ದಕ್ಷಿಣದ ರಾಜ್ಯಗಳ ಪೈಕಿ ಕರ್ನಾಟಕದಲ್ಲೇ ದರ ಕಡಿಮೆ – ತೈಲ ದರ ಏರಿಕೆಗೆ ಸಿಎಂ ಸಮರ್ಥನೆ!

Public TV
2 Min Read

– ಪೆಟ್ರೋಲ್ ಮೇಲೆ ಕೇಂದ್ರದ ತೆರಿಗೆ ಕಡಿಮೆ ಮಾಡ್ಬೇಕು: ಸಿದ್ದರಾಮಯ್ಯ ಆಗ್ರಹ

ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಗೆ (Petrol, Diesel Price Hike) ಜನಸಾಮಾನ್ಯರಿಂದ ತೀವ್ರ ಆಕ್ರೋಶ ಕಂಡುಬರುತ್ತಿದೆ. ಇತ್ತ ಪೆಟ್ರೋಲ್, ಡಿಸೇಲ್ ಮೇಲಿನ ವ್ಯಾಟ್ ಹೆಚ್ಚಳವನ್ನ ಸಿಎಂ ಸಿದ್ದರಾಮಯ್ಯ (Siddaramaiah) ಸಮರ್ಥಿಸಿಕೊಂಡಿದ್ದಾರೆ.

ಸಿಎಂ ಪ್ರಕಟಣೆಯಲ್ಲಿ ಏನಿದೆ?
ವ್ಯಾಟ್ ಹೆಚ್ಚಳದ ನಂತರವೂ ಬಹುತೇಕ ದಕ್ಷಿಣ ಭಾರತದ (South India) ರಾಜ್ಯಗಳಲ್ಲಿ ಕರ್ನಾಟಕದಲ್ಲೇ ಪೆಟ್ರೋಲ್, ಡೀಸೆಲ್‌ ಬೆಲೆ ಕಡಿಮೆ ಇರೋದು. ಆರ್ಥಿಕವಾಗಿ ಬಲಿಷ್ಠವಾಗಿರುವ ಮಹಾರಾಷ್ಟ್ರದಲ್ಲಿ ಇಂಧನಗಳ ಮೇಲಿನ ಮಾರಾಟ ಸುಂಕ ಪೆಟ್ರೋಲ್‌ಗೆ 25% ಇದ್ದು, ಹೆಚ್ಚುವರಿಯಾಗಿ 5.12 ರೂ. ತೆರಿಗೆ ಸಹ ಇದೆ. ಇನ್ನು ಮಹಾರಾಷ್ಟ್ರದಲ್ಲಿ ಡಿಸೇಲ್ ಮೇಲೆ 21% ತೆರಿಗೆ ಇದೆ. ಕರ್ನಾಟಕದಲ್ಲಿ ಪರಿಷ್ಕೃತಗೊಂಡ ನಂತರವೂ ಈ ಸುಂಕದ ಪ್ರಮಾಣ ಮಹಾರಾಷ್ಟ್ರಕ್ಕಿಂತ ಕಡಿಮೆ ಇದೆ. ಇದರ ಹೊರತಾಗಿ ಡಿಸೇಲ್ ದರ ಕರ್ನಾಟಕದಲ್ಲಿ, ಗುಜರಾತ್ ಮತ್ತು ಮಧ್ಯಪ್ರದೇಶಗಳಿಗಿಂತಲೂ ಕಡಿಮೆ ಇದೆ. ನಮ್ಮ ರಾಜ್ಯದಲ್ಲಿ ಇಂಧನಗಳ ದರ ಜನತೆಗೆ ಕೈಗೆಟುಕುವ ದರಗಳಲ್ಲಿ ಸಿಗುತ್ತಿದೆ.

ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಡಬಲ್ ಇಂಜಿನ್ ಸರ್ಕಾರವು ಕರ್ನಾಟಕದ ಆದಾಯ ಬೇರೆ ರಾಜ್ಯಗಳತ್ತ ಹರಿದುಹೋಗಲು ಕಾರಣವಾಗಿತ್ತು. ಆಗ ಕೇಂದ್ರ ಸರ್ಕಾರ ನಿರಂತರವಾಗಿ ಇಂಧನಗಳ ಮೇಲೆ ತೆರಿಗೆ ಹೆಚ್ಚಳ ಮಾಡ್ತಿದ್ರೆ, ರಾಜ್ಯ ಸರ್ಕಾರವು ರಾಜ್ಯದಲ್ಲಿ ಇಂಧನಗಳ ಮೇಲಿನ ತನ್ನ ಮಾರಾಟ ಸುಂಕ ಕಡಿಮೆ ಮಾಡ್ತಿತ್ತು. ಈ ಕಾರಣದಿಂದ ರಾಜ್ಯದ ಆದಾಯ ಕಡಿಮೆ ಆಯ್ತು. ಆದೇ ಹೊತ್ತಿನಲ್ಲಿ ರಾಜ್ಯದಿಂದ ಕೇಂದ್ರಕ್ಕೆ ಹೆಚ್ಚಿನ ಆದಾಯ ಹೋಗುತ್ತಿತ್ತು. ಪರೋಕ್ಷವಾಗಿ ರಾಜ್ಯದ ಆದಾಯಕ್ಕೆ ಹಿಂದಿನ ಬಿಜೆಪಿ ಸರ್ಕಾರವೇ ಕೊಕ್ಕೆ ಹಾಕಿತ್ತು.

ಇನ್ನು 2021-22 ರಲ್ಲಿ ಪೆಟ್ರೋಲ್ ಮೇಲಿನ ಅಬಕಾರಿ ತೆರಿಗೆಯನ್ನ ಪೆಟ್ರೋಲ್ 13 ರೂಪಾಯಿ ಮತ್ತು ಡಿಸೇಲ್ 16 ರೂ. ಕಡಿಮೆ ಮಾಡಿತ್ತು.‌ ಸದ್ಯ ಪೆಟ್ರೋಲ್ ಮೇಲಿನ ಕೇಂದ್ರದ ತೆರಿಗೆ 19.9 ರೂಪಾಯಿ ಹಾಗೂ ಡಿಸೇಲ್ ಮೇಲೆ 18.8 ರೂ. ಇದೆ. ಇದನ್ನ ಕೇಂದ್ರ ಸರ್ಕಾರ ಜನರ ಒಳಿತಿಗೊಸ್ಕರ ಕಡಿಮೆ ಮಾಡಬೇಕು. ರಾಜ್ಯದ ವ್ಯಾಟ್ ಹೆಚ್ಚಳ ದಿಂದ ಜನರ ಸೇವೆಗಳು ಅಭಿವೃದ್ಧಿ ಕೆಲಸಗಳು ಹೆಚ್ಚು ಹಣ ನೀಡಲಿದ್ದೇವೆ. ನಾವು ಸಮತೋಲಿತ ಮತ್ತು ಜವಾಬ್ದಾರಿಯುತ ಆಡಳಿತ ನೀಡಲು ಬದ್ಧರಾಗಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.

Share This Article