ರಾಯಚೂರು: ಸ್ವಾಮೀಜಿಗಳಿಗೇನು ಗೊತ್ತು ಗೋಮಾಂಸ ರುಚಿ ಎಂದು ಗೋಹತ್ಯೆ ನಿಷೇಧದ ಬಗ್ಗೆ ವ್ಯಂಗ್ಯವಾಡಿದ್ದ ಮಾಜಿ ಸಿಎಂ ಈಗ ಮೂಲೆಗುಂಪಾಗಿದ್ದಾರೆ. ಅವರ ಪಾಪದ ಫಲವನ್ನ ಈಗ ಅನುಭವಿಸುತ್ತಿದ್ದಾರೆ ಎಂದು ಶ್ರೀಶೈಲ ಜಗದ್ಗುರುಗಳು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೆಸರನ್ನು ಹೇಳದೆ ಟೀಕಿಸಿದ್ದಾರೆ.
ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಎರಡನೇ ದಿನದ ಕಾರ್ಯಕ್ರಮಕ್ಕೆ ಜಗದ್ಗುರುಗಳು ಚಾಲನೆ ನೀಡಿದರು. ಬಳಿಕ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ದೇಶಿಕೇಂದ್ರ ಸ್ವಾಮಿಜಿ ಗೋಹತ್ಯೆ ಕುರಿತು ಮಾತನಾಡುತ್ತ ಮಾಜಿ ಸಿಎಂ ವಿಷಯ ಪ್ರಸ್ತಾಪಿಸಿದ್ದಾರೆ. ಗೋಹತ್ಯೆ ನಿಷೇಧದ ಬಗ್ಗೆ ವ್ಯಂಗ್ಯವಾಡಿದ್ದ ಮಾಜಿ ಸಿಎಂ ಈಗ ಮೂಲಗುಂಪಾಗಿದ್ದಾರೆ. ಅವರ ಪಾಪದ ಫಲವನ್ನ ಈಗ ಅನುಭವಿಸುತ್ತಿದ್ದಾರೆ. ಈ ಹಿಂದೆ ಗೋಹತ್ಯೆ ನಿಷೇಧದ ಬಗ್ಗೆ ಅಂದಿನ ಸ್ವಾಮಿಜಿಗಳು ಮನವಿ ಮಾಡಿದ್ದಾಗ, ಸ್ವಾಮೀಜಿಗಳಿಗೇನು ಗೊತ್ತು ಗೋಮಾಂಸ ರುಚಿ ಎಂದಿದ್ದರು ಟೀಕಿಸಿದ್ದರು. ಈಗ ಅವರ ಸ್ಥಿತಿ ಏನಾಗಿದೆ ಎಂಬುದು ರಾಜ್ಯದ ಜನರಿಗೆ ಗೊತ್ತಾಗಿದೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಶ್ರೀಶೈಲ ಜಗದ್ಗುರುಗಳು ಮಾತಿನ ಚಾಟಿ ಬೀಸಿದ್ದಾರೆ.
ಉಜ್ಜಯಿನಿ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡಿ, ಯಾರೋ ಇಬ್ಬರು ಮಠಾಧೀಶರು ರಾಜಕೀಯ ಹೇಳಿಕೆ ನೀಡದ ಮಾತ್ರಕ್ಕೆ ಎಲ್ಲಾ ಮಠಾಧೀಶರು ರಾಜಕೀಯ ಮಾಡುತ್ತಾರೆ ಎನ್ನುವುದು ತಪ್ಪು ಹೇಳಿಕೆ. ಸ್ವಾಮೀಜಿಗಳು ರಾಜಕೀಯ ಮಾಡುವಾಗ ನಾವು ಏಕೆ ರಾಜಕೀಯ ಮಾಡಬಾರದು ಎನ್ನುವ ಸಾಹಿತಿಗಳ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ ಎಂದು ಪ್ರತಿಕ್ರಿಯಿಸಿದರು.
ಕಾಲಕಾಲಕ್ಕೆ ಮಠಾಧೀಶರು ರಾಜರ ಕಾಲದಿಂದಲೂ ಆಡಳಿತದಲ್ಲಿರುವವರಿಗೆ ಸಲಹೆ, ಸೂಚನೆ ನೀಡುತ್ತಾ ಬಂದಿದ್ದಾರೆ. ಅದನ್ನು ಈಗ ಮುಂದುವರಿಸಿಕೊಂಡು ಬರಲಾಗುತ್ತಿದೆ. ಮಠಾಧೀಶರು ಯಾವುದೇ ಜಾತಿ, ಪಕ್ಷಕ್ಕೆ ಸೀಮಿತವಾಗಿಲ್ಲ. ಜನಸಮುದಾಯಕ್ಕೆ ಒಳ್ಳೆಯದನ್ನು ಬಯಸುವ ಕೆಲಸವನ್ನು ಮಾಡುತ್ತಾರೆ. ಲಿಂಗಾಯತ ಪ್ರತೇಕ ಧರ್ಮ ವಿಚಾರ ಮುಗಿದ ಕಥೆ. ಆ ಬಗ್ಗೆ ವಿಮರ್ಶೆ ಅಗತ್ಯವಿಲ್ಲ. ಯಾರೂ ಧರ್ಮವನ್ನು ಒಡೆಯುವ ಕೆಲಸವನ್ನು ಮಾಡಬಾರದು ಎಂದು ಮನವಿ ಮಾಡಿಕೊಂಡರು.