ಸಭೆ ಮಾಡಿದ್ರು ಅಂದಾಕ್ಷಣ ಬೆಂಬಲ ಕೊಟ್ಟಿದ್ದಾರೆ ಅಂತ ಅಲ್ಲ: ಸಿದ್ದರಾಮಯ್ಯ

Public TV
1 Min Read

– ಯಡಿಯೂರಪ್ಪರಿಗೆ ಶಾಸ್ತ್ರ ಹೇಳೋದು ಗೊತ್ತಾ?

ಬೆಂಗಳೂರು: ಸಭೆ ಮಾಡಿದ್ದಾರೆ ಅಂದಾಕ್ಷಣ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ಕೊಟ್ಟಿದ್ದಾರೆ ಅಂತ ಅಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳುವ ಮೂಲಕ ಮಂಡ್ಯದ ಬಂಡಾಯ ಕಾಂಗ್ರೆಸ್ ನಾಯಕರ ಪರ ಬ್ಯಾಟ್ ಬೀಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಎರಡು ದಿನಗಳ ನಂತರ ತಮ್ಮ ನಿವಾಸದಿಂದ ಹೊರ ಬಂದಿದ್ದಾರೆ. ಕಿವಿ ನೋವಿನ ಹಿನ್ನೆಲೆಯಲ್ಲಿ ವಿಕ್ರಮ್ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳುವುದಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದರು.

ಸುಮಲತಾ ಅಂಬರೀಶ್ ಅವರ ಜೊತೆಗೆ ಮಂಡ್ಯ ಮುಖಂಡರು ಸಭೆ ನಡೆಸಿದ ಬಗ್ಗೆ ನನಗೆ ಗೊತ್ತಿಲ್ಲ. ಮಾಜಿ ಶಾಸಕ ಚೆಲುವರಾಯಸ್ವಾಮಿ, ನರೇಂದ್ರ ಸ್ವಾಮಿ ಅವರನ್ನು ಕರೆಸಿ ಸಭೆ ಬಗ್ಗೆ ವಿಚಾರಿಸುತ್ತೇನೆ. ಅವರು ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಮಾಡಿಲ್ಲ, ಸುಮ್ಮನೆ ಇದ್ವಿ ಅಂತ ಹೇಳಿದ್ದರು. ಅವರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ನಾನು ಮಾತಾಡಲ್ಲ ಎಂದು ತಿಳಿಸಿದರು.

ಕುಂದಗೋಳದ ವಿಧಾನಸಭಾ ಉಪ ಚುನಾವಣೆ ಟಿಕೆಟ್ ವಿಚಾರವಾಗಿ ಯಾವುದೇ ಅಸಮಧಾನವಿಲ್ಲ. ಕುಂದಗೋಳದಲ್ಲಿ ನಾಳೆ ಕಾರ್ಯಕರ್ತರ ಸಮಾವೇಶವಿದೆ. ನಾನು ಕೂಡ ಭಾಗವಹಿಸುತ್ತೇನೆ. ಅಲ್ಲಿ ಯಾವುದೇ ಗೊಂದಲವಿಲ್ಲ. ಚಿಂಚೋಳಿ ಹಾಗೂ ಕುಂದಗೋಳ ಎರಡೂ ಉಪ ಚುನಾವಣೆಯಲ್ಲಿಯೂ ನಾವೇ ಗೆಲ್ಲುತ್ತೇವೆ ಎಂದು ತಿಳಿಸಿದರು.

ನಾಲ್ಕು ದಿಗ್ಗಜರು ಸೋಲುತ್ತಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಮಾಜಿ ಸಿಎಂ, ಯಡಿಯೂರಪ್ಪರಿಗೆ ಶಾಸ್ತ್ರ ಹೇಳೋದು ಗೊತ್ತಾ? ಅವರು ಸಿಎಂ ಆಗಿ ಮೂರು ದಿನ ಉಳಿದುಕೊಳ್ಳಲಿಲ್ಲ. ಅಂಥವರು ಅದ್ಯಾವ ಶಾಸ್ತ್ರ ಹೇಳುತ್ತಾರೆ. ಬಹುಮತ ಇಲ್ಲದಿದ್ದರೂ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಶಾಸ್ತ್ರ ಗೊತ್ತಿದ್ದಿದ್ದರೆ ಅವರು ಸಿಎಂ ಆಗಿಯೇ ಉಳಿದುಕೊಳ್ಳಬಹುದಿತ್ತಲ್ಲ. ಯಾಕೆ ಉಳಿಯಲಿಲ್ಲ ಎಂದು ಕಾಲೆಳೆದರು.

Share This Article
Leave a Comment

Leave a Reply

Your email address will not be published. Required fields are marked *