ಸಿದ್ದರಾಮಯ್ಯ ಡೀಲ್ ರಾಜ, ಸೂಟ್‌ಕೇಸ್‌ನಲ್ಲಿ ಹಣ ತೆಗೆದುಕೊಂಡಿದ್ದಾರೆ: ಟಿಎ ಶರವಣ

Public TV
1 Min Read

ಬೆಂಗಳೂರು: ರಾಜ್ಯಸಭೆ ಚುನಾವಣೆ ಬಳಿಕ ಮಾತಿನ ಸಮರಗಳು ಜೋರಾಗಿ ನಡೆಯುತ್ತಿವೆ. ಅಡ್ಡ ಮತದಾನ ಮಾಡಿದ ಶಾಸಕರು ಮತ್ತು ಕಾಂಗ್ರೆಸ್ ವಿರುದ್ಧ ಜೆಡಿಎಸ್ ಪ್ರತಿಭಟನೆಯ ಹಾದಿ ಹಿಡಿದಿದೆ. ವಿಧಾನ ಪರಿಷತ್ ಸದಸ್ಯ ಟಿಎ ಶರವಣ ಒಂದು ಹೆಜ್ಜೆ ಮುಂದೆ ಹೋಗಿ ರಾಜ್ಯಸಭೆ ಸೋಲಿಗೆ ಸಿದ್ದರಾಮಯ್ಯ ಕಾರಣ ಎಂದು ಕಿಡಿಕಾರಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಜೆಡಿಎಸ್ ಪ್ರತಿಭಟನೆಯಲ್ಲಿ ಭಾಗವಹಿಸಿದ ಅವರು ಸಿದ್ದರಾಮಯ್ಯ ವಿರುದ್ಧ ಕೆಂಡಾಮಂಡಲರಾಗಿದ್ದಾರೆ ಹಾಗೂ ಸಿದ್ದರಾಮಯ್ಯ ಡೀಲ್ ರಾಜ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಅಡ್ಡ ಮತದಾನ: ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ದೂರಿಗೆ JSD ನಿರ್ಧಾರ

ಸಿದ್ದರಾಮಯ್ಯ ಡೀಲ್ ರಾಜ, ಡೀಲ್ ರಾಮಯ್ಯ. ಸಿದ್ದರಾಮಯ್ಯ ಸುಳ್ಳು ರಾಮಯ್ಯ. ಮಾತಾಡೋದು ಆಚಾರ, ಮಾಡೋದು ಬದನೆಕಾಯಿ. ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಬಿ ಟೀಂ ಸಿದ್ದರಾಮಯ್ಯ ಎಂಬುದು ಗೊತ್ತಾಗಿದೆ. ಬಿಜೆಪಿ ಗೆಲ್ಲಿಸೋಕೆ ಎಷ್ಟು ಸೂಟ್‌ಕೇಸ್ ತಗೊಂಡಿದ್ದಾರೆ ಎಂಬುದನ್ನು ಸಿದ್ದರಾಮಯ್ಯ ಹೇಳಬೇಕು ಎಂದು ಒತ್ತಾಯ ಮಾಡಿದರು.

ಸಮ್ಮಿಶ್ರ ಸರ್ಕಾರದ ಬೆನ್ನಿಗೆ ಚೂರಿ ಹಾಕಿದ್ದೀರಿ. ಕಾಂಗ್ರೆಸ್‌ನ ಅನೇಕ ಶಾಸಕರು ಸಿದ್ದರಾಮಯ್ಯ ವಿರುದ್ಧ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯರಿಂದ ನಿಮಗೆ ಸೋಲು ಆಯ್ತು ಎಂದು ಆರೋಪ ಮಾಡಿದರು. ನಾನು, ಫಾರೂಕ್, ದೇವೇಗೌಡರ ಸೂಚನೆ ಮೇಲೆ ಸಿದ್ದರಾಮಯ್ಯಗೆ ಮನವಿ ಮಾಡಲು ಅವರ ಮನೆಗೆ ಹೋಗಿದ್ವಿ. ಆದರೆ ಸಿದ್ದರಾಮಯ್ಯ ಹೊರಗೆ ಬಂದು ಸುಳ್ಳು ಹೇಳಿದರು. ನಾನು ಕುಪೇಂದ್ರ ರೆಡ್ಡಿಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದ್ದೆ. ಆದರೆ ಅದನ್ನು ಹೇಳದೇ ಬೇರೆ ರೀತಿ ಬಿಂಬಿಸಿದರು ಎಂದು ಆರೋಪಿಸಿದರು. ಇದನ್ನೂ ಓದಿ: ರಾಜ್ಯಸಭೆಗೆ ಆಯ್ಕೆ ಹಿನ್ನೆಲೆ ಮಂತ್ರಾಲಯ ರಾಯರ ಮಠಕ್ಕೆ ನಟ ಜಗ್ಗೇಶ್ ಭೇಟಿ

2023ಕ್ಕೆ ಜನ ನಿಮಗೆ ತಕ್ಕಪಾಠ ಕಲಿಸುತ್ತಾರೆ. ಕುಮಾರಸ್ವಾಮಿ, ದೇವೇಗೌಡರು ಕಣ್ಣೀರು ಹಾಕಿದ್ದಾರೆ. ಇದಕ್ಕೆ ಕಾಂಗ್ರೆಸ್ ಬೆಲೆ ತೆರಬೇಕು. ಇಬ್ಬರು ಶ್ರೀನಿವಾಸರಿಗೆ ತಿರುಪತಿ ಶ್ರೀನಿವಾಸ ಶಾಪ ಕೊಡುತ್ತಾರೆ. ಮುಂದಿನ ಚುನಾವಣೆಯಲ್ಲಿ ಜನರು ನಿಮಗೆ ಪಾಠ ಕಲಿಸುತ್ತಾರೆ. ನಿಮಗೆ ತಾಕತ್ತಿದ್ದರೆ, ಪಕ್ಷಕ್ಕೆ ರಾಜೀನಾಮೆ ಕೊಟ್ಟು ಹೋಗಿ. ತಾಯಿಗೆ ಮೋಸ ಮಾಡುತ್ತೀರಿ ಅಲ್ವಾ? ಮಾನ ಮರ್ಯಾದೆ ಇದೆಯಾ ನಿಮಗೆ ಎಂದು ತರಾಟೆಗೆ ತೆಗೆದುಕೊಂಡರು.

Share This Article
Leave a Comment

Leave a Reply

Your email address will not be published. Required fields are marked *