ಚುನಾವಣಾ ಆಯೋಗ ದುರುಪಯೋಗ, ಬಿಜೆಪಿ ಪರ ಫಲಿತಾಂಶ- ಸಿದ್ದರಾಮಯ್ಯ

Public TV
1 Min Read

ಹುಬ್ಬಳ್ಳಿ: ಮಹಾರಾಷ್ಟ್ರ, ಹರ್ಯಾಣ ಚುನಾವಣೆಯಲ್ಲಿ ಮತದಾನೋತ್ತರ ಸಮೀಕ್ಷೆಗಳು ಬಿಜೆಪಿ ಪರವಾಗಿ ಬಂದಿವೆ. ಫಲಿತಾಂಶ ಬರಲಿ ಜನರ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ. ಆದರೆ ಕೇಂದ್ರ ಸರ್ಕಾರ ಇವಿಎಂ ದುರ್ಬಳಕೆ ಮಾಡಿಕೊಳ್ಳುತ್ತಿರುವ ಅನುಮಾನವಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲವೂ ಬಿಜೆಪಿ ಕೈಯಲ್ಲಿದೆ. ಚುನಾವಣಾ ಆಯೋಗ, ಇಡಿ, ಐಟಿ, ಸಿಬಿಐಯನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇವುಗಳ ಜೊತೆಗೆ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಹೀಗಾಗಿ ಬಿಜೆಪಿ ಪರ ಫಲಿತಾಂಶ ಬರುತ್ತಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ರಸ್ತೆಗಳು ಕೆಟ್ಟದಾಗಿವೆ. ವ್ಯವಸ್ಥೆ ಸರಿಯಿಲ್ಲ, ಹೀಗಿದ್ದರೂ ಜನ ಬಿಜೆಪಿಗೆ ಹೇಗೆ ಮತ ಹಾಕುತ್ತಾರೆ ಎನ್ನುವುದೇ ತಿಳಿಯುವುದಿಲ್ಲ. ನನಗೆ ಇವಿಎಂ ದುರ್ಬಳಕೆ ಮಾಡಿಕೊಳ್ಳುತ್ತಿರುವ ಅನುಮಾನ ಇದೆ. ರಾಜ್ಯದ ಅನರ್ಹರ ಕ್ಷೇತ್ರಗಳಿಗೂ 70 ದಿನಗಳ ಮುಂಚಿತವಾಗಿಯೇ ಚುನಾವಣೆ ಘೋಷಣೆ ಮಾಡಿದ್ದಾರೆ. ಚುನಾವಣಾ ಆಯೋಗವನ್ನು ಸಹ ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ಕುರಿತು ಜನರು ಸಂಶಯ ಪಡುತ್ತಿದ್ದಾರೆ, ಹೀಗಾಗಿ ಚುನಾವಣಾ ಆಯೋಗ ಇವಿಎಂ ಬಗ್ಗೆ ಮರುಚಿಂತನೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರವಾಹ ಪರಿಸ್ಥಿತಿ ನಿರ್ವಹಣೆಯಲ್ಲೂ ರಾಜ್ಯ ಸರ್ಕಾರ ವಿಫಲವಾಗಿದೆ. ಸಂತ್ರಸ್ತರಿಗೆ ಶೆಡ್ ಹಾಕಿಕೊಡುವ ಬಗ್ಗೆ, ಪರಿಹಾರ ನೀಡುವ ಬಗ್ಗೆ ಚಿಂತನೆ ಮಾಡುತ್ತಿಲ್ಲ. ಸದನದಲ್ಲಿ ಪರಿಹಾರ ಕೊಡುತ್ತೇವೆ ಎಂದಿದ್ದಾರೆ, ಕೊಡದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸಾವರ್ಕರ್ ಹಿಂದುತ್ವದ ವಿಚಾರದಲ್ಲಿ ಬೆಂಕಿ ಹಚ್ಚಿ ಹೋರಾಟ ಮಾಡಿದವರು. ಸಮಾಜ ಒಡೆಯುವ ಕೆಲಸ ಮಾಡಿದವರು, ಮಹಾತ್ಮ ಗಾಂಧಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದವರು. ಅವರಿಗೆ ಭಾರತ ರತ್ನ ಬೇಡ ಅಂದೆ, ಸಾವರ್ಕರ್ ಗಾಂಧಿ ಕೊಲೆ ಪ್ರಕರಣದ ಆರೋಪಿ, ನಾನು ನನ್ನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.

Share This Article
Leave a Comment

Leave a Reply

Your email address will not be published. Required fields are marked *