ಚಿನ್ನದ ತೊಟ್ಟಿಲಲ್ಲಿ ಆಡಿದ ಉಡುಪಿಯ ಮುದ್ದು ಕೃಷ್ಣ

Public TV
1 Min Read

ಉಡುಪಿ: ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಸಡಗರ ಉಡುಪಿಯಲ್ಲಿ ಎಂದಿನಂತೆ ಜೋರಾಗಿದೆ ಇದೆ. ಅದರಲ್ಲೂ ಶ್ರೀ ಕೃಷ್ಣ ಮಠವನ್ನು ಸಂಪೂರ್ಣವಾಗಿ ಹೂವಿನಿಂದ ಅಲಂಕರಿಸಲಾಗಿದ್ದು, ಮಠದ ಗರ್ಭಗುಡಿಯಂತೂ ನಂದನವನವಾಗಿದೆ.

ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ಭಗವಾನ್ ಶ್ರೀಕೃಷ್ಣನ ದರ್ಶನದಲ್ಲಿ ತಲ್ಲೀನರಾಗಿದ್ದಾರೆ. ಪರ್ಯಾಯ ಪಲಿಮಾರು ಮಠಾಧೀಶರಾದ ವಿದ್ಯಾಧೀಶ ಸ್ವಾಮೀಜಿ ಮತ್ತು ಅದಮಾರು ಕಿರಿಯ ಶ್ರೀಗಳು ಉಡುಪಿ ಕೃಷ್ಣನಿಗೆ ಯಶೋಧೆ ಕೃಷ್ಣ ಅಲಂಕಾರ ಮಾಡಿದ್ದಾರೆ. ಶ್ರೀ ಕೃಷ್ಣನ ಮೂಲ ಮೂರ್ತಿಗೆ ಅಲಂಕಾರ ಮಾಡಿ, ಉತ್ಸವ ಮೂರ್ತಿಯನ್ನು ಚಿನ್ನದ ತೊಟ್ಟಿಲಿನಲ್ಲಿ ಇಟ್ಟು ಪೂಜಿಸಲಾಗಿದೆ.

ಯಶೋಧೆ ಶ್ರೀಕೃಷ್ಣನನ್ನು ತೊಟ್ಟಿಲಲ್ಲಿ ಕೂರಿಸಿ ತೂಗುವಂತೆ ಕಾಣುವ ವಿಭಿನ್ನ ಅಲಂಕಾರ ಭಕ್ತರ ಗಮನ ಸೆಳೆದಿದೆ. ಅಷ್ಟಮಿಯ ದಿನದ ಮಹಾಪೂಜೆಯನ್ನು ಪಲಿಮಾರು ಸ್ವಾಮೀಜಿ ಮಾಡಿದ್ದು, ಶ್ರೀಕೃಷ್ಣನಿಗೆ ಲಕ್ಷ ತುಳಸಿ ಅರ್ಚನೆಯನ್ನು ನೆರವೇರಿಸಿದ್ದಾರೆ.

ಈ ದಿನದ ವಿಶೇಷವೆಂದರೆ ಒಂದು ದಿನಪೂರ್ತಿ ಶ್ರೀಕೃಷ್ಣ ಭಕ್ತರು ಉಪವಾಸ ಇರುತ್ತಾರೆ. ಮಧ್ಯರಾತ್ರಿ 12.12ಕ್ಕೆ ಭಗವಂತನ ಜನನವಾಗುವ ಸಂದರ್ಭ ದೇವರಿಗೆ ಹಾಲು ಮತ್ತು ನೀರು ಸಮರ್ಪಿಸಿ ಸ್ವಾಗತಿಸಲಾಗುತ್ತದೆ. ನಂತರ ಶ್ರೀ ಕೃಷ್ಣನ ಭಕ್ತರು ಅನ್ನಾಹಾರ ಸ್ವೀಕಾರ ಮಾಡುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *