ಗ್ರಾಹಕರಿಗೆ ಬೆಲೆ ಏರಿಕೆ ಮಾಡಿ ರೈತರಿಗೂ ಸಿದ್ದರಾಮಯ್ಯ ಸರ್ಕಾರ ಮೋಸ ಮಾಡ್ತಿದೆ: ಹೆಚ್‌ಡಿಕೆ ಕಿಡಿ

Public TV
1 Min Read

ಬೆಂಗಳೂರು: ರೈತನ ಹೆಸರಿನಲ್ಲಿ ಗ್ರಾಹಕನಿಗೆ ಬೆಲೆ ಜಾಸ್ತಿ ಮಾಡಿ ರೈತನಿಗೂ ಹಣ ಕೊಡದೆ ಸರ್ಕಾರ ದುಡ್ಡು ವಸೂಲಿ ಮಾಡುತ್ತಿದೆ. ಇದು ಸರ್ಕಾರದ ಹವ್ಯಾಸ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಸಿದ್ದರಾಮಯ್ಯ (Siddaramaiah) ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಹಾಲಿನ ದರ ಏರಿಕೆ (Milk Price Hike) ಮಾಡುವ ಬಗ್ಗೆ ಸಮರ್ಥನೆ ಮಾಡಿಕೊಳ್ಳುತ್ತಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ಜೆಪಿ ಭವನದಲ್ಲಿ ಮಾತನಾಡಿದ ಅವರು, ಯಾರ ಹತ್ತಿರ ಕಿತ್ತುಕೊಂಡು ಯಾರಿಗೋ ದಾನ ಮಾಡಿದಂತೆ ಇವರು ಮಾಡುತ್ತಿದ್ದಾರೆ. ಗ್ರಾಹಕರ ಮೇಲೆ ಹೊರೆ ಹೊರಿಸಿ ಕೊಡುತ್ತೇವೆ ಎನ್ನುತ್ತಿದ್ದಾರೆ. ರೈತರ ಹೆಸರಿನಲ್ಲಿ ಗ್ರಾಹಕರಿಗೆ ಬೆಲೆ ಏರಿಕೆ ಮಾಡುತ್ತಾರೆ. ರೈತನಿಗೆ (Farmers) ಹಾಲು ಉತ್ಪಾದಕರ ಸಂಘದಲ್ಲಿ ಒಂದೂವರೆ- ಎರಡು ರೂಪಾಯಿ ಈ ಸರ್ಕಾರ ಕಡಿಮೆ ಮಾಡಿದೆ. ಯಾಕೆ ಕಡಿಮೆ ಮಾಡಿದ್ರಿ? ರೈತನಿಗೆ ಕೊಡೋ ಹಣವನ್ನು ಈ ಸರ್ಕಾರ ಕಡಿತ ಮಾಡಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಬೇಡಿಕೆ ಈಡೇರಿಸಲು ಸ್ವಲ್ಪ ಸಮಯ ಕೊಡಿ: ಪ್ರತಿಭಟನಾ ನಿರತ ಕಿರಿಯ ವೈದ್ಯರಿಗೆ ಸಿಎಂ ಮಮತಾ ಬ್ಯಾನರ್ಜಿ ಮನವಿ

ರೈತರಿಗೆ ಕುಮಾರಸ್ವಾಮಿ, ದೇವೇಗೌಡ ಏನು ಮಾಡಿದ್ದಾರೆ ಎಂದು ಶುಕ್ರವಾರ ಮಾಗಡಿಯಲ್ಲಿ ಪ್ರಶ್ನೆ ಮಾಡಿದ ಸಿಎಂಗೆ ತಿರುಗೇಟು ಕೊಟ್ಟ ಅವರು, ಸಾಲಮನ್ನಾ ಮಾಡಿದ್ದು ಕುಮಾರಸ್ವಾಮಿ. ನೀರಾವರಿ ಯೋಜನೆ ನೆನೆಗುದಿಗೆ ಬಿದ್ದಿತ್ತು. ಕರ್ನಾಟಕ ನೀರಾವರಿ ಯೋಜನೆಗಳಿಗೆ ಶಕ್ತಿ ಕೊಟ್ಟಿದ್ದು ದೇವೇಗೌಡರು. ರಸಗೊಬ್ಬರ ಸಬ್ಸಿಡಿ ಕೊಟ್ಟಿದ್ದು ದೇವೇಗೌಡರು. ರೈತರಿಗೆ 2 ರೂ. ಹಾಲಿನ ಪ್ರೋತ್ಸಾಹ ಧನ ಕೊಟ್ಟಿದ್ದು ಯಡಿಯೂರಪ್ಪ ಅವರು. ನಾನು ಸಿಎಂ ಆದಾಗ ಎರಡನೇ ಬಾರಿಗೆ 6 ರೂ. ಮಾಡಲು ಹೋಗಿದ್ದೆ. ನಾನು ಇದನ್ನು ಜಾರಿ ಮಾಡಲು ಆಗದಂತೆ ಸರ್ಕಾರ ತೆಗೆದಿದ್ದು ಯಾರು? ನಾವು ಇವರಿಂದ ಹೇಳಿಸಿಕೊಳ್ಳಬೇಕಾ? ಇವರೇನು ಮಾಡಿದ್ದಾರೆ ನಮಗೆ ಗೊತ್ತಿಲ್ಲವಾ? ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸುರಕ್ಷಿತ, ಸಮೃದ್ಧ ಜಮ್ಮು-ಕಾಶ್ಮೀರ ನಿರ್ಮಿಸುತ್ತೇವೆ, ಇದು ಮೋದಿ ಗ್ಯಾರಂಟಿ: ಪ್ರಧಾನಿ ಭರವಸೆ

Share This Article