ಸರ್ಕಾರ ಬೀಳಿಸೋದರಲ್ಲಿ ಯಾರು ನಿಪುಣರು ಎಂದು ಇತಿಹಾಸ ಹೇಳುತ್ತೆ: ಸಿದ್ದರಾಮಯ್ಯ

Public TV
1 Min Read

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ ರಾಜ್ಯ ಸರ್ಕಾರ ಮತ್ತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರವಾಹ ಬಂದು 3 ತಿಂಗಳಾದ್ರೂ ಪರಿಹಾರದ ಹಣ ಜನರನ್ನು ತಲುಪಿಲ್ಲ. ಪರಿಹಾರ ಕಾರ್ಯ ವಿಳಂಬವಾಗುತ್ತೆ ಎಂಬ ನೆಪವೊಡ್ಡಿ ಅಧಿವೇಶನವನ್ನು ಮೊಟಕುಗೊಳಿಸಿದ ಸರ್ಕಾರ, ಈಗ ಉಪಚುನಾವಣೆಯ ತಯಾರಿಯಲ್ಲಿ ಮುಳುಗಿದೆ. ಸಂತ್ರಸ್ತರು ಬೀದಿಯಲ್ಲಿದ್ದರೂ ಸರ್ಕಾರ ಅವರೆಡೆಗೆ ಕಣ್ಣೆತ್ತಿ ನೋಡುತ್ತಿಲ್ಲ.

ಹುಬ್ಬಳ್ಳಿಗೆ ಭೇಟಿ ನೀಡಿ ಪಕ್ಷದ ಟಿಕೆಟ್ ಹಂಚಿಕೆ ಮಾಡುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪ್ರವಾಹ ಸಂತ್ರಸ್ತರ ಕಷ್ಟ ಕೇಳಲು ಸಮಯವಿಲ್ಲ. ಮಹಾರಾಷ್ಟ್ರ ಚುನಾವಣೆಯಲ್ಲಿ ಪ್ರವಾಹ ತಲೆದೋರಿದ್ದ ಕಡೆ ಬಿಜೆಪಿ ಸೋತ ಹೊರತಾಗಿಯೂ ಕರ್ನಾಟಕ ಬಿಜೆಪಿ ಪಾಠ ಕಲಿತಂತೆ ಕಾಣುತ್ತಿಲ್ಲ. ಈಗಲೂ ನೊಂದವರ ಬಗ್ಗೆ ತಾತ್ಸಾರ ಧೋರಣೆಯನ್ನು ಅನುಸರಿಸುತ್ತಲೇ ಇದೆ.

ಕುಮಾರಸ್ವಾಮಿಯವರಿಗೆ 14 ತಿಂಗಳು ನಾನು ಆಡಳಿತ ನಡೆಸಲು ಬಿಡಲಾಗದಷ್ಟು ತೊಂದರೆ ಕೊಟ್ಟಿದ್ದರೆ ಮೊದಲ ದಿನವೇ ಅವರು ರಾಜೀನಾಮೆ ಕೊಟ್ಟುಬಿಡಬಹುದಿತ್ತು. 14 ತಿಂಗಳು ಆಡಳಿತ ನಡೆಸಿ ಈಗ ರಾಜಕೀಯ ದುರುದ್ದೇಶಕ್ಕೆ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ. ಸರ್ಕಾರ ಬೀಳಿಸುವುದರಲ್ಲಿ ಯಾರು ನಿಪುಣರು ಎಂದು ಅವರವರ ಇತಿಹಾಸವೇ ಹೇಳುತ್ತದೆ.

ರಾಜ್ಯದಲ್ಲಿ ಪ್ರವಾಹದಿಂದ ಸಂಕಷ್ಟಕ್ಕೀಡಾದ ಪ್ರತಿ ಜಿಲ್ಲೆಗೂ ಈ ಹಿಂದೆಯೇ ಭೇಟಿ ನೀಡಿ ಸಂತ್ರಸ್ತರ ಕಷ್ಟ ಆಲಿಸಿದ್ದೇನೆ. ನಾನು ಬೆಳಗಾವಿಗೇ ಎರಡು ಬಾರಿ ಭೇಟಿ ನೀಡಿ, ಪರಿಹಾರ ಕಾರ್ಯಗಳ ವೀಕ್ಷಣೆ ಮಾಡಿದ್ದೇನೆ. ನನಗೆ ಚುನಾವಣೆ ಬೇಕಾಗಿದೆ ಎನ್ನುವವರು ಅವರೆಷ್ಟು ಕಡೆ ಹೋಗಿ ಸಂತ್ರಸ್ತರ ಕಷ್ಟ ಆಲಿಸಿದ್ದಾರೆ ಎಂದು ನೋಡಿಕೊಳ್ಳಲಿ.

Share This Article
Leave a Comment

Leave a Reply

Your email address will not be published. Required fields are marked *