ಒಂದು ತ್ಯಾಗ ಒಂದು ಸೇಫ್‌ ಜಾಗ – ಆಪ್ತರ ಜೊತೆ ಮನ ಬಿಚ್ಚಿ ಮಾತನಾಡಿದ ಸಿದ್ದರಾಮಯ್ಯ

Public TV
2 Min Read

– ಮುಂದಿನ ಚುನಾವಣೆಗೆ ಸಿದ್ದರಾಮಯ್ಯ ಸ್ಪರ್ಧೆ ಎಲ್ಲಿಂದ?
– ವರುಣಾದಲ್ಲಿ ಯತೀಂದ್ರ ಸ್ಪರ್ಧೆ ಇಲ್ಲ?

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಮುಂದಿನ ಚುನಾವಣೆಯಲ್ಲಿ(Election) ಎಲ್ಲಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಪ್ರಶ್ನೆಗೆ ಇಲ್ಲಿಯವರೆಗೆ ಅಧಿಕೃತ ಉತ್ತರ ಸಿಕ್ಕಿಲ್ಲ. ಆದರೆ ಈಗ ಬರುತ್ತಿರುವ ಮಾಹಿತಿಗಳ ಪ್ರಕಾರ ಸಿದ್ದರಾಮಯ್ಯ ತಮ್ಮ ಕರ್ಮಭೂಮಿ ವರುಣಾ(Varuna) ಕ್ಷೇತ್ರದಲ್ಲೇ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ.

ಹೌದು. ಕಳೆದ ಬಾರಿ ಪುತ್ರ ಯತೀಂದ್ರನಿಗಾಗಿ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದ ಸಿದ್ದರಾಮಯ್ಯ ಬಾದಾಮಿಯಿಂದ(Badami) ಸ್ಪರ್ಧಿಸಿ ಗೆದ್ದಿದ್ದರು. ಹೀಗಾಗಿ ಈ ಬಾರಿಯೂ ಬಾದಾಮಿಯಿಂದ ಸ್ಪರ್ಧೆ ಮಾಡುತ್ತಾರಾ ಅಥವಾ ವರುಣಾದಲ್ಲೇ ಸ್ಪರ್ಧೆ ಮಾಡುತ್ತಾರಾ ಎಂಬ ಪ್ರಶ್ನೆ ಎದ್ದಿತ್ತು. ಆದರೆ ಈಗ ಆಪ್ತರ ಜೊತೆಗಿನ ಮತುಕತೆಯಲ್ಲಿ ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ನವೆಂಬರ್‌ನಲ್ಲಿ ಕರ್ನಾಟಕಕ್ಕೂ ಬರಲಿದೆ ವಂದೇ ಭಾರತ್ ಸೆಮಿ ಹೈಸ್ಪೀಡ್ ರೈಲು

ಮೈಸೂರಿನ(Mysuru) ಆಪ್ತರ ಜೊತೆ ಕೆಲ ದಿನಗಳ ಹಿಂದೆ ಸಿದ್ದರಾಮಯ್ಯ ಮನಬಿಚ್ಚಿ ಮಾತನಾಡಿದ್ದಾರೆ. ಈ ವೇಳೆ ಆಪ್ತರು, ನೀವು ಎಲ್ಲಿಂದ ಸ್ಪರ್ಧೆ ಮಾಡುತ್ತೀರಿ ಎನ್ನುವುದನ್ನು ಈಗಲೇ ದೃಢಪಡಿಸಿಕೊಳ್ಳಿ. ಕೊನೆ ಕ್ಷಣದಲ್ಲಿ ಗೊಂದಲ ಬೇಡ ಎಂದು ಸಲಹೆ ನೀಡಿದ್ದಾರೆ. ಇದಕ್ಕೆ ಸಿದ್ದರಾಮಯ್ಯ, ಎರಡು ತಿಂಗಳಲ್ಲಿ ಅಂತಿಮ ತೀರ್ಮಾನ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ಉತ್ತರಕ್ಕೆ, ಎಲ್ಲೂ ಕ್ಷೇತ್ರ ಹುಡುಕಿಕೊಂಡು ಹೋಗೋದು ಬೇಡ ವರುಣಾದಿಂದಲೇ ಸ್ಪರ್ಧೆ ಮಾಡಿ ಎಂದಿದ್ದಾರೆ.

ವರುಣಾ ಬಗ್ಗೆಯೂ ಯೋಚನೆ ಮಾಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದಾಗ, ಸಾರ್ ಯೋಚನೆ ಮಾಡಬೇಡಿ. ನೀವು ವರುಣಾದಿಂದ ಸ್ಪರ್ಧೆ ಮಾಡಿ. ಡಾಕ್ಟರ್ ಬಾದಾಮಿಯಿಂದ ಸ್ಪರ್ಧೆ ಮಾಡಲಿ. ನೀವು ವರುಣಾದಿಂದ ಸ್ಪರ್ಧೆ ಮಾಡಿದರೆ ಗೆಲುವು ಸುಲಭ. ಯಾವ ರಿಸ್ಕ್ ಇರಲ್ಲ. ರಾಜ್ಯದ ಬೇರೆ ಕ್ಷೇತ್ರಗಳಿಗೆ ಓಡಾಡಬಹುದು. ಡಾಕ್ಟರ್ ಬಾದಾಮಿಯಿಂದ ಸ್ಪರ್ಧೆ ಮಾಡಿದರೆ ನಿಮಗೂ ಪ್ರಚಾರಕ್ಕೆ ಹೋಗಲು ಸಮಯವೂ ಸಿಗುತ್ತದೆ ಎಂದಿದ್ದಾರೆ.

ಆಪ್ತರ ಈ ಮಾತಿಗೆ, ಈ ವಿಷಯದಲ್ಲಿ ಸ್ಪಷ್ಟವಾಗಿದ್ದೇನೆ. ನಾನು ವರುಣಾದಿಂದ ಸ್ಪರ್ಧೆ ಮಾಡಿದರೆ ಯತೀಂದ್ರ ಬೇರೆ ಎಲ್ಲೂ ಸ್ಪರ್ಧೆ ಮಾಡುವುದಿಲ್ಲ. ಅವನು ಕ್ಷೇತ್ರ ನೋಡಿಕೊಂಡು ವರುಣಾದಲ್ಲೇ ಇರುತ್ತಾನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಬೆಂಬಲಿಗರು, ಯತೀಂದ್ರ ಅವರಿಗೆ ಅವಕಾಶ ಇರುತ್ತಲ್ಲ ಎಂದಾಗ ಸಿದ್ದರಾಮಯ್ಯ, ವರುಣಾ ನನ್ನ ಕ್ಷೇತ್ರ ಇದು ನನ್ನ ಕೊನೆಯ ಚುನಾವಣೆ. ನೋಡೋಣ ಏನೇನು ಆಗುತ್ತೆ ಅಂತ. ಬಟ್ ಒಂದಂತು ಕ್ಲಿಯರ್ ನಾನು ವರುಣಾದಿಂದ ಸ್ಪರ್ಧೆ ಮಾಡಿದರೆ ಯತೀಂದ್ರನೇ ಕ್ಷೇತ್ರ ನೋಡಿಕೊಳ್ಳುತ್ತಾನೆ. ಬೇರೆ ಕಡೆಯಿಂದ ಸ್ಪರ್ಧೆ ಮಾಡಲ್ಲ. ರಾಜ್ಯದ ಬೇರೆ ಬೇರೆ ಕಡೆ ಪ್ರಚಾರಕ್ಕೆ ತೆರಳಲು ನನಗೂ ಅನುಕೂಲವಾಗುತ್ತದೆ. ಯಾವುದಕ್ಕೂ ಇನ್ನು ಸಮಯವಿದೆ ಎಂದು ಹೇಳಿದ್ದಾರೆ.

ಮೈಸೂರಿನ ಆಪ್ತರ ಮುಂದೆ ಮಾತನಾಡಿರುವ ಸಿದ್ದರಾಮಯ್ಯ ವರುಣಾದಿಂದ ಸ್ಪರ್ಧೆ ಮಾಡುವ ಸುಳಿವು ಬಿಟ್ಟುಕೊಟ್ಟಿದ್ದು, ಕೊನೆಯ ಚುನಾಬಣೆಗೆ ತವರು ಜಿಲ್ಲೆಯ ಕರ್ಮಭೂಮಿ ವರುಣಾ ಕ್ಷೇತ್ರದ ಆಯ್ಕೆ ಬಹುತೇಕ ಖಚಿತ ಎನ್ನಲಾಗುತ್ತಿದೆ. ಆಪ್ತರ ಮುಂದೆ ಮನಸ್ಸಿನ ಭಾವನೆ ಬಿಚ್ಚಿಟ್ಟ ಸಿದ್ದರಾಮಯ್ಯ ವರುಣಾ ಪ್ತೀತಿಯನ್ನು ಮುಕ್ತವಾಗಿ ಮಾತನಾಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *