ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ- ಸೋಮವಾರ ಡಿಸ್ಚಾರ್ಜ್?

Public TV
2 Min Read

ಬೆಂಗಳೂರು: ಶತಾಯುಷಿ, ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳಿಗೆ ಮತ್ತೊಮ್ಮೆ ಯಶಸ್ವಿ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಆದರೆ ಶ್ರೀಗಳಿಗೆ ವಿಶ್ರಾಂತಿಯ ಅಗತ್ಯವಿದ್ದು, ಸೋಮವಾರ ಬೆಳಗ್ಗೆ ಡಿಸ್ಚಾರ್ಜ್ ಮಾಡುವ ನಿರ್ಧಾರ ಮಾಡಲಾಗಿದೆ ಎಂದು ಬಿಜಿಎಸ್ ಮುಖ್ಯವೈದ್ಯರಾದ ಡಾ. ರವೀಂದ್ರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಶ್ರೀಗಳ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ವೈದ್ಯರು, ಸ್ವಾಮೀಜಿ ಅವರ ಆರೋಗ್ಯ ಉತ್ತಮವಾಗಿದೆ. ಇಂದು ಮಧ್ಯಾಹ್ನ ಪೂಜೆ ಮಾಡಿದ್ದಾರೆ. ಅವರಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಕಿಡ್ನಿ ಹಾಗೂ ರಕ್ತ ಪರೀಕ್ಷೆ ಮಾಡುವ ಕಾರಣದಿಂದ ಇಂದು ಆಸ್ಪತ್ರೆಯಲ್ಲಿ ಉಳಿಯಲಿದ್ದಾರೆ. ನಾಳೆ ರಕ್ತ ಪರೀಕ್ಷೆ ಮಾಡಿ ಡಿಸ್ಚಾರ್ಜ್ ಮಾಡಲಾಗುತ್ತದೆ. ಶ್ರೀಗಳು ಈಗಾಗಲೇ ಮಠಕ್ಕೆ ಹೋಗುತ್ತೇನೆ ಎಂದು ಹೇಳಿದ್ದಾರೆ. ಆದರೆ ನಾವೇ ಬೇಡ ಎಂದು ಇಂದು ರಾತ್ರಿ ಮಾತ್ರ ಆಸ್ಪತ್ರೆಯಲ್ಲಿ ಇರುವುದು ಒಳ್ಳೆಯದು ಎಂದು ಉಳಿಸಿಕೊಂಡಿದ್ದೆವೆ ಎಂದು ತಿಳಿಸಿದ್ದಾರೆ.

ಶ್ರೀಗಳ ಆರೋಗ್ಯದಲ್ಲಿ ಕೊಂಚ ಏರುಪೇರಾದ ಹಿನ್ನೆಲೆಯಲ್ಲಿ ಬಿಜಿಎಸ್ ಆಸ್ಪತ್ರೆಗೆ ಶನಿವಾರ ಅವರನ್ನ ದಾಖಲು ಮಾಡಲಾಗಿತ್ತು. ಪಿತ್ತಕೋಶದಲ್ಲಿ ಅಳವಡಿಸಿದ್ದ ಸ್ಟಂಟ್ ಬ್ಲಾಕ್ ನಲ್ಲಿ ತೊಂದರೆ ಕಾಣಿಸಿಕೊಂಡಿದ್ದು, ವೈದ್ಯರು ಎಂಡೋಸ್ಕೋಪಿ ಮಾಡುವ ಮೂಲಕ ಸ್ಟಂಟ್ ಅಳವಡಿಕೆ ಮಾಡಿದ್ದಾರೆ. ಶ್ರೀಗಳು ಆಸ್ಪತ್ರೆಗೆ ದಾಖಲಾಗುತ್ತಿದಂತೆ ಡಾ. ರವೀಂದ್ರ ನೇತೃತ್ವದ ತಂಡ ಶ್ರೀಗಳಿಗೆ ಅಲ್ಟ್ರಾಸೌಂಡ್, ಬ್ಲಡ್ ಚೆಕಪ್ ಸೇರಿದಂತೆ ವೈದ್ಯಕೀಯ ತಪಾಸಣೆ ನಡೆಸಿದರು.

ಭಾನುವಾರ ಕೂಡ ಚಿಕಿತ್ಸೆ ಮುಂದುವರಿದು ಮತ್ತೆರಡು ಸ್ಟಂಟ್ ಗಳನ್ನು ಯಶಸ್ವಿಯಾಗಿ ಅಳವಡಿಸಿದರು. ತಪಾಸಣೆ ವೇಳೆ ಶ್ರೀಗಳಿಗೆ ರಕ್ತದಲ್ಲಿ ಹಾಗೂ ಪಿತ್ತಕೋಶ, ಪಿತ್ತನಾಳದಲ್ಲಿ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಮತ್ತೆರಡು ಸ್ಟಂಟ್ ಅಳವಡಿಕೆ ಮಾಡಲಾಯಿತು. ಬ್ಲಾಕ್ ಆಗಿದ್ದ ಸ್ಟಂಟ್ ಸ್ವಚ್ಛ ಗೊಳಿಸುವ ಜೊತೆಗೆ ಎಂಡೋಸ್ಕೋಪಿ ಮೂಲಕ ಸ್ಟಂಟ್ ಅಳವಡಿಸಲಾಗಿದ್ದು ಶಸ್ತ್ರ ಚಿಕಿತ್ಸೆ ಮಾಡದೇ ಅಳವಡಿಸಿರುವುದು ವಿಶೇಷವಾಗಿದೆ.

ಶ್ರೀಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನಲೆಯಲ್ಲಿ ಆದಿಚುಂಚನಗಿರಿ ಮಠದ ನಿರ್ಮಾಲನಂದ ಸ್ವಾಮಿಜಿಗಳು ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು. ಮೇಯರ್ ಗಂಗಾಂಬಿಕಾ ಮಲ್ಲಿಕಾರ್ಜುನ್, ವಿ. ಸೋಮಣ್ಣ, ಶ್ರೀಗಳ ಆರೋಗ್ಯ ತಪಾಸಣೆ ನಡೆಸುತ್ತಿದ್ದ ಡಾ. ವೆಂಕಟರಮಣ ಆಗಮಿಸಿ ಆರೋಗ್ಯ ವಿಚಾರಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *