ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಉಗ್ರಪ್ಪ ಗೆಲ್ಲುವುದು ಅಷ್ಟೇ ಖಚಿತ: ಸಿದ್ದರಾಮಯ್ಯ

Public TV
2 Min Read

ಬಳ್ಳಾರಿ: ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ, ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಗೆಲ್ಲುವುದು ಅಷ್ಟೇ ಖಚಿತ ಎಂದು ಮಾಜಿ ಸಿಎಂ, ಕಾಂಗ್ರೆಸ್ ಹಾಗೂ ಜೆಡಿಎಸ್ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.

ಹಗರಿಬೊಮ್ಮನಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಉಗ್ರಪ್ಪ ಪರ ಪ್ರಚಾರ ಮಾಡಿ, ಬೃಹತ್ ಬಹಿರಂಗ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ 5 ಕ್ಷೇತ್ರಗಳಲ್ಲೂ ನಾನು ಪ್ರಚಾರ ಮಾಡಿದ್ದೇನೆ. ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪರ ಅಲೆ ಜೋರಾಗಿದೆ. ಬಿಜೆಪಿ ವಿರುದ್ಧದ ಅಲೆಯೂ ಸೃಷ್ಟಿಯಾಗಿದೆ. ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ, ಬಳ್ಳಾರಿಯಲ್ಲಿ ಉಗ್ರಪ್ಪ ಗೆಲ್ಲವುದು ಅಷ್ಟೇ ಸತ್ಯ ಎಂದು ಭವಿಷ್ಯ ನುಡಿದರು.

 

ಪ್ರಧಾನಿ ನರೇಂದ್ರ ಮೋದಿಯವರ ಆಡಳಿದಿಂದಾಗಿ ರಾಜ್ಯದ ಜನ ಭ್ರಮನಿರಸನಗೊಂಡಿದ್ದಾರೆ. ಪ್ರಧಾನಿ ಮೋದಿ ಸುಳ್ಳಿನ ಸರದಾರ, ವಚನ ಭ್ರಷ್ಟರಾಗಿದ್ದಾರೆ. ದೇಶದ ಎಲ್ಲಾ ಪ್ರಧಾನಿಗಳ ಪೈಕಿ ನರೇಂದ್ರ ಮೋದಿ ಅತಿದೊಡ್ಡ ಸುಳ್ಳುಗಾರ. ಮೋದಿ ಪ್ರಧಾನಿಯಾದ ನಂತರ ದೇಶದಲ್ಲಿ ಅಚ್ಛೇ ದಿನ್ ಬರಲೇ ಇಲ್ಲ. ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಪೆಟ್ರೋಲ್-ಡೀಸೆಲ್ ದರಗಳು ಸಹ ಹೆಚ್ಚಾಗಿವೆ ಎಂದು ಕಿಡಿಕಾರಿದರು.

ಮೋದಿಯವರು ನಾನು ಚೌಕಿದಾರ ಎಂದು ಹೇಳುತ್ತಾರೆ. ಆದರೆ ಅವರು ಚೌಕಿದಾರರಲ್ಲ ಅವರು ಚೋರರಾಗಿದ್ದಾರೆ. ರಫೇಲ್ ಡೀಲ್ ನಲ್ಲಿ 40 ಸಾವಿರ ಕೋಟಿ ರೂಪಾಯಿಯನ್ನು ಲೂಟಿ ಮಾಡಿದ್ದಾರೆ. 2014ರಲ್ಲಿ ವಿದೇಶದಲ್ಲಿರುವ ಕಪ್ಪುಹಣವನ್ನು ತಂದು, ಪ್ರತಿಯೊಬ್ಬ ಭಾರತೀಯರ ಖಾತೆಗೆ 15 ಲಕ್ಷ ರೂ. ಹಾಕುತ್ತೀವಿ ಎಂದು ಹೇಳಿದ್ದರು. ಆದರೆ ಇಂದಿಗೆ ನಾಲ್ಕೂವರೆ ವರ್ಷವಾದರೂ, ಯಾವೊಬ್ಬ ಭಾರತೀಯರ ಖಾತೆಯಲ್ಲಿ 15 ರೂಪಾಯಿ ಸಹ ಬಿದ್ದಿಲ್ಲ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಕಾಂಗ್ರೆಸ್ಸಿಗೆ ಮತ ನೀಡಿ ಎಂದು ಮನವಿ ಮಾಡಿಕೊಂಡರು.

ನಾಲ್ಕು ವರ್ಷ ಸಂಸದರಾಗಿದ್ದ ವೇಳೆ ಶ್ರೀರಾಮುಲು ಬಳ್ಳಾರಿಗಾಗಿ ಏನು ಮಾಡಿದ್ದಾರೆ? ಲೋಕಸಭೆಯಲ್ಲಿ ಅವರು ಏನು ಮಾತನಾಡಿದರು. ಇನ್ನೂ ಶಾಂತ ಸಂಸದೆಯಾಗಿದ್ದಾಗ ಏನು ಮಾಡಿದ್ರು ಎಂದು ಪ್ರಶ್ನಿಸಿದರು. ಯಡಿಯೂರಪ್ಪನವರು ಹಸಿರು ಶಾಲು ಹಾಕಿಕೊಂಡು, ರೈತರ ಸಾಲಮನ್ನಾ ಮಾಡಲಿಲ್ಲ ಎಂದು ಬಿಎಸ್‍ವೈ ವಿರುದ್ಧವೂ ವಾಗ್ದಾಳಿ ನಡೆಸಿದರು.

ಸಮಾವೇಶದಲ್ಲಿ ಉಗ್ರಪ್ಪ ಪರ ಪ್ರಚಾರ ನಡೆಸಲು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಸಚಿವ ಶಿವಶಂಕರ್ ರೆಡ್ಡಿ, ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಶಾಸಕ ಭೀಮಾನಾಯ್ಕ್ ಹಾಗೂ ಎಚ್. ಆಂಜನೇಯ ಆಗಮಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *