ಟಿಪ್ಪು ಜಯಂತಿ ವಿರೋಧಿಗಳಿಗೆ ಸಿದ್ದರಾಮಯ್ಯ ಫುಲ್‍ಕ್ಲಾಸ್

Public TV
2 Min Read

-ಟಿಪ್ಪು ದೇಶಪ್ರೇಮ, ಜಾತ್ಯತೀತ ಧೋರಣೆ ತಿಳಿಸುತ್ತವೆ ಲಾವಣಿ ಪದಗಳು
-ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣರನ್ನು ಯಾವ ಗುಂಪಿಗೆ ಸೇರಿಸ್ತಿರಿ?

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಟಿಪ್ಪು ಜಯಂತಿ ಶುಭಕೋರಿದ್ದು, ಸರಣಿ ಟ್ವೀಟ್ ಮೂಲಕ ಟಿಪ್ಪುವನ್ನು ಕೊಂಡಾಡಿದ್ದಾರೆ. ಅಷ್ಟೇ ಅಲ್ಲದೆ ಟಿಪ್ಪು ಜಯಂತಿ ವಿರೋಧಿಗಳಿಗೆ ಫುಲ್‍ಕ್ಲಾಸ್ ತೆಗೆದುಕೊಂಡಿದ್ದಾರೆ.

ಟ್ವಿಟ್ ನಲ್ಲೇನಿದೆ?:
ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಲ್ಲ. ಒಂದು ಸಂಸ್ಥಾನದ ರಾಜ ಎನ್ನುವ ವಾದ ಹುಟ್ಟಿಕೊಂಡಿದೆ. ಇಂತಹ ಮೊಂಡುವಾದದವರು ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ವೀರ ಸಿಂಧೂರ ಲಕ್ಷ್ಮಣ, ರಾಣಿ ಅಬ್ಬಕ್ಕದೇವಿ ಸೇರಿದಂತೆ ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣಾರ್ಪಣೆ ಮಾಡಿದವರನ್ನು ಯಾವ ಗುಂಪಿಗೆ ಸೇರಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ರಾಜ್ಯ ಸರ್ಕಾರ ಆಚರಿಸುತ್ತಿರುವುದು ಯಾವುದೇ ಒಂದು ಧರ್ಮಕ್ಕೆ ಸೇರಿದ ನಾಯಕನ ಜಯಂತಿಯಲ್ಲ. ಒಬ್ಬ ದೇಶಪ್ರೇಮಿ, ಜಾತ್ಯತೀತ ಮತ್ತು ಜನಪರ ಅರಸನಾಗಿದ್ದ ಟಿಪ್ಪುವಿನ ಜಯಂತಿ ಆಚರಿಸುತ್ತಿದ್ದೇವೆ. ಟಿಪ್ಪು ಅವರನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸುವುದು ಟಿಪ್ಪುವಿಗೆ ಮಾತ್ರವಲ್ಲ ಈ ನಾಡಿಗೆ ಬಗೆವ ದ್ರೋಹ ಎಂದು ಕಿಡಿಕಾರಿದ್ದಾರೆ.

ಟಿಪ್ಪು ಬಗ್ಗೆ ತಿಳಿದುಕೊಳ್ಳಬೇಕಾಗಿರುವುದು ವೈರಿಗಳಾಗಿದ್ದ ಬ್ರಿಟಿಷ್ ಇತಿಹಾಸಕಾರರಿಂದಲ್ಲ. ಟಿಪ್ಪು ಬಗ್ಗೆ ಮೈಸೂರು ಭಾಗದಲ್ಲಿ ಲಾವಣಿಗಳಿವೆ. ಅವುಗಳಲ್ಲಿ ಟಿಪ್ಪುವಿನ ದೇಶಪ್ರೇಮ, ಜಾತ್ಯತೀತ ಧೋರಣೆ, ಅಭಿವೃದ್ದಿಯ ಕಲ್ಪನೆಗಳ ಮಾಹಿತಿ ಇದೆ. ಈ ಲಾವಣಿ, ಪದ, ಹಾಡುಗಳೇ ನಿಜವಾದ ಇತಿಹಾಸ ಎಂದು ತಿಳಿಸಿದ್ದಾರೆ.

ಸರ್ಕಾರವೇ ಜಯಂತಿಗಳನ್ನು ಆಚರಿಸುವುದಕ್ಕೆ ಕಾರಣವಿದೆ. ಇದನ್ನು ಸಾರ್ವಜನಿಕರಿಗೆ ಬಿಟ್ಟರೆ ತಮ್ಮ ಜಾತಿ-ಧರ್ಮಗಳಿಗೆ ಸೇರಿರುವ ಮಹಾಪುರುಷ-ಮಹಿಳೆಯರ ಜಯಂತಿ ಆಚರಣೆಯನ್ನಷ್ಟೇ ಮಾಡಿ ಅವರನ್ನು ತಮ್ಮ ಜಾತಿ-ಧರ್ಮಗಳಿಗೆ ಸೀಮಿತಗೊಳಿಸುತ್ತಾರೆ. ಇದು ಮಹಾನ್ ವ್ಯಕ್ತಿಗಳಿಗೆ ಅಗೌರವವೂ ಹೌದು. ಮಹಾಪುರುಷ-ಮಹಿಳೆಯರ ಜಯಂತಿ ಆಚರಣೆಯ ಸಂಪ್ರದಾಯವನ್ನು ಹಿಂದಿನ ನಮ್ಮ ಸರ್ಕಾರ ಹುಟ್ಟುಹಾಕಿದ್ದಲ್ಲ, ಅಧಿಕಾರಕ್ಕೆ ಬಂದ ಎಲ್ಲ ಸರ್ಕಾರಗಳು ಜಯಂತಿ ಆಚರಣೆ ಪಟ್ಟಿಗೆ ಇನ್ನಷ್ಟು ಹೆಸರುಗಳನ್ನು ಸೇರಿಸುತ್ತಾ ಬಂದಿವೆ. ಆಗ ಕಾಣಿಸಿಕೊಳ್ಳದ ಪ್ರತಿರೋಧ ಟಿಪ್ಪು ಆಚರಣೆ ಬಗ್ಗೆ ಮಾತ್ರ ಯಾಕೆ ಎಂದಿದ್ದಾರೆ.

ಟಿಪ್ಪು ಜಯಂತಿ ಆಚರಣೆ ಬಗ್ಗೆ ನಿಲುವು ಆತ್ಮವಂಚನೆಯಿಂದ ಕೂಡಿದ್ದಾಗಿದೆ. ತಾವು ಅಧಿಕಾರದಲ್ಲಿದ್ದಾಗ ಟಿಪ್ಪು ಜಯಂತಿಯಲ್ಲಿ ಭಾಗವಹಿಸಿ, ಟಿಪ್ಪುವನ್ನು ಹಾಡಿ-ಹೊಗಳಿ, ಪುಸ್ತಕ ಬರೆಸಿ ಈಗ ವಿರೋಧಿಸುತ್ತಿರುವುದು ಸ್ವಾರ್ಥರಾಜಕಾರಣವಲ್ಲದೆ ಮತ್ತೇನು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಶ್ರೀರಾಮುಲು, ಸಿ.ಪಿ.ಯೋಗೇಶ್ ಸೇರಿದಂತೆ ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.

ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ದೇಶದಲ್ಲಿ ಸ್ವಾತಂತ್ರ್ಯದ ಕಿಚ್ಚು ಹತ್ತಿಸಿದ ದೇಶ ಪ್ರೇಮಿ ಮೈಸೂರು ಹುಲಿ ಟಿಪ್ಪು ಸುಲ್ತಾನರ ಜನ್ಮದಿನದಂದು ಅವರ ದೇಶಪ್ರೇಮ, ತ್ಯಾಗ ಮತ್ತು ಜನಪರ ಆಡಳಿತವನ್ನು ನಾವೆಲ್ಲರೂ ಸ್ಮರಿಸೋಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *