ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಸ್ಥಿತಿ ಚಿಂತಾಜನಕ

Public TV
1 Min Read

– 15ಕ್ಕೂ ಹೆಚ್ಚು ರೌಡಿಗಳ ವಿಚಾರಣೆ ತೀವ್ರ

ಬೆಂಗಳೂರು: ಶುಕ್ರವಾರದಂದು ಶೂಟೌಟ್‍ಗೆ ಒಳಗಾದ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಸ್ಥಿತಿ ಚಿಂತಾಜನಕವಾಗಿದೆ.

ಶುಕ್ರವಾರದಂದು ಯಲಹಂಕದ ಕೋಗಿಲು ಕ್ರಾಸ್ ಬಳಿ ಕಡಬಗೆರೆ ಶ್ರೀನಿವಾಸ್ ಮೇಲೆ ಗುಂಡಿನ ದಾಳಿ ನಡೆದಿತ್ತು. ದಾಳಿಯಿಂದ ಶ್ರೀನಿವಾಸ್ ದೇಹಕ್ಕೆ 3 ಗುಂಡು ಹೊಕ್ಕಿತ್ತು. ಭುಜಕ್ಕೆ ಒಂದು, ಹೊಟ್ಟೆಯ ಭಾಗಕ್ಕೆ 2 ಗುಂಡು ಹೊಕ್ಕಿತ್ತು. ಹೊಟ್ಟೆಗೆ 2 ಗುಂಡು ತಗುಲಿರುವುದರಿಂದ ಲಿವರ್‍ಗೆ ಡ್ಯಾಮೇಜ್ ಆಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿರುವ ಕಡಬಗೆರೆ ಶ್ರೀನಿವಾಸ್, ಸದ್ಯ ಕೋಮಾ ಸ್ಥಿತಿಯಲ್ಲಿದ್ದಾರೆ.

ಈ ಪ್ರಕರಣದ ತನಿಖೆ ತೀವ್ರಗೊಳಿಸಿದ ತನಿಖಾ ತಂಡ 15 ಕ್ಕೂ ಹೆಚ್ಚು ಅಪರಾಧ ಹಿನ್ನಲೆಯುಳ್ಳ ವ್ಯಕ್ತಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಮುಖವಾಗಿ ಮಾದನಾಯಕನಹಳ್ಳಿ, ನೆಲಮಂಗಲ ಹಾಗೂ ಬಸವೇಶ್ವರನಗರದ ಸುತ್ತ ಮುತ್ತಲಿನ ಹಳೇ ರೌಡಿಶೀಟರ್‍ಗಳನ್ನು ವಶಕ್ಕೆ ಪಡೆದು ರಾತ್ರಿಯಿಡೀ ಶಂಕಿತರ ವಿಚಾರಣೆ ನಡೆಸಿದ್ದಾರೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಶೂಟೌಟ್ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಕಡಬಗೆರೆ ಶ್ರೀನಿವಾಸ್‍ರೊಂದಿಗೆ ಹೆಚ್ಚು ಆತ್ಮೀಯತೆ ಹೊಂದಿದ್ದ ಹೇರೋಹಳ್ಳಿ ಮಾಜಿ ಕಾರ್ಪೊರೇಟರ್ ಹನುಮಂತೇಗೌಡರನ್ನು ಯಲಹಂಕ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಕಡಬಗೆರೆ ಶ್ರೀನಿವಾಸ್ ಅವರ ಇತ್ತೀಚಿನ ಚಟುವಟಿಕೆ ಬಗ್ಗೆ ಮಾಹಿತಿ ಸಿಗುವ ಹಿನ್ನೆಲೆಯಲ್ಲಿ ಹನುಮಂತೇಗೌಡ ಅವರ ವಿಚಾರಣೆ ನಡೆಯುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *