ಸಿಇಟಿ ಪರೀಕ್ಷೆಗೆ ಜನಿವಾರ ತೆಗೆಸಿದ ಪ್ರಕರಣ – ಸಿದ್ದರಾಮಯ್ಯ ಕ್ಷಮೆ ಕೇಳಲಿ, ತಪ್ಪಿತಸ್ಥರ ವಿರುದ್ಧ ಕ್ರಮ ಆಗಲಿ: ಆರ್.ಅಶೋಕ್

Public TV
1 Min Read

ಬೆಂಗಳೂರು: ಸಿಇಟಿ (CET) ಪರೀಕ್ಷೆಯಲ್ಲಿ ಬ್ರಾಹ್ಮಣರಿಗೆ ಜನಿವಾರಕ್ಕೆ (Janivara) ಅವಕಾಶ ನೀಡದೇ ಸರ್ಕಾರ ಅಪಮಾನ ಮಾಡಿದೆ. ಹಿಂದೂಗಳ ಬಗ್ಗೆ ಎಷ್ಟು ಕೋಪ ಇದೆ ಎಂಬುದು ಗೊತ್ತಾಗುತ್ತದೆ. ಸಿದ್ದರಾಮಯ್ಯ (Siddaramaiah) ಕೂಡಲೇ ರಾಜ್ಯದ ಜನರ ಕ್ಷಮೆ ಕೋರಲಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R.Ashok) ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತಾಡಿದ ಅಶೋಕ್, ಬ್ರಾಹ್ಮಣರು ಮಾತ್ರವಲ್ಲದೆ, ಮರಾಠರು, ವೈಶ್ಯ ಸಮಯದಾಯದವರು ಕೂಡ ಜನಿವಾರ ಹಾಕುತ್ತಾರೆ. ಈ ಎಲ್ಲ ಸಮುದಾಯಗಳಿಗೆ ಅಪಮಾನ ಮಾಡಲಾಗಿದೆ. ಮುಸ್ಲಿಂ ಹುಡುಗಿಯರು ಹಿಜಬ್‌ ಹಾಕಲು ಅವಕಾಶ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ಕ್ಷಮೆ ಕೇಳಿ, ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಪರೀಕ್ಷಾ ಸಿಬ್ಬಂದಿ ಜನಿವಾರ ತೆಗೆಯಬೇಕು ಅಂದಿದ್ದು ತಪ್ಪು, ಅಂತಹ ಯಾವುದೇ ಮಾರ್ಗಸೂಚಿ ಇಲ್ಲ: ಕೆಇಎ

ವಕ್ಫ್‌ ಹೆಸರಲ್ಲಿ ಜನರ ಜಮೀನುಗಳನ್ನು ನುಂಗಿ ಹಾಕಲಾಗಿದೆ. ಮಂಗಳೂರಿನಲ್ಲಿ ಸಿದ್ದರಾಮಯ್ಯ ಪ್ರಾಯೋಜಿತ ಪ್ರತಿಭಟನೆ ನಡೆದಿದೆ. ಮುಸ್ಲಿಮರಿಗೆ ಪ್ರತ್ಯೇಕ ಕಾನೂನು ನೀಡಲು ಸಾಧ್ಯವಿಲ್ಲ. ನೆಲದ ಕಾನೂನನ್ನು ಎಲ್ಲರೂ ಪಾಲಿಸಬೇಕು ಎಂದು ಅಶೋಕ್ ಹೇಳಿದರು.

ಕುಂಕುಮ ಕೇಸರಿ ಕಂಡರೆ ದ್ವೇಷ ಕಾರುತ್ತಿದ್ದ ಸಿಎಂ ಅವರು ಈಗ ಜನಿವಾರದ ವಿರುದ್ಧ ಹಗೆತನ ಮೆರೆಯುವ ಮೂಲಕ ಮತ್ತೊಮ್ಮೆ ತಮ್ಮ ಹಿಂದೂ ವಿರೋಧಿ ಮಾನಸಿಕತೆಯನ್ನ ಪ್ರದರ್ಶನ ಮಾಡಿದ್ದಾರೆ ಎಂದು ಅಶೋಕ್ ಕಿಡಿಕಾರಿದರು. ಇದನ್ನೂ ಓದಿ: ಜನಿವಾರ ಹಾಕಿದ್ದಕ್ಕೆ CET ಪರೀಕ್ಷೆಗೆ ಅವಕಾಶ ಕೊಡದ ಸಿಬ್ಬಂದಿ; ಬ್ರಾಹ್ಮಣ ಸಂಘಟನೆಗಳಿಂದ ಆಕ್ರೋಶ

ತೀರ್ಥಹಳ್ಳಿಯಲ್ಲಿ ಸಿಇಟಿ ಪರೀಕ್ಷೆ ವೇಳೆಯಲ್ಲಿ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳಿಗೆ ಬಲವಂತವಾಗಿ ಜನಿವಾರ ತೆಗೆಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದರೆ, ಬೀದರ್‌ನಲ್ಲಿ ಜನಿವಾರ ತೆಗೆಯಲೊಪ್ಪದ ವಿದ್ಯಾರ್ಥಿಯನ್ನು ಪರೀಕ್ಷೆಗೆ ಹಾಜರಾಗಲು ಬಿಡದೆ ವಿದ್ಯಾರ್ಥಿಯ ಭವಿಷ್ಯವನ್ನ ಹಾಳು ಮಾಡಿದೆ. ಇದು ಹಿಂದೂ ವಿರೋಧಿ ಸರ್ಕಾರ ಎಂದು ಅಶೋಕ್ ವಾಗ್ದಾಳಿ ನಡೆಸಿದರು.

Share This Article