ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ಸುಗ್ರೀವಾಜ್ಞೆ ಬೇಡ; ವಿಶೇಷ ಅಧಿವೇಶನ ಕರೆಯಿರಿ – ಸಿದ್ದರಾಮಯ್ಯ

Public TV
2 Min Read

ರಾಯಚೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ (SC ST) ಜಾತಿ ಸಂಖ್ಯೆಗೆ ಅನುಗುಣವಾಗಿ ಮೀಸಲಾತಿ (Reservation) ಇರಬೇಕು. ಹೀಗಾಗಿ ಮೀಸಲಾತಿ ಹೆಚ್ಚಳ ಆಗಬೇಕು ಅನ್ನೋ ಹೋರಾಟ ಹಳೆಯದು. ಸರ್ಕಾರಕ್ಕೆ ನಿಜವಾಗಿ ಕಾಳಜಿಯಿದ್ದರೆ, ಸುಗ್ರೀವಾಜ್ಞೆ ಹೊರಡಿಸುವ ಬದಲು ವಿಶೇಷ ಅಧಿವೇಶನ ಕರೆಯಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಒತ್ತಾಯಿಸಿದ್ದಾರೆ.

ಭಾರತ್ ಜೋಡೋ ಪಾದಯಾತ್ರೆ (Bharat Jodo Yatra) ವೇಳೆ ರಾಯಚೂರಿನ (Raichuru) ಗಿಲ್ಲೆಸುಗೂರಿನಲ್ಲಿ ಮಾತನಾಡಿದ ಅವರು, ಡಿಸೆಂಬರ್‌ವರೆಗೆ ಅಸೆಂಬ್ಲಿಗೆ ಯಾಕೆ ಕಾಯಬೇಕು. ಒಂದು ವಾರದ ಒಳಗೆ ಕರೆಯಿರಿ. ನಮ್ಮ ಪಕ್ಷದ ಸಂಪೂರ್ಣ ಬೆಂಬಲವಿದೆ. ಅಧಿವೇಶನದಲ್ಲಿ ಕಾಯ್ದೆ ಪಾಸ್ ಆದ ಮೇಲೆ ದೆಹಲಿಯಲ್ಲಿ ಕುಳಿತು 9 ಶೆಡ್ಯೂಲ್ ಮಾಡಿ. ಅಡ್ಡ ದಾರಿ ಹಿಡಿಯಬೇಡಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ನಿರ್ಧಾರ: ಸಿಎಂ ಘೋಷಣೆ

ನಮ್ಮ ಸರ್ಕಾರ, ಸಮ್ಮಿಶ್ರ ಸರ್ಕಾರ ಇದ್ದಾಗ ಪ್ರಿಯಾಂಕ್ ಖರ್ಗೆ ಸಚಿವರಿದ್ದಾಗ ನಾಗಮೋಹನ್ ದಾಸ್ ನೇತೃತ್ವದಲ್ಲಿ ಸಮಿತಿ ರಚನೆಯಾಯಿತು. ಸಮಿತಿ ವರದಿ ಬಂದಾಗ ನಮ್ಮ ಸರ್ಕಾರ ಇರಲಿಲ್ಲ. ವರದಿ ಕೊಟ್ಟು ಎರಡು ವರ್ಷದ ಮೂರು ತಿಂಗಳಿಗೂ ಜಾಸ್ತಿಯಾಗಿದೆ. ವರದಿ ಬಂದಾಗಿನಿಂದಾಗಲೂ ಎಸ್‌ಸಿ, ಎಸ್‌ಟಿ ಶಾಸಕರು‌ ಧ್ವನಿ ಎತ್ತಿದ್ದರು. ಕೊನೆ ಅಧಿವೇಶನದಲ್ಲಿ ಶಾಸಕರು ಬಾವಿಗಿಳಿದು ಹೋರಾಟ ಮಾಡಿದಾಗ ಸಿಎಂ ಸರ್ವಪಕ್ಷ ಶಾಸಕರ ಸಭೆ ಕರೆಯುತ್ತೇನೆ ಅಂತ ಹೇಳಿದರು. ಎಸ್‌ಟಿಗೆ 3 ರಿಂದ 7 % ಹೆಚ್ಚು ಮಾಡಬೇಕು. ಎಸ್‌ಸಿಗೆ 15 ರಿಂದ 17% ಆಗಬೇಕು. ಒಟ್ಟು 24 % ಆಗಬೇಕು ಅಂತ ವರದಿಯಲ್ಲಿದೆ. ಮೀಸಲಾತಿ ಸಾಮಾನ್ಯವಾಗಿ 50% ಗಿಂತ ಹೆಚ್ಚಾಗಬಾರದು ಅನ್ನೋ ಜಡ್ಜ್‌ಮೆಂಟ್ ಉಲ್ಲಂಘನೆಯಾಗುತ್ತದೆ. ಮೀಸಲಾತಿ ಪ್ರಮಾಣ ಹೆಚ್ಚಾಗಿರುವುದರಿಂದ ಇದಕ್ಕೆ ಸಂವಿಧಾನ ತಿದ್ದುಪಡಿ ಆಗಬೇಕು. ಒಂದು ವಾರ ದೆಹಲಿಯಲ್ಲಿ ಕೂತು 9 ಶೆಡ್ಯೂಲ್‌ನಲ್ಲಿ ಸೇರಿಸಿ, ಸುಗ್ರೀವಾಜ್ಞೆ ಬೇಡ ಎಂದಿದ್ದಾರೆ.

ಸರ್ಕಾರಕ್ಕೆ ಪರಿಶಿಷ್ಟ ಜಾತಿ, ಪಂಗಡದವರ ಬಗ್ಗೆ ಕಾಳಜಿಯಿಲ್ಲ. ಕೇವಲ ಮೊಸಳೆ ಕಣ್ಣೀರು ಹಾಕುತ್ತಿದೆ. ರಾಹುಲ್ ಗಾಂಧಿ ಅವರ ಭಾರತ್‌ ಜೋಡೋ ಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಪಾದಯಾತ್ರೆಯ ಫಲ ಮುಂದಿನ ಚುನಾವಣೆಯಲ್ಲಿ ಪಡೆಯುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: SC-ST ಮೀಸಲಾತಿ ಹೆಚ್ಚಳಕ್ಕೆ ಸುಗ್ರೀವಾಜ್ಞೆ ಹೊರಡಿಸಲು ಮುಂದಾದ ಸರ್ಕಾರ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *