ಬಿಜೆಪಿ 5 ಸ್ಥಾನ ಗೆದ್ರೂ ಸರ್ಕಾರ ಸೇಫ್ – ವಿರೋಧಿಗಳಿಗೆ ಸಿದ್ದು ಪರೋಕ್ಷ ಟಾಂಗ್

Public TV
1 Min Read

– ದಲಿತ ಸಿಎಂ ಚರ್ಚೆ ಈಗಲೇ ಅಗತ್ಯವಿಲ್ಲ

ಬಾಗಲಕೋಟೆ: ದಲಿತ ಸಿಎಂ ಹಾಗೂ ಮೈತ್ರಿ ಸರ್ಕಾರ ರಚನೆ ಬಗ್ಗೆ ಮಾಜಿ ಸಿಎಂ, ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಲಿತ ಸಿಎಂ ವಿಚಾರ ಬಗ್ಗೆ ಮಾತನಾಡಲು, ಯಾವುದೇ ತೀರ್ಮಾನ ಮಾಡಲು ಉಪಚುನಾವಣೆಯ ಫಲಿತಾಂಶ ಬರಬೇಕು. ಪಕ್ಷದ ಹೈಕಮಾಂಡ್ ಈ ಬಗ್ಗೆ ತೀರ್ಮಾನ ಮಾಡುತ್ತದೆ. ಆದ್ದರಿಂದ ಈಗಲೇ ಚರ್ಚೆ ಶುರುಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು.

ಯಾವುದೇ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡಲು ಉಪಚುನಾವಣೆ ಫಲಿತಾಂಶ ಬರಬೇಕು. ಈ ಬಗ್ಗೆ ಫಲಿತಾಂಶ ಬಂದ ಬಳಿಕ ಮಾತನಾಡುತ್ತೇನೆ. ಚುನಾವಣೆಯಲ್ಲಿ ನಾವು ಮೊದಲಿಗೆ ಹತ್ತು ಸ್ಥಾನ ಗೆಲ್ಲಬೇಕು. ಜೆಡಿಎಸ್ ಪಕ್ಷ ಒಂದು ಅಥವಾ ಎರಡು ಸ್ಥಾನ ಗೆದ್ದರೆ ಮಾತ್ರ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಬಿಜೆಪಿ 5 ಸ್ಥಾನ ಗೆದ್ದರೂ, ಬಿಎಸ್‍ಪಿ ಅಭ್ಯರ್ಥಿ ಸೇರಿದಂತೆ 112 ಸ್ಥಾನ ಆಗುತ್ತದೆ ಎಂದು ಪರೋಕ್ಷವಾಗಿ ಮೈತ್ರಿ ಸರ್ಕಾರ ರಚನೆಯ ವಿಷಯಕ್ಕೆ ಟಾಂಗ್ ನೀಡಿ, ಫಲಿತಾಂಶಕ್ಕೂ ಮೊದಲೇ ಬಿಜೆಪಿ ಸರ್ಕಾರ ಸೇಫ್ ಎಂಬರ್ಥದಲ್ಲಿ ಮಾತನಾಡಿದರು.

ಇದೇ ವೇಳೇ ಸಿದ್ದರಾಮಯ್ಯ ಅವರನ್ನು ಬಿಜೆಪಿಗೆ ಕರೆತರುತ್ತೇನೆ ಎಂಬ ರಮೇಶ್ ಜಾರಕಿಹೊಳಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯದಲ್ಲಿ ಹುಡುಗಾಟಿಕೆ, ಮಕ್ಕಳಾಟಿಕೆ ಆಡಬಾರದು. ಅನರ್ಹ ಶಾಸಕ ರಮೇಶ ಜಾರಕಿಹೊಳಿ ಗಂಭೀರವಾಗಿ ಮಾತನಾಡೋದನ್ನು ಕಲಿಯಬೇಕು. ರಮೇಶ್ ಹೇಳಿಕೆಗೆ ನಗಬೇಕೋ, ಅಳಬೇಕೋ ತಿಳಿಯುತ್ತಿಲ್ಲ. ಇವೆಲ್ಲ ಬಾಲಿಷವಾದ ಹೇಳಿಕೆಗಳಾಗಿದ್ದು, ಅವರಿಗೆ ಜವಾಬ್ದಾರಿ ಇದ್ದರೆ ಹೀಗೆಲ್ಲ ಮಾತನಾಡಲ್ಲ. ನಮ್ಮ ಹೋರಾಟವೇ ಕೋಮುವಾದಿ ಪಕ್ಷದ ವಿರುದ್ಧವಾಗಿದೆ. ಅವನ್ಯಾರು ರೀ ರಮೇಶ್, ಅವನಿಗೆ ಐಡಿಯಾಲಜಿ ಗೊತ್ತಿಲ್ಲ, ಪೊಲಿಟಿಕಲ್ ಫಿಲಾಸಫಿ ಗೊತ್ತಿಲ್ಲ. ಏನು ಓದಿಕೊಂಡಿಲ್ಲ ಬಾಯಿಗೆ ಬಂದಂಗೆ ಮಾತನಾಡುತ್ತಾರೆ. ಅದಕ್ಕೆಲ್ಲ ಕಿಮ್ಮತ್ತು ಕೊಡಬೇಕಿಲ್ಲ ಎಂದು ಕಿಡಿಕಾರಿದರು.

Share This Article
Leave a Comment

Leave a Reply

Your email address will not be published. Required fields are marked *