ಇಂಡೋ-ಪಾಕ್ ಕ್ರಿಕೆಟ್ ಪಂದ್ಯಕ್ಕಾಗಿ ಸ್ನೋಫಾಲ್ ಕಥೆ ಹೇಳಿದ ಅಖ್ತರ್

Public TV
4 Min Read

ನವದೆಹಲಿ: ಇಂಡೋ-ಪಾಕ್ ದ್ವಿಪಕ್ಷೀಯ ಕ್ರಿಕೆಟ್ ಪಂದ್ಯಕ್ಕಾಗಿ ಪಾಕಿಸ್ತಾನದ ಶೋಯೆಬ್ ಅಖ್ತರ್ ಸ್ನೋಫಾಲ್ ಕಥೆಯನ್ನು ಹೇಳಿದ್ದಾರೆ.

ಹೆಮ್ಮಾರಿ ಕೊರೊನಾ ವಿರುದ್ಧದ ಹೋರಾಟಕ್ಕೆ ಹಣ ಸಂಗ್ರಹಿಸಲು ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಭಾರತ-ಪಾಕಿಸ್ತಾನ ಟೆಸ್ಟ್ ಸರಣಿಯನ್ನು ಪ್ರಸ್ತಾಪಿಸಿದಾಗಿನಿಂದಲೂ ವಿವಿಧ ಆಟಗಾರರು ತಮ್ಮದೆಯಾದ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಅಖ್ತರ್, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸರಣಿಯನ್ನು ನೋಡಲು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಇದರಿಂದ ಕೊರೊನಾ ವಿರುದ್ಧದ ಹೋರಾಟಕ್ಕೆ ಆರ್ಥಿಕ ನೆರವು ಸಿಗಬಹುದು ಎಂದು ಸಲಹೆ ನೀಡಿದ್ದರು.

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರು ಅಂತಹ ಯಾವುದೇ ಸರಣಿಯ ಅಗತ್ಯವಿಲ್ಲ ಎಂದು ಅಖ್ತರ್ ಅವರ ಪ್ರಸ್ತಾಪವನ್ನು ನಿರಾಕರಿಸಿದ್ದಾರೆ. ವಿಶ್ವಕಪ್ ವಿಜೇತ ಭಾರತ ತಂಡದ ನಾಯಕರಾಗಿದ್ದ ಮಾಜಿ ಕ್ರಿಕೆಟರ್ ಕಪಿಲ್ ದೇವ್ ಅವರು, ಭಾರತಕ್ಕೆ ಹಣದ ಅಗತ್ಯವಿಲ್ಲ. ಅದು ಕ್ರಿಕೆಟಿಗರ ಜೀವನವನ್ನು ಅಪಾಯಕ್ಕೆ ಸಿಲುಕಿಸಬೇಡಿ ಎಂದು ಅಭಿಪ್ರಾಯಪಟ್ಟಿದ್ದರು. ಈ ಬೆನ್ನಲ್ಲೇ ಸುನಿಲ್ ಗವಾಸ್ಕರ್ ಅವರು ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು.

‘ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿಗಳಿಗಿಂತ ಲಾಹೋರ್‌ನಲ್ಲಿ ಹಿಮಪಾತವಾಗುವ ಸಾಧ್ಯತೆಗಳೆ ಹೆಚ್ಚು. ಎರಡೂ ತಂಡಗಳು ವಿಶ್ವಕಪ್ ಮತ್ತು ಐಸಿಸಿ ಪಂದ್ಯಾವಳಿಗಳಲ್ಲಿ ಭೇಟಿಯಾಗುತ್ತಲೇ ಇರುತ್ತವೆ. ಆದರೆ ಉಭಯ ತಂಡಗಳ ನಡುವಿನ ಸರಣಿಯು ಇದೀಗ ಅಸಂಭವವಾಗಿದೆ’ ಎಂದು ಗವಾಸ್ಕರ್ ಹೇಳಿದ್ದರು.

ಗವಾಸ್ಕರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅಖ್ತರ್, ಕಳೆದ ವರ್ಷ ಲಾಹೋರ್‌ನಿಂದ ಹಿಮಪಾತವಾಗಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಜೊತೆಗೆ, ”ಸರಿ ಬಿಡಿ ಸನ್ನಿ ಭಾಯ್, ಕಳೆದ ವರ್ಷ ಲಾಹೋರ್‌ನಲ್ಲಿ ಹಿಮಪಾತವಾಯಿತು. ಆದ್ದರಿಂದ ಅಸಾಧ್ಯ ಎನ್ನುವುದು ಯಾವುದು ಇಲ್ಲ” ಎಂದು ಬರೆದುಕೊಂಡಿದ್ದಾರೆ.

ಈ ಮೊದಲು, ಕಪಿಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅಖ್ತರ್, ”ನಾನು ಹೇಳಲು ಪ್ರಯತ್ನಿಸುತ್ತಿರುವುದನ್ನು ಕಪಿಲ್ ಭಾಯ್ ಅರ್ಥಮಾಡಿಲ್ಲ ಎಂದು ಭಾವಿಸಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲರೂ ಆರ್ಥಿಕವಾಗಿ ಸಿಕ್ಕಿಹಾಕಿಕೊಳ್ಳಲಿದ್ದಾರೆ. ಇದು ನಮ್ಮ ತಲೆಯನ್ನು ಒಟ್ಟುಗೂಡಿಸಿ ಆದಾಯವನ್ನು ಗಳಿಸುವ ಸಮಯ. ಜಾಗತಿಕ ಪ್ರೇಕ್ಷಕರು ಒಂದು ಪಂದ್ಯದಿಂದ ಸೇರುತ್ತಾರೆ. ಕಪಿಲ್ ದೇವ್ ಅವರಿಗೆ ಹಣದ ಅಗತ್ಯವಿಲ್ಲ. ಆದರೆ ಉಳಿದವರೆಲ್ಲರ ಅಭಿಪ್ರಾಯ ಭಿನ್ನವಾಗಿರುತ್ತದೆ. ನನ್ನ ಸಲಹೆಯು ಶೀಘ್ರದಲ್ಲೇ ಪರಿಗಣನೆಗೆ ಬರಲಿದೆ ಎಂಬ ಭರವಸೆ ಇದೆ” ಎಂದು ಹೇಳಿದ್ದರು.

ಇತ್ತ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು ‘ವಿಶ್ವಾಸಾರ್ಹವಲ್ಲದ ಮಂಡಳಿ’ ಎಂದು ಕರೆದ ಪಿಸಿಬಿ ಅಧ್ಯಕ್ಷ ಈಶನ್ ಮಣಿ, ಪಾಕಿಸ್ತಾನ ಕ್ರಿಕೆಟ್‍ಗೆ ಬದುಕಲು ಭಾರತೀಯ ಕ್ರಿಕೆಟ್ ಅಗತ್ಯವಿಲ್ಲ ಎಂದು ಹೇಳಿದ್ದರು. ”ನಾವು ನಷ್ಟವನ್ನು ಅನುಭವಿಸಿದ್ದೇವೆ. ಆದರೆ ಭಾರತ ನಮ್ಮ ಆಲೋಚನೆ ಅಥವಾ ಯೋಜನೆಯಲ್ಲಿಲ್ಲ. ನಾವು ಭಾರತದ ಕ್ರಿಕೆಟ್ ತಂಡವಿಲ್ಲದೆ ಬದುಕಬೇಕು. ಹೀಗಾಗಿ ನಮಗೆ ಅವರ ಅಗತ್ಯವಿಲ್ಲ” ಎಂದು ತಿಳಿಸಿದ್ದರು.

ದಂಡ ತೆತ್ತಿದ್ದ ಪಿಸಿಬಿ:
ಪಾಕಿಸ್ತಾನ ಕ್ರಿಕೆಟ್ ನಿಯಂತ್ರಣ ಮಂಡಳಿ ಐಸಿಸಿಯಲ್ಲಿ ಬಿಸಿಸಿಐ ವಿರುದ್ಧ ದೂರಿನ ಪ್ರಕರಣದಲ್ಲಿ ಸೋಲುಂಡಿದ್ದು, ಪರಿಣಾಮ 1.6 ಮಿಲಿಯನ್ ಡಾಲರ್ (ಸುಮಾರು 11 ಕೋಟಿ ರೂ.) ದಂಡವನ್ನು ಬಿಸಿಸಿಐಗೆ ಪಾವತಿಸಿತ್ತು.

ಈ ಕುರಿತು 2019ರ ಮಾರ್ಚ್ ನಲ್ಲಿ ಈಶನ್ ಮಣಿ ಪ್ರತಿಕ್ರಿಯಿಸಿ 2.2 ಮಿಲಿಯನ್ ಡಾಲರ್ ಹಣವನ್ನು ಪರಿಹಾರವಾಗಿ ಪಾವತಿ ಮಾಡಿದಿದ್ದೇವೆ ಎಂದು ತಿಳಿಸಿದ್ದರು.

ಪಾಕಿಸ್ತಾನದೊಂದಿಗೆ ದ್ವಿಪಕ್ಷಿಯ ಒಪ್ಪಂದ ಕ್ರಿಕೆಟ್ ಪಂದ್ಯಗಳನ್ನು ಭಾರತ ಆಯೋಜಿಸದ ಕಾರಣ ತನಗೆ ನಷ್ಟವಾಗಿದೆ ಎಂದು ಕಳೆದ ವರ್ಷ ಪಿಸಿಬಿ ದೂರು ದಾಖಲಿಸಿತ್ತು. ಸುಮಾರು 480 ಕೋಟಿ ರೂ. ಪರಿಹಾರವಾಗಿ ಬಿಸಿಸಿಐನಿಂದ ಕೊಡಿಸುವಂತೆ ಪಾಕಿಸ್ತಾನ ಐಸಿಸಿಗೆ ನೀಡಿದ ದೂರಿನಲ್ಲಿ ತಿಳಿಸಿತ್ತು.

2014 ರಲ್ಲಿ ಬಿಸಿಸಿಐ ಪಾಕ್ ನೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಆಡಲು ಒಪ್ಪಂದಕ್ಕೆ ಸಹಿ ಮಾಡಿತ್ತು. ಇದರಂತೆ ಭಾರತ 2014 ಹಾಗೂ 2015 ಅವಧಿಯಲ್ಲಿ ದ್ವಿಪಕ್ಷೀಯ ಸರಣಿಯಲ್ಲಿ ಭಾಗವಹಿಸಬೇಕಾಗಿತ್ತು. ಆದರೆ ಬಿಸಿಸಿಐಗೆ ಭಾರತ ಸರ್ಕಾರ ಅನುಮತಿ ನೀಡದ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಪಾಕ್ ಪ್ರವಾಸವನ್ನು ಕೈಗೊಂಡಿರಲಿಲ್ಲ. ಪಾಕಿಸ್ತಾನದ ಮನವಿಯನ್ನು ತಿರಸ್ಕರಿಸಿದ ಐಸಿಸಿ ಸಮಿತಿ, ಈ ಪ್ರಕರಣದ ವಿಚಾರಣೆ ನಡೆಸಿದ ಐಸಿಸಿ ಬಿಸಿಸಿಐಗೆ ಕಾನೂನು ವೆಚ್ಚವಾಗಿ ಸುಮಾರು 11 ಕೋಟಿಗಳನ್ನು ಪಾವತಿಸುವಂತೆ ಆದೇಶಿಸಿತ್ತು.

2009ರಲ್ಲಿ ಏನಾಗಿತ್ತು?
ಸುಮಾರು 12 ಮಂದಿಯ ಭಯೋತ್ಪಾದಕರ ತಂಡ ಶ್ರೀಲಂಕಾ ಕ್ರಿಕೆಟಿಗರು ಹಾಗೂ ಅಂಪೈರ್ ಗಳ ಮೇಲೆ ಲಹೋರಿನ ಗಢಾಪಿ ಕ್ರೀಡಾಂಗಣದ ಬಳಿ ಗುಂಡಿನ ದಾಳಿ ನಡೆಸಿತ್ತು. ಪರಿಣಾಮ ಘಟನೆಯಲ್ಲಿ 8 ಪೊಲೀಸರು ಸಾವನ್ನಪ್ಪಿದ್ದರೆ, 6 ಮಂದಿ ಗಾಯಗೊಂಡಿದ್ದರು. ಈ ವೇಳೆ ಶ್ರೀಲಂಕಾ ತಂಡಕ್ಕೆ ಇಂಗ್ಲೆಂಡ್‍ನ ಬೇಲಿಸ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಉಗ್ರರು ಸಿಡಿಸಿದ್ದ ಗುಂಡು ಬಸ್ ಗ್ಲಾಸ್ ಸೀಳಿತ್ತು. ಪರಿಣಾಮ ಗಾಜಿನ ಚುರು ತಂಡದ ಸಹಾಯಕನಾಗಿದ್ದ ಫಾಬ್ರ್ರಾಸ್ ಎಂಬವರ ಭುಜಕ್ಕೆ ಹೊಕ್ಕಿತ್ತು. ಇಂದಿಗೂ ಘಟನೆಯನ್ನು ನೆನೆದರೆ ಫಾಬ್ರ್ರಾಸ್ ಬೆಚ್ಚಿ ಬೀಳುತ್ತಾರೆ.

2015ರಲ್ಲಿ ಜಿಂಬಾಬ್ವೆ ಕ್ರಿಕೆಟ್ ಮಂಡಳಿ ಮೊಂಡು ಧೈರ್ಯ ಮಾಡಿ ಲಾಹೋರಿನಲ್ಲಿ ಕ್ರಿಕೆಟ್ ಆಡಲು ಮುಂದಾಗಿತ್ತು, ಆದರೆ ಅಂದು ಕೂಡ ಪಂದ್ಯ ನಡೆಯುವ ವೇಳೆ ಸ್ಟೇಡಿಯಂ ಹೊರ ಭಾಗದಲ್ಲಿ ಉಗ್ರ ಮಾನವ ಬಾಂಬ್ ಸ್ಫೋಟಿಸಿ ಓರ್ವ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಬಲಿ ಪಡೆದಿದ್ದ. ಈ ಘಟನೆ ಮತ್ತೆ ಪಾಕ್ ಕ್ರಿಕೆಟ್ ಆಡಲು ಆಸುರಕ್ಷಿತ ಎಂಬುವುದು ಖಚಿತವಾಯ್ತು. ಪರಿಣಾಮ ಐಸಿಸಿ ಕ್ರಿಕೆಟ್ ಟೂರ್ನಿಗಳನ್ನು ಏರ್ಪಡಿಸುವ ಅವಕಾಶವನ್ನು ಪಾಕಿಸ್ತಾದಿಂದ ಕಿತ್ತುಕೊಂಡಿತ್ತು.

Share This Article
Leave a Comment

Leave a Reply

Your email address will not be published. Required fields are marked *