ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಪವರ್ ಫುಲ್ ಲೀಡರ್ ಆಗಿದ್ದವರು ಈಗ ಹೆಲ್ಪ್ ಲೆಸ್ ಲೀಡರ್ ಆಗಿ ಬಿಟ್ಟರಾ ಅನ್ನೋ ಅನುಮಾನ ಮೂಡುವಂತಾಗಿದೆ ಮಾಜಿ ಸಿಎಂ ಸಿದ್ದರಾಮಯ್ಯನವರ ವರ್ತನೆ. ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರ ಸಭೆ ನಡೆಸಲಾಗಿತ್ತು.
ಸಭೆಯ ನಂತರ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸುಮಾರು 45 ನಿಮಿಷಗಳ ಕಾಲ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಉಪ ಚುನಾವಣೆ ಸೋಲಿನ ಹೊಣೆ ಹೊತ್ತು ವಿಪಕ್ಷ ಹಾಗೂ ಸಿಎಲ್ ಪಿ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ಕೊಟ್ಟಿದ್ದರು. ಆದರೆ ಕಾಂಗ್ರೆಸ್ ಹೈ ಕಮಾಂಡ್ ಸಿಎಲ್ ಪಿ ಹಾಗೂ ವಿಪಕ್ಷಕ್ಕೆ ಸಿದ್ದರಾಮಯ್ಯರನ್ನೇ ಮುಂದುವರಿಸಲು ತೀರ್ಮಾನಿಸಿದ್ದು ಅಧಿಕೃತ ಪ್ರಕಟಣೆ ಕೆಲವೇ ದಿನಗಳಲ್ಲಿ ಪ್ರಕಟವಾಗುವ ಸಾಧ್ಯತೆಗಳಿವೆ.
ಆದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ಹೊಸಬರ ಆಯ್ಕೆ ಖಚಿತವಾಗಿದೆ. ಸಿದ್ದರಾಮಯ್ಯರನ್ನ ನಂಬಿಕೊಂಡು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ದಿನೇಶ್ ಗುಂಡೂರಾವ್ ಈಗ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ತಮ್ಮ ಸ್ಥಾನ ಭದ್ರ ಮಾಡಿಕೊಂಡ ಸಿದ್ದರಾಮಯ್ಯ ನನ್ನ ಸ್ಥಾನಮಾನ ಉಳಿಸಲಿಲ್ಲ ಅನ್ನೋ ಆತಂಕ ಸಹಜವಾಗಿಯೆ ದಿನೇಶ್ ಗುಂಡೂರಾವ್ ರನ್ನ ಕಾಡತೊಡಗಿದೆ.
ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ದಿನೇಶ್ ಗುಂಡೂರಾವ್ ರನ್ನ ಸಮಾಧಾನಪಡಿಸಿದ ಸಿದ್ದರಾಮಯ್ಯ ನಿಮ್ಮ ಕೆಪಿಸಿಸಿ ಪಟ್ಟ ಉಳಿಸಲು ನಾನು ಸಾಕಷ್ಟು ಪ್ರಯತ್ನ ಮಾಡಿದೆ. ಆದರೆ ಅದು ಸಾದ್ಯವಾಗಿಲ್ಲ ನಾನು ಆ ವಿಷಯದಲ್ಲಿ ಅಸಾಹಯಕನಾಗಿದ್ದೇನೆ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಖಂಡಿತ ಬೇರೆ ರೀತಿಯ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಆದರೆ ಸಿದ್ದರಾಮಯ್ಯರನ್ನ ನಂಬಿ ರಾಜೀನಾಮೆ ನೀಡಿದ ದಿನೇಶ್ ಗುಂಡೂರಾವ್ ಮಾತ್ರ ಸಿದ್ದರಾಮಯ್ಯರ ಅಸಹಾಯಕತೆ ಕಂಡು ಇನ್ನಷ್ಟು ಅಸಾಹಯಕರಾಗಿ ಕೈ ಕೈ ಹಿಸುಕಿಕೊಳ್ಳುವಂತಾಗಿದೆ.