳ ಹೇಳಿದ್ರು. ಆಗ ಸಿದ್ದರಾಮಯ್ಯ ಮಧ್ಯಪ್ರವೇಶ ಮಾಡಿ ಅಂದರೆ ರಮೇಶ್ ಕುಮಾರ್ ಮಾಂಸ ತಿನ್ನುತ್ತಾನೆ ಎಂದು ಎಲ್ಲರ ಮುಂದೆ ಬಾಯಿ ಬಿಟ್ಟು ಹೇಳುತ್ತೀಯಾ ಎಂದು ಕಾಲೆಳೆದ್ರು. ಇದನ್ನೂ ಓದಿ: ಸಿದ್ದರಾಮಯ್ಯ ಶ್ರೀಕೃಷ್ಣ ಎಂದ ರಮೇಶ್‍ಕುಮಾರ್ – ಪಟೇಲರ ಕಚ್ಚೆ ನೆನಪಿಸಿಕೊಂಡ ಸಿದ್ದು

ಈ ವೇಳೆ ಮತ್ತೆ ಮಧ್ಯಪ್ರವೇಶ ಮಾಡಿದ ಗೋವಿಂದ ಕಾರಜೋಳ, ನಾವು ನೀವು ಮಾಂಸ ತಿನ್ನುವ ಜಾತಿಯಲ್ಲಿ ಹುಟ್ಟಿದ್ದೇವೆ. ಆದರೆ, ರಮೇಶ್ ಕುಮಾರ್ ಅವರ ರೀತಿ ಮಾಂಸ ತಿನ್ನಲು ಬರುವುದಿಲ್ಲ ನಮಗೆ ಎಂದರು. ಆಗ ಸಿದ್ದರಾಮಯ್ಯ ರಮೇಶ್ ಕುಮಾರ್ ಕಾಲೆಳೆದ್ರು. ನಾನೂ ರಮೇಶ್ ಕುಮಾರ ಜೊತೆ ಸಾಕಷ್ಟು ಬಾರಿ ಊಟ ಮಾಡಿದ್ದೇನೆ. ಅವನಷ್ಟು ಕ್ಲೀನಾಗಿ ಊಟ ಮಾಡಲು ನನಗೆ ಬರುವುದಿಲ್ಲ ಎಂದು ಸಿದ್ದರಾಮಯ್ಯ ನಕ್ಕರು. ಇದನ್ನೂ ಓದಿ: ಮಂಡ್ಯ ವಿದ್ಯಾರ್ಥಿನಿಗೆ ನಗದು ಬಹುಮಾನ – ಹಲಾಲ್ ವಿರುದ್ಧ ಅಭಿಯಾನ: ಎರಡಕ್ಕೂ ನಂಟೇನು?

ಈ ವೇಳೆ ರಮೇಶ್ ಕುಮಾರ್ ಜೋರಾಗಿ ನಗುತ್ತಿದ್ದರು. ಇದೇ ವೇಳೆ ನನ್ನ ಜೊತೆ ಶಿವಮೊಗ್ಗದ ಒಬ್ಬ ಲಿಂಗಾಯತ ಸ್ನೇಹಿತ ಇದ್ದ ಅವನು ಮೂಳೆಯಲ್ಲಿ ಒಂದಿಷ್ಟು ಮಾಂಸ ಪೀಸ್ ಉಳಿಯದಂತೆ ತಿನ್ನುತ್ತಿದ್ದ ಎಂದರು. ಆಗ ಇಡೀ ಸದನ ನಗೆಗಡಲಲ್ಲಿ ತೇಲಿತು. ಬಳಿಕ ಮಾಂಸದ ಮಾತು ಸಾಕು, ಚುನಾವಣೆ ಬಗ್ಗೆ ಮಾತನಾಡಿ ಎಂದು ಸ್ಪೀಕರ್ ಸಲಹೆ ಕೊಟ್ಟಾಗ ನೋಡಿ ನಿಮಗೆ ಈ ವಿಷಯ ಕೇಳೋಕೆ ಅಸಹ್ಯ ಅನಿಸುತ್ತಿದೆ ಎಂದು ಸಿದ್ದರಾಮಯ್ಯ ಹಾಸ್ಯ ಮಾಡಿದ್ರು.

Share This Article
Leave a Comment

Leave a Reply

Your email address will not be published. Required fields are marked *