ವರ್ತೂರ್ ಪ್ರಕಾಶ್ ಹೆಸರಲ್ಲಿ ಶ್ವೇತಾಗೌಡ ವಂಚನೆ ಕೇಸ್ – 2.1 ಕೆಜಿ ಚಿನ್ನಾಭರಣದ ಮೂಲ ಪತ್ತೆ

Public TV
2 Min Read

ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಹೆಸರಲ್ಲಿ ಶ್ವೇತಾಗೌಡಳಿಂದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು 2.1 ಕೆ.ಜಿ ಚಿನ್ನಾಭರಣದ ಮೂಲ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಮಾಜಿ ಸಚಿವ ವರ್ತೂರು ಪ್ರಕಾಶ್ ಹೆಸರಲ್ಲಿ ಶ್ವೇತಾಗೌಡ ನವರತ್ನ ಜ್ಯುವೆಲರಿ ಮಾಲೀಕರಿಗೆ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಶ್ವೇತಾಗೌಡ ವಂಚಿಸಿ, ಬಚ್ಚಿಟ್ಟಿದ್ದ 2 ಕೆ.ಜಿ 100 ಗ್ರಾಂ ಚಿನ್ನಾಭರಣದ ಸುಳಿವು ಸಿಕ್ಕಿದೆ.ಇದನ್ನೂ ಓದಿ: ಭಾರತದ ಬಳಿ ಸಾಕಷ್ಟು ಹಣ ಇರುವಾಗ ನಾವು ಯಾಕೆ ದುಡ್ಡು ನೀಡಬೇಕು: ಟ್ರಂಪ್‌

ಐಶ್ವರ್ಯಾ ಗೌಡಳ ವಂಚನೆ ಪ್ರಕರಣ ಸದ್ದು ಮಾಡುವ ಮೊದಲೇ ಶ್ವೇತಾಗೌಡಳ ವಂಚನೆ ಪ್ರಕರಣ ಸದ್ದು ಮಾಡಿತ್ತು. ಮಾಜಿ ಸಚಿವ ವರ್ತೂರು ಪ್ರಕಾಶ್ ಹೆಸರಲ್ಲಿ ಕೆಜಿಗಟ್ಟಲೆ ಚಿನ್ನಾಭರಣ ವಂಚಿಸಿದ್ದಕ್ಕೆ ಆಕೆಯನ್ನು ಅರೆಸ್ಟ್ ಕೂಡ ಮಾಡಲಾಗಿತ್ತು. ಆರೋಪಿ ಶ್ವೇತಾಗೌಡ ಅರೆಸ್ಟ್ ಆಗಿದ್ದರೂ ಕೂಡ, ಚಿನ್ನದ ಮೂಲ ಗೊತ್ತಾಗಿರಲಿಲ್ಲ. ಬಾಗಲಗುಂಟೆಯಿಂದ ರಾಜಸ್ಥಾನಕ್ಕೆ ಹೋಗಿ ಹುಡುಕಾಡಿದರೂ ಕೂಡ ಬಚ್ಚಿಟ್ಟಿದ್ದ ಚಿನ್ನಾಭರಣದ ಸುಳಿವು ಸಿಕ್ಕಿರಲಿಲ್ಲ. ಆ ಬಳಿಕ ಜೋಧಪುರದಲ್ಲಿ ಮೋಹನ್ ಲಾಲ್ ಎಂಬಾತನನ್ನು ಬಂಧಿಸಿದ ಕರೆತಂದಾಗ ಚಿನ್ನ ಎಲ್ಲಿದೆ ಎಂಬ ಮಾಹಿತಿ ಬಯಲಾಗಿದೆ.

ನವರತ್ನ ಜ್ಯುವೆಲರಿ ಮಾಲೀಕರಿಗೆ 2 ಕೆ.ಜಿ 945 ಗ್ರಾಂ ಚಿನ್ನಾಭರಣ ವಂಚಿಸಿದ್ದ ಶ್ವೇತಗೌಡಳನ್ನ ಹಾಗೂ ವರ್ತೂರು ಪ್ರಕಾಶ್‌ರನ್ನು ತನಿಖಾಧಿಕಾರಿ ಎಸಿಪಿ ಗೀತಾ ವಿಚಾರಣೆ ನಡೆಸಿದ್ದರು. ಅಲ್ಲದೆ ಪ್ರಕರಣದಲ್ಲಿ ಶ್ವೇತಗೌಡ ಸೇರಿ ಚೆನ್ನರಾಮ್ ಹಾಗೂ ಮೋಹನ್ ಲಾಲ್‌ರನ್ನ ಬಂಧಿಸಿದ್ದರು. ನವರತ್ನ ಜ್ಯುವೆಲರಿ ಮಾಲೀಕ ಸಂಜಯ್ ಭಾಷಾ ಬಳಿ ಪಡೆದಿದ್ದ 2ಕೆ.ಜಿ 945 ಗ್ರಾಂ ಚಿನ್ನದಲ್ಲಿ 800 ಗ್ರಾಂ ರಿಕವರಿ ಆಗಿತ್ತು. ಉಳಿದ 2 ಕೆ.ಜಿ 145 ಗ್ರಾಂ ಚಿನ್ನದ ಸುಳಿವೇ ಸಿಕ್ಕಿರಲಿಲ್ಲ. ಶ್ವೇತಾ ವಿಚಾರಣೆ ವೇಳೆ ರಾಮ್‌ದೇವ್ ಜ್ಯುವೆಲರಿ ಮಾಲೀಕ ಚೆನ್ನಾರಾಮ್‌ಗೆ ನೀಡಿದ್ದಾಗಿ ಮಾಹಿತಿ ನೀಡಿದ್ದಳು.

ರಾಮ್‌ದೇವ್ ಜ್ಯುವೆಲರಿ ಮಾಲೀಕ ಚೆನ್ನಾರಾಮ್ ಬಂಧಿಸಿ ವಿಚಾರಣೆ ನಡೆಸಿದಾಗ ಚೆನ್ನಾರಾಮ್‌ನ ಸಂಬಂಧಿ ಮೋಹನ್ ಲಾಲ್ ಚಿನ್ನಾಭರಣ ಪಡೆದಿರೋದಾಗಿ ಮಾಹಿತಿ ನೀಡಿದ್ದ. ಮೋಹನ್ ಲಾಲ್‌ನ ಜೋಧಪುರದಿಂದ ಬಂಧಿಸಿ ಕರೆತಂದಾಗ ಬಾಗಲಗುಂಟೆಯ ತೋಟದ ಗುಡ್ಡದಹಳ್ಳಿಯ ಬೇರಾರಾಮ್ ಬಳಿಯಿದೆ ಎಂದು ಮಾಹಿತಿ ನೀಡಿದ್ದಾನೆ.

ಬೇರಾ ರಾಮ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು, ನಂಬರ್ ಸ್ವಿಚ್ ಆಫ್ ಮಾಡಿಕೊಂಡು ಬೆಂಗಳೂರು ಬಿಟ್ಟು ಬೇರೆ ರಾಜ್ಯಕ್ಕೆ ಪರಾರಿಯಾಗಿದ್ದಾನೆ. ಸದ್ಯ ನಾಪತ್ತೆಯಾಗಿರುವ ಬೇರಾ ರಾಮ್‌ಗಾಗಿ ಪೊಲೀಸರಿಂದ ಹುಡುಕಾಟ ನಡೆಯುತ್ತಿದೆ.ಇದನ್ನೂ ಓದಿ: ಮುದುಕಾಗುತ್ತಿರುವ ಚೀನಾ – ಮದುವೆಯಿಂದ ದೂರ ಉಳಿಯುತ್ತಿರುವ ಯುವಜನತೆ!

 

 

Share This Article