ಬೆಂಗಳೂರು: ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿ ಮಾತನಾಡಿದ್ದು ನಿಜ. ಆದರೆ ಈ ಸಂದರ್ಭದಲ್ಲಿ ನನ್ನ ಹೇಳಿಕೆಯನ್ನ ತಪ್ಪಾಗಿ ಅರ್ಥೈಯಿಸಲಾಗಿದೆ ಎಂದು ಮಾಜಿ ಸಚಿವ, ಪರಿಷತ್ ಸದಸ್ಯ ಹೆಚ್ ಎಂ ರೇವಣ್ಣ ಹೇಳಿದ್ದಾರೆ.
ಮಹಾಲಕ್ಷ್ಮಿ ಲೇಔಟ್ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಎಂ.ರೇವಣ್ಣ, ಸಿದ್ದರಾಮಯ್ಯ ಅವರನ್ನ ಕುರುಬ ಸಮಾಜದ ವಿಲನ್ ಎಂದಿಲ್ಲ. ಅವರು ಕುರುಬ ಸಮಾಜದ ಹೀರೋ ಹೊರತು ವಿಲನ್ ಅಲ್ಲ. ಕುರುಬ ಸಮಾಜದ ಎಲ್ಲಾ ಶಾಸಕರು ಒಗ್ಗಟ್ಟಾಗಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದಿದ್ದಾರೆ.
ಸಂಪುಟದಲ್ಲಿ ಅವಕಾಶ ಸಿಗದ ಕಾರಣ ಅತೃಪ್ತಿಯಾಗಿದ್ದು ನಿಜ. ಆದರೆ ಆ ಅಸಮಾಧಾನ ಈಗಿಲ್ಲ. ಸಂಪುಟ ರಚನೆಯಲ್ಲಿ ಉಂಟಾದ ಕೋಪ ಶಮನಗೊಂಡಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷ ಗೆಲುವು ಸಾಧಿಸುತ್ತವೆ. ಅಲ್ಲದೆ ಸಿಎಂ ಎಚ್ಡಿ ಕುಮಾರಸ್ವಾಮಿ ಅವರು ಸರ್ಕಾರವನ್ನು ಸರಿಯಾದ ರೀತಿಯಲ್ಲಿ ನಡೆಸುತ್ತಿದ್ದಾರೆಂಬ ವಿಶ್ವಾಸ ವ್ಯಕ್ತಪಡಿಸಿದ್ರು.
ಇದೇ ಸಂದರ್ಭದಲ್ಲಿ ಶಾಸಕ ಭೈರತಿ ಸುರೇಶ್ ಅವರಿಗೆ ಹೆಚ್ಎಂ ರೇವಣ್ಣ ಟಾಂಗ್ ಕೊಟ್ಟಿದ್ದಾರೆ. ಅವರಿನ್ನೂ ಹೊಸಬರು ಪಾಪ ಜೋಶ್ನಲ್ಲಿ ಮಾತನಾಡಿದ್ದಾರೆ. ನಾನು ಹೇಳಿದ ಹೇಳಿಕೆ ಬಗ್ಗೆ ಸುದ್ದಿಗೋಷ್ಠಿ ನಡೆಸೋ ಬದಲು, ಈ ಬಗ್ಗೆ ನನ್ನ ಸಂಪರ್ಕಿಸಿ ಮಾತನಾಡಬಹುದಿತ್ತು. ಆದರೆ ಅವರಿಗೆ ನನ್ನ ಸಂಪರ್ಕ ಸಾಧ್ಯವಾಗಿಲ್ಲ ಅನ್ಸುತ್ತೆ ಎಂದು ತಿರುಗೇಟು ನೀಡಿದ್ದಾರೆ.