ಬೆಂಗಳೂರು: ಸಿದ್ದರಾಮೋತ್ಸವದ ಹುಮ್ಮಸ್ಸಿನಲ್ಲಿದ್ದ ಸಿದ್ದು ಟೀಂಗೆ ಡಿಕೆಶಿ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ಸಿದ್ದರಾಮೋತ್ಸವದಲ್ಲಿ ಸಿದ್ದರಾಮಯ್ಯ ನಾಯಕತ್ವ ಘೋಷಣೆ ಎಂಬ ವದಂತಿಗಳ ಬೆನ್ನಲ್ಲೇ ಡಿಕೆಶಿ ಅಖಾಡಕ್ಕೆ ಇಳಿದಿದ್ದಾರೆ. ಸಿದ್ದರಾಮೋತ್ಸವಕ್ಕೆ ತಿಂಗಳ ಮೊದಲೇ ಸಾಮೂಹಿಕ ನಾಯಕತ್ವ ಎಂದು ಡಿಕೆ ಶಿವಕುಮಾರ್ ಘೋಷಣೆ ಮಾಡಿದ್ದಾರೆ.
ಡಿಕೆಶಿ, ಸಿದ್ದರಾಮಯ್ಯ ಹೈಕಮಾಂಡ್ ಜೊತೆ ಮಾತುಕತೆ ಬಳಿಕ ನಾನಾ ರೀತಿ ಚರ್ಚೆ ನಡೆದಿತ್ತು. ಸಿದ್ದರಾಮಯ್ಯ ಪರ ಒಲವು ವ್ಯಕ್ತವಾಗಿದೆ ಎಂದು ಬಿಂಬಿಸಲಾಗಿತ್ತು. ದಾವಣಗೆರೆಯ ಸಿದ್ದರಾಮೋತ್ಸವದಲ್ಲಿ ಪಟ್ಟಾಭಿಷೇಕ ನಡೆದು ಬಿಡುತ್ತದೆ ಎಂದು ಸಿದ್ದರಾಮಯ್ಯ ಟೀಂನಿಂದ ಎಲ್ಲ ಕಡೆ ನಾಯಕತ್ವದ ಬಗ್ಗೆ ಚರ್ಚೆ ಹರಿಬಿಡಲಾಗಿತ್ತು. ಸಹಜವಾಗಿ ಸಿದ್ದರಾಮಯ್ಯ ಟೀಂ ಚರ್ಚೆಗೆ ಡಿಕೆಶಿ ಆಂಡ್ ಟೀಂ ಕೆರಳಿತ್ತು. ಹಾಗಾಗಿ ಸ್ವತಃ ಡಿಕೆಶಿಯೇ ಅಖಾಡಕ್ಕಿಳಿದು ಸಾಮೂಹಿಕ ನಾಯಕತ್ವ ಎಂದು ಪ್ರಕಟಿಸಿದ್ದಾರೆ.
ತನ್ನ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆಶಿ, ಸಿದ್ದರಾಮೋತ್ಸವದ ಬಗ್ಗೆ ನನಗೆ ಗೊತ್ತಿಲ್ಲ. ಕಾರ್ಯಕರ್ತರು ಅವರ ಅಭಿಮಾನಿಗಳು ಸೇರಿ 75 ನೇ ವರ್ಷ ಹುಟ್ಟು ಹಬ್ಬ ಪ್ರಯುಕ್ತ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ನನ್ನ ಹುಟ್ಟು ಹಬ್ಬವನ್ನು ನಾನು ಕೇದಾರನಾಥ ಸನ್ನಿಧಿಯಲ್ಲಿ ಆಚರಣೆ ಮಾಡಿಕೊಂಡೆ. ಒಬ್ಬೊಬ್ಬರದ್ದು ಒಂದೊಂದು ರೀತಿಯಲ್ಲಿ ಆಚರಣೆ ಮಾಡುತ್ತಾರೆ ಎಂದು ತಿಳಿಸಿದರು.
ಇದು ಶಕ್ತಿ ಪ್ರದರ್ಶನವೇ ಎಂಬ ಪ್ರಶ್ನೆಗೆ, ನಮ್ಮ ಪಕ್ಷಕ್ಕೆ ಏನೆಲ್ಲ ಅನುಕೂಲ ಬೇಕೋ ಅದನ್ನೆಲ್ಲ ಮಾಡಲಿ. ಖರ್ಗೆ ಅವರು ಎಂಎಲ್ಎ ಆಗಿ 50 ವರ್ಷ ಆಗಿದೆ ಅವರದ್ದು ಕಾರ್ಯಕ್ರಮ ಮಾಡಿ ಅಂತ ಬಂದಿದ್ದಾರೆ. ಪರಮೇಶ್ವರ್ ಸಹ ಅವರದ್ದು ಪುಸ್ತಕ ಬಿಡುಗಡೆ ಕಾರ್ಯಕ್ರಮವಿದೆ ಅಂತ ಮನವಿ ಮಾಡಿದ್ದಾರೆ. ನನ್ನ ಹುಟ್ಟು ಹಬ್ಬ ಆಚರಣೆ ಮಾಡಬೇಡಿ, ಫ್ಲೆಕ್ಸ್ ಬ್ಯಾನರ್ ಹಾಕಬೇಡಿ ಎಂದಿದ್ದೆ. ಒಬ್ಬೊಬ್ಬರದ್ದು ಒಂದೊಂದು ಆಸೆ ಇರುತ್ತೆ ಅದನ್ನ ತಪ್ಪು ಅಂತಾ ಹೇಳೋಕೆ ಆಗುತ್ತಾ ಎಂದು ಮಾರ್ಮಿಕವಾಗಿ ಉತ್ತರಿಸಿದರು. ಇದನ್ನೂ ಓದಿ: ದೂರು ದಾಖಲಿಸಿಲ್ಲ ಎಂದು ನವಜಾತ ಶಿಶುವಿನ ಶವದೊಂದಿಗೆ ಪೊಲೀಸ್ ಮೆಟ್ಟಿಲೇರಿದ
ಪಕ್ಷದ ವೇದಿಕೆಯಲ್ಲಿ ಸಿದ್ದರಾಮೋತ್ಸವ ನಡೆಯುತ್ತಾ ಎಂಬ ಪ್ರಶ್ನೆಗೆ, ಅವರೆಲ್ಲ ಒಂದು ಸಮಿತಿ ಮಾಡಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಇರಬೇಕು ಅಂತ ಸಿದ್ದರಾಮಯ್ಯನವರೇ ನನಗೆ ಹೇಳಿದ್ದಾರೆ. ನಾನು ಕಾರ್ಯಕ್ರಮದಲ್ಲಿ ಇರುತ್ತೇನೆ. ರಾಹುಲ್ ಗಾಂಧಿ ಅವರನ್ನು ಕರೆದಿರಬಹುದು. ನನಗೆ ಅದು ಗೊತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.
ಸಿದ್ದರಾಮಯ್ಯ ಮತ್ತು ಡಿಕೆಶಿ ಒಳಜಗಳಕ್ಕೆ ರಾಹುಲ್ಗಾಂಧಿ ಸಂಧಾನ ನಡೆಸಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮಂತ್ರಿಗಿರಿ ಸಿಗದಿದ್ದಾಗಲೇ ನಾನು ಉಸಿರು ಎತ್ತಿಲ್ಲ. ನಮ್ಮ ಸರ್ಕಾರ ಬಂದಾಗ ನನ್ನನ್ನ ಮಂತ್ರಿ ಮಾಡಲಿಲ್ಲ. ಆಗಲೂ ನಾನೇನು ಮಾತನಾಡಿಲ್ಲ. ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಚುನಾವಣಾ ಎದುರಿಸಬೇಕು ಅಂತ ಹೋರಾಟ ಮಾಡಿದವರು ನಾವು. ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಪ್ರಚಾರ ಸಮಿತಿ ಅಧ್ಯಕ್ಷನಾಗಿ ನಾನು ಕೆಲಸ ಮಾಡಿದ್ದೇನೆ. ಸರ್ಕಾರ ಸೋತಾಗಲೂ ಕೂಡ ವಿಪಕ್ಷ ನಾಯಕರನ್ನಾಗಿ ಮಾಡಿದ್ದೇವೆ. ವ್ಯಕ್ತಿ ಪೂಜೆಗೆ ಗೌರವ ಕೊಡುವುದಿಲ್ಲ, ಪಕ್ಷದ ಪೂಜೆಗೆ ಗೌರವ ಕೊಡುತ್ತೇವೆ. ನಮಗೆ ಪಕ್ಷವೇ ಮುಖ್ಯ ಎಂದರು.