ಕೋಲ್ಕತ್ತಾ ವೈದ್ಯೆ ಅತ್ಯಾಚಾರಿ ಆರೋಪಿಗೆ ಜಾಮೀನು ನೀಡಬೇಕೆ? – ಸಿಬಿಐ ಪರ ವಕೀಲರ ವಿರುದ್ಧ ಕೋರ್ಟ್‌ ಗರಂ

Public TV
1 Min Read

– ವಾದ ಮಂಡಿಸಲು ಕೋರ್ಟ್‌ಗೆ ತಡವಾಗಿ ಬಂದಿದ್ದಕ್ಕೆ ತರಾಟೆ

ಕೋಲ್ಕತ್ತಾ: ಟ್ರೈನಿ ವೈದ್ಯೆ ಅತ್ಯಾಚಾರ ಪ್ರಕರಣದ ವಿಚಾರಣೆ ವೇಳೆ ಕೋರ್ಟ್‌ಗೆ ಸಕಾಲಕ್ಕೆ ಹಾಜರಾಗದಿದ್ದಕ್ಕೆ ಸಿಬಿಐ ತನಿಖಾಧಿಕಾರಿ ಹಾಗೂ ವಕೀಲರ ವಿರುದ್ಧ ಸೀಲ್ದಾ ಕೋರ್ಟ್‌ ಗರಂ ಆಗಿದೆ. ಅತ್ಯಾಚಾರ ಮತ್ತು ಕೊಲೆ ಆರೋಪಿಗೆ ಜಾಮೀನು ನೀಡಬೇಕಾ ಎಂದು ಕೋರ್ಟ್‌ ತರಾಟೆಗೆ ತೆಗೆದುಕೊಂಡಿತು.

ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣದ ವಿಚಾರಣೆ ಕೋರ್ಟ್‌ನಲ್ಲಿ ನಡೆಯಿತು. ಆದರೆ, ಸಿಬಿಐನ ತನಿಖಾಧಿಕಾರಿ ಕೋರ್ಟ್‌ನಲ್ಲಿ ಹಾಜರಿರಲಿಲ್ಲ. ಇತ್ತ ತನಿಖಾ ಸಂಸ್ಥೆಯ ವಕೀಲರು 40 ನಿಮಿಷ ತಡವಾಗಿ ಹಾಜರಾದರು. ಇದರಿಂದ ಕೋಪಗೊಂಡ ನ್ಯಾಯಾಲಯ, ಪ್ರಕರಣದ ಪ್ರಮುಖ ಆರೋಪಿಗೆ ಜಾಮೀನು ನೀಡಬೇಕೆ ಎಂದು ಗರಂ ಆಯಿತು. ತನಿಖಾ ಸಂಸ್ಥೆಯ ಈ ನಡೆ ಆಲಸ್ಯ ಮನೋಭಾವವನ್ನು ತೋರಿಸುತ್ತದೆ ಎಂದು ಚಾಟಿ ಬೀಸಿತು.

ಆರ್‌ಜಿ ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಕೊಂದ ಪ್ರಕರಣದಲ್ಲಿ ಬಂಧಿತನಾಗಿರುವ ಸಂಜಯ್‌ ರಾಯ್‌ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಿತು.

ರಾಯ್ ಪರ ವಕೀಲರು ಜಾಮೀನಿಗಾಗಿ ವಾದ ಮಂಡಿಸುತ್ತಿದ್ದಂತೆ, ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಪಮೇಲಾ ಗುಪ್ತಾ ಅವರಿಗೆ ಪಬ್ಲಿಕ್ ಪ್ರಾಸಿಕ್ಯೂಟರ್ ತಡವಾಗಿ ಬರುತ್ತಾರೆ ಎಂದು ತಿಳಿಸಲಾಯಿತು. ಅದಕ್ಕೆ ಮ್ಯಾಜಿಸ್ಟ್ರೇಟ್, ನಾನು ಸಂಜಯ್ ರಾಯ್‌ಗೆ ಜಾಮೀನು ನೀಡಬೇಕೇ? ಇದು ಸಿಬಿಐನ ಆಲಸ್ಯ ಮನೋಭಾವ ತೋರಿಸುತ್ತದೆ. ಇದು ಅತ್ಯಂತ ದುರದೃಷ್ಟಕರ ಎಂದು ಗರಂ ಆದರು.

ವಕೀಲರು ಅಂತಿಮವಾಗಿ ಸುಮಾರು 40 ನಿಮಿಷಗಳ ಕೋರ್ಟ್‌ಗೆ ಬಂದರು. ವಿಳಂಬಕ್ಕೆ ಕಾರಣ ತಿಳಿಸಿದರು. ನಂತರ ವಾದಗಳು ಮುಂದುವರೆದವು. ಎರಡೂ ಕಡೆಯವರ ವಾದ-ಪ್ರತಿವಾದ ಆಲಿಸಿದ ಕೋರ್ಟ್‌ ಆರೋಪಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿತು.

Share This Article