ಬೆಂಗಳೂರು: ಜನರು ಬಿಜೆಪಿ ಸರ್ಕಾರದಿಂದ ಬೇಸತ್ತಿದ್ದಾರೆ. ಆಡಳಿತ ಪಕ್ಷವನ್ನು ತೊಲಗಿಸಬೇಕು ಅಂತ ಜನ ಭಾವಿಸಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದರು.
ಈ ಕುರಿತಂತೆ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಜನರು ಬಿಜೆಪಿ ಸರ್ಕಾರದಿಂದ ಬೇಸತ್ತಿದ್ದಾರೆ. ಆಡಳಿತ ಪಕ್ಷವನ್ನು ತೊಲಗಿಸಬೇಕು ಅಂತ ಜನ ಭಾವಿಸಿದ್ದಾರೆ. ಆದ್ದರಿಂದ ಮುಂದಿನ ಚುನಾವಣೆಯ ಸಂದರ್ಭದಲ್ಲಿ ನಮಗೆ ಸ್ಪಷ್ಟ ಬಹುಮತವನ್ನು ರಾಜ್ಯದ ಜನತೆ ನೀಡುತ್ತಾರೆ. ಈ ಫಲಿತಾಂಶದ ಮೂಲಕ ಜನರ ಭಾವನೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಈ ಚುನಾವಣೆಯಲ್ಲಿ 1,187 ಸ್ಥಾನಗಳಲ್ಲಿ ನಾವು 500ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದೇವೆ ಮತ್ತು ಬಿಜೆಪಿಯವರು 430 ಸ್ಥಾನಗಳನ್ನು ಗೆದ್ದಿದ್ದಾರೆ. ನಾವು ಹೆಚ್ಚು ಸಂಸ್ಥೆಗಳಲ್ಲಿ ಕೂಡ ಗೆದ್ದಿರುವ ಕಾರಣ ನಮಗೆ ಗ್ರಾಮೀಣ ಭಾಗದಲ್ಲಿ ಇನ್ನೂ ಹೆಚ್ಚು ಬೆಂಬವಿದೆ. ಈಗ ಪಟ್ಟಣ ಪ್ರದೇಶದಲ್ಲಿ ಕೂಡ ಕಾಂಗ್ರೆಸ್ಗೆ ಜನ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು. ಇದನ್ನೂ ಓದಿ: ರಾಜ್ಯದ 58 ಪುರಸಭೆ, 57 ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಇಂದು
ಈ ಬಾರಿ ಬಿಜೆಪಿ, ಜೆಡಿಎಸ್ ಸೋಲಿಸಿ 2023ಕ್ಕೆ ಕಾಂಗ್ರೆಸ್ ಅಧಿಕಾರ ಬರುತ್ತದೆ. ಸದ್ಯ ಈ ಫಲಿತಾಂಶ ಬಂದಿರುವುದರಿಂದ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾಗುತ್ತದೆ ಮತ್ತು ಮತದಾರರಲ್ಲೂ ಬದಲಾವಣೆ ಗಾಳಿ ಬೀಸುತ್ತದೆ. ಬಿಜೆಪಿಯಲ್ಲಿ ಗುಂಪುಗಳಿವೆ. ಸಿಎಂ ತೆಗೆಯಬೇಕು ಅಂತ ಒಂದು ಗುಂಪು, ಉಳಿಸಬೇಕು ಅಂತ ಒಂದು ಗುಂಪು ಇದೆ. ಆದರೆ ಹೈಕಮಾಂಡ್ ಇದಕ್ಕೆ ತೇಪೆ ಹಚ್ಚುತ್ತಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅವರಿಗೆ ಅಧಿಕಾರಕ್ಕೆ ಬರಲ್ಲ ಅಂತ ಗೊತ್ತಿದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ನಲ್ಲಿ ಎರಡು ದೋಣಿ ಇದೆ ಎಂಬ ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿದ ಅವರು, ನಮ್ಮಲ್ಲಿ ಯಾವುದೇ ಎರಡು ದೋಣಿ ಇಲ್ಲ. ಕಾಂಗ್ರೆಸ್ ನಲ್ಲಿ ಇರುವುದು ಒಂದೇ ದೋಣಿ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ರಾಜ್ಯದ ಜನತೆಯ ಭಾವನೆ ಹೇಗಿದೆ ಅನ್ನೋದಕ್ಕೆ ಇದು ಸಾಕ್ಷಿ : ಡಿ.ಕೆ ಶಿವಕುಮಾರ್
ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಡಿ.27ರಂದು ಚುನಾವಣೆ ನಡೆದಿತ್ತು. 58 ಪುರಸಭೆ, 57 ಗ್ರಾಮ ಪಂಚಾಯಿತಿಗಳಿಗೆ ನಡೆದ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಿದ್ದು, ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದೆ. ಹಲವು ಕಡೆ ಇನ್ನೂ ಮತ ಎಣಿಕೆ ನಡೆಯುತ್ತಿದೆ.