ಮೋದಿ ಕೂಡ ತೆರಿಗೆ ದುಡ್ಡಲ್ಲೇ ಕಾರ್ಯಕ್ರಮ ಕೊಡೋದು, ಈಶ್ವರಪ್ಪ ನಾಗರಿಕನೇ ಅಲ್ಲ – ಸಿದ್ದರಾಮಯ್ಯ

Public TV
2 Min Read

ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ತೆರೆಗೆ ದುಡ್ಡಲ್ಲೇ ಯೋಜನೆಗಳನ್ನು ಕೊಡುತ್ತಾರೆ. ಅವರ ಸ್ವಂತ ದುಡ್ಡಲ್ಲೇನು ಕೊಡಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕ ಈಶ್ವರಪ್ಪಗೆ ತಿರುಗೇಟು ನೀಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಶ್ವರಪ್ಪ ನಾಗರಿಕನೇ ಅಲ್ಲ, ಹೀ ಇಸ್ ನಾಟ್ ಆಟ್ ಆಲ್ ಹೂಮನ್ ಬೀಯಿಂಗ್ ಎಂದು ಕಿಡಿಕಾರಿದ್ದಾರೆ. ಮೊಟ್ಟೆ, ಶೂ ಭಾಗ್ಯವನ್ನು ನಾವು ತೆರಿಗೆ ಹಣದಿಂದಲೇ ಕೊಟ್ಟಿದ್ದು. ಮೋದಿಯವರು ಯೋಜನೆಗೆ ದುಡ್ಡು ಎಲ್ಲಿಂದ ಕೊಡ್ತಾರೆ? ಬೇರೆ ಹಣದಿಂದ ಕೊಡ್ತಾರಾ? ಅವರ ಹಣವನ್ನು ಕೊಡ್ತಾರಾ? ಕರ್ನಾಟಕದಿಂದ ತೆರಿಗೆ ಹಣ ಬರುತ್ತಲ್ಲ, ಆ ಹಣವನ್ನೇ ಮೋದಿ ಇಲ್ಲಿ ಯೊಜನೆಗೆ ಕೊಟ್ಟಿದ್ದು ಎಂದು ಕೆಂಡಾಮಂಡಲವಾದರು.

ಜನರು ಕೈಯಲ್ಲಿ ಶೂ ಹಿಡಿದರು, ಆದ್ರೆ ಹೊಡಿಯಲಿಲ್ಲ ಎಂಬ ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿ, ಈಶ್ವರಪ್ಪ ಮನುಷ್ಯನೇ ಅಲ್ಲ. ಈಶ್ವರಪ್ಪನೇ ಕೈಯಲ್ಲಿ ಶೂ ಹಿಡಕೊಂಡಿದ್ದಾನೋ ಗೊತ್ತಿಲ್ಲ, ಅವರ ನಾಲಿಗೆಯಲ್ಲಿ ಸಂಸ್ಕೃತಿ ಇಲ್ಲ. ಬಿಜೆಪಿ ಅವರಿಗೆ ಸಂಸ್ಕೃತಿ ಕಲಿಸಿದೆ ಅನ್ನುತೆ ಆದ್ರೆ ಈಶ್ವರಪ್ಪನಿಗೆ ಸಂಸ್ಕೃತಿನೇ ಇಲ್ಲ ಎಂದು ಹರಿಹಾಯ್ದರು. ಜೊತೆಗೆ ನಾನು ಸಿಎಂ ಆಗಿದ್ದಾಯ್ತು, ಈಶ್ವರಪ್ಪನಿಗೆ ಸಿಎಂ ಸ್ಥಾನ ಸಿಗಲ್ಲ, ಯಡಿಯೂರಪ್ಪನೂ ಸಿಎಂ ಆಗಲ್ಲ ಎಂದು ವ್ಯಂಗ್ಯವಾಡಿದರು.

ಈಶ್ವರಪ್ಪ ಹೇಳಿದ್ದೇನು?
ಸೋಲಿನ ಬಗ್ಗೆ ಸಿದ್ದರಾಮಯ್ಯ ಹೇಳಿದ್ದನ್ನು ನಾನು ಅನುಮೋದನೆ ಮಾಡುತ್ತೇನೆ. ರಾಜ್ಯದಲ್ಲಿ ಜನ ನೀವೇನೂ ಕೆಲಸ ಮಾಡಿಲ್ಲ ನಿದ್ದೆ ಮಾಡಿ ಎಂದು ಮನೆಗೆ ಕಳಿಸಿದ್ದಾರೆ. ಪ್ರಧಾನಿ ಮೋದಿ ಅವರು ಕೆಲಸಗಾರ ಎಂದು ವೋಟ್ ಹಾಕಿದ್ದಾರೆ ಎಂದು ಟಾಂಗ್ ಕೊಟ್ಟಿದ್ದರು.

ಜನ ಸಿದ್ದರಾಮಯ್ಯ ಎಂದು ಕರೆಯೋದಿಲ್ಲ ನಿದ್ರಾಮಯ್ಯ ಎಂದೇ ಕರೆಯುತ್ತಾರೆ. ನೀವು ಕೆಲಸ ಮಾಡಲಿಲ್ಲ ನಿದ್ದೆ ಮಾಡುತ್ತೀರಿ ಅದಕ್ಕೆ ನಿಮ್ಮನ್ನು ನಿದ್ದೆ ಮಾಡಲು ಕಳಿಸಿದ್ದಾರೆ. ಬಿಜೆಪಿ ಕೋಮುವಾದಿ ಪಕ್ಷ ಎಂದು ಹೇಳಿಕೊಂಡು ಜೆಡಿಎಸ್, ನೀವೂ ಒಂದಾದ್ರಿ. ಅಂಬೇಡ್ಕರ್ ಅವರನ್ನೇ ಕಾಂಗ್ರೆಸ್‍ನವರು ಎರಡು ಬಾರಿ ಸೋಲಿಸಿದ್ರು. ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪನವರನ್ನು ಬಿಡುತ್ತೀರಾ ಎಂದು ದೇವೇಗೌಡರೇ ಹೇಳಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಮೈತ್ರಿ ಬಗ್ಗೆ ಸಿದ್ದರಾಮಯ್ಯ, ದೇವೇಗೌಡ ಮತ್ತು ಕಾಂಗ್ರೆಸ್ ಶಾಸಕರಲ್ಲೇ ಭಿನ್ನಮತವಿದೆ ಎಂದು ಹೇಳಿದ್ದರು.

ಮೋದಿ ದೇಶದಲ್ಲಿ ಭಯೋತ್ಪಾದಕರ ಅಟ್ಟಹಾಸ ಮಟ್ಟ ಹಾಕಿದ್ದಾರೆ. ದೇಶದ ಬಗ್ಗೆ ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯ ಕೆಲಸ ಮಾಡದೆ ಇರೋರಿಗೆ ವೋಟ್ ಹಾಕುತ್ತಿರಾ ಎನ್ನುತ್ತಾರೆ. ಸಿದ್ದರಾಮಯ್ಯ ಮೋದಿಯ ಬಗ್ಗೆ ಅಹಂಕಾರದ ಮಾತುಗಳನ್ನಾಡಿದರು. ಅದಕ್ಕೆ ಜನ ಬಿಜೆಪಿಗೆ ಬಹುಮತ ನೀಡಿದರು. ನಾನು ಮೊಟ್ಟೆ, ಅಕ್ಕಿ, ಶೂ ಕೊಟ್ಟೆ ಎಂದು ಹೇಳುತ್ತಾರೆ. ಆದರೆ ಜನ ಶೂ ಕೈಯಲ್ಲಿ ಹಿಡಿದು ಹೊಡೆದರು ಎಂದು ನಾ ಹೇಳಲ್ಲ ಎಂದು ತಿರುಗೇಟು ನೀಡಿದ್ದರು.

ಸಿದ್ದರಾಮಯ್ಯ ಇವೆಲ್ಲವನ್ನು ಅವರ ಜೇಬಿನ ಹಣದಿಂದ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದ ಅವರು, ಜನರ ತೆರಿಗೆ ಹಣದಿಂದ ಕೊಟ್ಟಿದ್ದಾರೆ. ಮೋದಿ ಕೂಡ ಜೇಬಿನಿಂದ ಕೊಡುತ್ತಿಲ್ಲ. ಅಕ್ಕಿ ಕೊಟ್ಟು ಬಾಯಿಗೆ ಬಂದ ಹಾಗೆ ಮಾತನಾಡಿದಕ್ಕೆ ಜನ ಇವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಒಂದು ನಾಮ ಜೆಡಿಎಸ್‍ಗೆ ಒಂದು ನಾಮ ನಿಮಗೊಂದು ನಾಮ ಹಾಕಿದ್ದಾರೆ. ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಚುನಾವಣೆ ಬಂದರೂ ನಾವು ತೊಡೆ ತಟ್ಟಿ ಸಿದ್ಧರಾಗಿದ್ದೇವೆ ಎಂದು ಕಿಡಿಕಾರಿದ್ದರು.

Share This Article
Leave a Comment

Leave a Reply

Your email address will not be published. Required fields are marked *