ಅಂಜಲಿ ಪಾದಯಾತ್ರೆಗೆ ಸಿದ್ದರಾಮಯ್ಯ ಸಾಥ್ – ಪೋಲಿಸರಿಗೆ ಎಚ್ಚರಿಕೆ

Public TV
4 Min Read

ಬೆಳಗಾವಿ: ಖಾನಾಪುರ ಕ್ಷೇತ್ರದ ಸಮಗ್ರ ಅಭಿವೃದ್ಧಿ, ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಖಾನಾಪುರದಿಂದ ಬೆಳಗಾವಿ ಸುವರ್ಣವಿಧಾನಸೌಧವರೆಗೆ 40 ಕಿ.ಮೀ. ಪಾದಯಾತ್ರೆ ನಡೆಸಿದರು. ಅಂಜಲಿ ನಿಂಬಾಳ್ಕರ್ ಅವರ ಹೋರಾಟಕ್ಕೆ ಇಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ, ಪುತ್ರ ಯತೀಂದ್ರ ಸಿದ್ದರಾಮಯ್ಯ, ಶಾಸಕ ಗಣೇಶ್ ಹುಕ್ಕೇರಿ ಸೇರಿದಂತೆ ವಿವಿಧ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದರು.

ನಿನ್ನೆ ಮಧ್ಯಾಹ್ನ 3ಕ್ಕೆ ಖಾನಾಪುರ ಪಟ್ಟಣದಿಂದ ಪಾದಯಾತ್ರೆ ಆರಂಭಿಸಿದ್ದ ಅಂಜಲಿ ನಿಂಬಾಳ್ಕರ್ ಅವರು ಯಳ್ಳೂರು ಗ್ರಾಮದ ಸರ್ಕಾರಿ ಮರಾಠಿ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದರು. ಇಂದು ಬೆಳಗ್ಗೆ ಯಳ್ಳೂರು ಗ್ರಾಮದಿಂದ ಮತ್ತೆ ಪಾದಯಾತ್ರೆ ಮುಂದುವರಿಸಿದ ಅವರು ಬೆಳಗಾವಿಯ ಹಲಗಾ ಕ್ರಾಸ್ ತಲುಪುತ್ತಿದ್ದಂತೆಯೇ ವಿಪಕ್ಷ ನಾಯಕ ಸಿದ್ದರಾಮಯ್ಯ ಸಾಥ್ ನೀಡಿದರು. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಬಳಿಕ ಲವ್ ಜಿಹಾದ್ ನಿಷೇಧ ಕಾಯ್ದೆ: ಸುನಿಲ್ ಕುಮಾರ್

ಎನ್‍ಹೆಚ್ 4 ಸರ್ವೀಸ್ ರಸ್ತೆ ಮೂಲಕ ಸುವರ್ಣಸೌಧದತ್ತ ಸಾಗಿರುವ ಪಾದಯಾತ್ರೆಯಲ್ಲಿ ಕಾರ್ಯಕರ್ತರು, ಸಿದ್ದರಾಮಯ್ಯ ಪರ ಘೋಷಣೆ ಹಾಕಿ, ಬಿಜೆಪಿ ಸರ್ಕಾರ ವಿರುದ್ಧ ಘೋಷಣೆ ಕೂಗಿದರು.

ಇದೇ ವೇಳೆ ಮಾತನಾಡಿದ ಸಿದ್ದರಾಮಯ್ಯ, ಅಂಜಲಿ ನಿಂಬಾಳ್ಕರ್ ಕ್ಷೇತ್ರದ ಸಮಸ್ಯೆಗಳನ್ನು ಮುಂದಿಟ್ಟುಕೊಟ್ಟು ಪಾದಯಾತ್ರೆ ಮಾಡುತ್ತಿದ್ದಾರೆ. ನಿನ್ನೆಯಿಂದ ಪಾದಯಾತ್ರೆ ಆರಂಭವಾಗಿದೆ. ಸರ್ಕಾರದ ಗಮನ ಸೆಳೆಯಲು ಪಾದಯಾತ್ರೆ ಮಾಡುತ್ತಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಕ್ಷೇತ್ರದ ಜನರಿಗೆ ಪರಿಹಾರವನ್ನು ಕೊಡಿಸಲು, ನಿದ್ದೆ ಮಾಡುತ್ತಿರುವ ಸರ್ಕಾರವನ್ನು ಎಚ್ಚರಿಸಲು ಪಾದಯಾತ್ರೆ ಮಾಡುತ್ತಿದ್ದಾರೆ. ನಾನು ಹೋರಾಟದಲ್ಲಿ ಭಾಗಿಯಾಗಿ ಪಾದಯಾತ್ರೆಗೆ ಬೆಂಬಲ ಕೊಡುತ್ತಿದ್ದೇನೆ ಎಂದರು.

ಪೊಲೀಸರ ತಡೆ:
ಶಾಸಕಿ ಅಂಜಲಿ ನಿಂಬಾಳ್ಕರ್ ಜೊತ ಪಾದಯಾತ್ರೆ ಹೊರಟ ಸಿದ್ದರಾಮಯ್ಯ ಅವರನ್ನು ಸುವರ್ಣ ಗಾರ್ಡನ್ ಬಳಿ ಪೊಲೀಸರು ತಡೆದರು. ಆಗ ಪೊಲೀಸರಿಗೆ ಕ್ಲಾಸ್ ತಗೆದುಕೊಂಡ ಸಿದ್ದರಾಮಯ್ಯ ಅವರು ಹೋರಾಟ ತಡೆಹಿಡಿಯದಂತೆ ಎಚ್ಚರಿಸಿದರು. ಇದನ್ನೂ ಓದಿ: ಉಭಯ ಸದನಗಳಲ್ಲೂ ‘ಅಪ್ಪು’ ಗುಣಗಾನ

ಪುತ್ರ ಹಾಗೂ ಶಾಸಕ ಯತೀಂದ್ರಗೆ ತಳ್ಳಾಟ ಮಾಡಿದ ವೇಳೆ ಪ್ರತಿಭಟನಾಕಾರರ ತಡೆದ ಪೊಲೀಸರಿಗೆ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ, ಮ್ಯಾನ್ ಹ್ಯಾಂಡ್ಲಿಂಗ್ ಮಾಡ್ತೀಯಾ. ಸದನದಲ್ಲಿ ನಿನ್ನ ವಿರುದ್ದ ಹಕ್ಕುಚ್ಯುತಿ ಮಂಡನೆ ಮಾಡ್ತೀನಿ ಎಂದರು. ಬಳಿಕ ಸುವರ್ಣ ಗಾರ್ಡನ್ ಬಳಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಿದ್ದರಾಮಯ್ಯ ಹಾಗೂ ಅಂಜಲಿ ನಿಂಬಾಳ್ಕರ್ ಭಾಷಣ ಮಾಡಿದರು.

ರಾಜ್ಯ ಸರ್ಕಾರ ನಿದ್ದೆ ಮಾಡುತ್ತಿದೆ – ಸಿದ್ದರಾಮಯ್ಯ:
ಖಾನಾಪುರ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ್ ಸುವರ್ಣಸೌಧದವರೆಗೂ ಸುವರ್ಣಸೌಧ ಚಲೋ ಮೂಲಕ ಪಾದಯಾತ್ರೆ ಮಾಡಿದ್ದಾರೆ. ರಾಜ್ಯದಲ್ಲಿ ಇವತ್ತು ನಿದ್ರೆ ಮಾಡುತ್ತಿರುವ ಸರ್ಕಾರ ಇದೆ. ಎಷ್ಟೇ ಸಾರಿ ಸಮಸ್ಯೆಗಳನ್ನ ಸರ್ಕಾರದ ಗಮನಕ್ಕೆ ತಂದರೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಬಿಜೆಪಿಯವರು ಅಧಿಕಾರಕ್ಕೆ ಬಂದ ಮೇಲೆ ಪ್ರವಾಹ, ಅತಿವೃಷ್ಠಿ ಹಾಗೂ ಬರ ರಾಜ್ಯವನ್ನು ಕಾಡ್ತಾ ಇದೆ. 2019ರಲ್ಲಿ ಬಿಎಸ್‍ವೈ ಸಿಎಂ ಆದ ವೇಳೆ ಅತಿ ದೊಡ್ಡ ಪ್ರವಾಹ ಬಂತು. ಕಳೆದ ಮೂರು ವರ್ಷದಿಂದ ಸತತವಾಗಿ ಪ್ರವಾಹ ಬಂದಿದೆ. ನಾನು ಸಹ ಖಾನಾಪುರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದೆ. ಪ್ರವಾಹ ಪೀಡಿತರಿಗೆ ಪರಿಹಾರ ಕೊಡಿಸುವ ಭರವಸೆ ನೀಡಿದ್ದೆವು. ಆದ್ರೆ 31 ಜಿಲ್ಲೆಗಳ ಪೈಕಿ 21 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿ ಹಾನಿಯಾಗಿದೆ. 31 ಲಕ್ಷ ಎಕರೆ ಪ್ರದೇಶದಲ್ಲಿನ ಬೆಳೆ ನಷ್ಟ ಆಗಿದೆ. ಶೇಕಡಾ 75 ರಷ್ಟು ಬೆಳೆ ಹಾನಿಯಾಗಿದೆ. ಭತ್ತ, ರಾಗಿ, ಶೇಂಗಾ ಬೆಳೆ ಹಾನಿಗೀಡಾಗಿದೆ ಎಂದರು.

ನಮ್ಮ ಸರ್ಕಾರ ಇದ್ದಾಗ ಎಲ್ಲ ಬೆಳೆ ಹಾನಿಗೆ ಪರಿಹಾರ ನೀಡಿದ್ದೇವೆ. ಈಗ ಬಿಡಿಗಾಸು ಪರಿಹಾರ ನೀಡುತ್ತಿದ್ದಾರೆ. ಪರಿಹಾರ ವಿತರಣೆಗೆ ಸರ್ಕಾರದಿಂದ ಒಂದೇ ಒಂದು ರೂಪಾಯಿ ಬಂದಿಲ್ಲ. ಇವರ ಸರ್ಕಾರ ಬಂದ ಮೇಲೆ 2019ರಲ್ಲಿ ಬಿದ್ದ ಮನೆಗಳಿಗೂ ಪರಿಹಾರ ಬಂದಿಲ್ಲ. ಸರಿಯಾದ ರೀತಿಯಲ್ಲಿ ಸರ್ವೆ ಸಹ ಮಾಡುತ್ತಿಲ್ಲ. ನಾವು ಮಾಡಿದ ಯೋಜನೆಗಳನ್ನ ಈ ಸರ್ಕಾರ ನಿಲ್ಲಿಸಿಬಿಟ್ಟಿದೆ. ನಮ್ಮ ಸರ್ಕಾರ ಇದ್ದಾಗ ಜಾರಿ ಮಾಡಿದ ಭಾಗ್ಯಗಳನ್ನ ಈ ಸರ್ಕಾರ ಬಂದ್ ಮಾಡಿದೆ. ಈ ಸರ್ಕಾರ ಕಿವುಡರ ರೀತಿ ವರ್ತಿಸುತ್ತಿದೆ. ಈ ಸರ್ಕಾರದ್ದು ದಪ್ಪ ಚರ್ಮ ಇದೆ. ಇದು ಲಜ್ಜೆಗೆಟ್ಟ ಸರ್ಕಾರ ಎಂದು ಹೇಳಿ, ಪ್ರವಾಹ ಪರಿಸ್ಥಿತಿಯ ಬಗ್ಗೆ ಸದನದಲ್ಲಿ ಮಾತನಾಡುತ್ತೇನೆ ಎಂದರು. ಇದನ್ನೂ ಓದಿ: ಬೆಳಗಾವಿಯಿಂದ ‘ಸುಶಾಸನ ಸಂಗಮ’ಕ್ಕೆ ವಾರಾಣಸಿಗೆ ಹೊರಟ ಸಿಎಂ ಬೊಮ್ಮಾಯಿ

ಖಾನಾಪುರ ಜನರಿಗೆ ನ್ಯಾಯ ಒದಗಿಸಿಕೊಂಡಲು ಹೋರಾಟ ಮಾಡುವೆ. ಭಂಡರ ತರಹ ಇವರು ಕುರ್ಚಿಗೆ ಅಂಟಿಕೊಂಡಿದ್ದಾರೆ. ಕುರ್ಚಿ ಬಿಟ್ಟು ತೊಲಗಿ ಎಂದು ರಾಜ್ಯ ಸರ್ಕಾರಕ್ಕೆ ತಿವಿದರು.

ಇದೇ ವೇಳೆ ಮಾತನಾಡಿದ ಶಾಸಕಿ ಅಂಜಲಿ ನಿಂಬಾಳ್ಕರ್, ಖಾನಾಪುರ ಕ್ಷೇತ್ರದ ವಿವಿಧ ಬೇಡಿಕೆಗಳನ್ನ ಈಡೇರಿಸಬೇಕು. ರೈತರ ಬೆಳೆ ಹಾನಿಗೆ ಪ್ರತಿ ಎಕರೆಗೆ 50 ಸಾವಿರ ರೂಪಾಯಿ ಪರಿಹಾರ ನೀಡಬೇಕು. ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ಪ್ರವಾಹ ಸಂದರ್ಭದಲ್ಲಿ ಬಿದ್ದ ಮನೆಗಳಿಗೆ ಪರಿಹಾರ ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ನಾಳೆ ಬೆಳಗಾವಿ ಬಂದ್‍ಗೆ MES ಕರೆ – ಬಂದ್‍ಗೆ ಅವಕಾಶ ಕೊಡಲ್ಲ ಎಂದ ಕರ್ನಾಟಕ ಪೊಲೀಸ್

ಅಂಜಲಿ ನಿಂಬಾಳ್ಕರ್ ಪಾದಯಾತ್ರೆಗೆ ತಡವಾಗಿ ಆಗಮಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರನ್ನು ಹಸಿರು ಶಾಲು ಹಾಕಿ ಅಂಜಲಿ ನಿಂಬಾಳ್ಕರ್ ಸ್ವಾಗತಿಸಿದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಸದನದ ಒಳಗೆ ಗಮನ ಸೆಳೆಯೋದಾಗಿ ಹೇಳಿದ್ದಾರೆ. ಸ್ಮಾರ್ಟ್ ಸಿಟಿಯಲ್ಲಿ ಆದ ಅವ್ಯವಹಾರ ಬಗ್ಗೆ ಸರ್ಕಾರ ಗಮನ ಸೆಳೆಯಲು ನಮ್ಮ ಎಲ್ಲಾ ಶಾಸಕರು ಪ್ರಯತ್ನ ಮಾಡುತ್ತೇವೆ. ನೆರೆ ಪರಿಹಾರಕ್ಕೆ ಪಕ್ಷಾತೀತವಾಗಿ ಎಲ್ಲಾ ಶಾಸಕರ ಹೋರಾಟ ಮಾಡುತ್ತೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *