ಜೇಮ್ಸ್ ರಿಲೀಸ್ ಬಳಿಕ ಅಪ್ಪು ನೆನೆದು ಕಣ್ಣೀರಿಟ್ಟ ಶಿವಣ್ಣ

Public TV
2 Min Read

ಮೈಸೂರು: ಪ್ರತಿಯೊಂದು ಸಿನಿಮಾ ಬಿಡುಗಡೆಯಾದಾಗಲೂ ಅಪ್ಪು ಕರೆ ಮಾಡಿ ಸಿನಿಮಾ ಹೇಗಿತ್ತು ಎಂದು ಕೇಳುತ್ತಿದ್ದ. ಆದರೆ ಈ ಬಾರಿ ಜೇಮ್ಸ್ ಚಿತ್ರ ವೀಕ್ಷಿಸಿದ ಬಳಿಕ ಚಿತ್ರ ಹೇಗಿತ್ತು ಎಂದು ಕೇಳಲು ಅಪ್ಪುವಿನ ಕಾಲ್ ಬರಲ್ಲ. ಈ ವಿಷಯ ಮನಸ್ಸಿಗೆ ತುಂಬಾ ನೋವು ತರುತ್ತಿದೆ ಎಂದು ಪುನೀತ್ ರಾಜ್ ಕುಮಾರ್ ಅಣ್ಣ ನಟ ಶಿವ್ ರಾಜ್‌ಕುಮಾರ್ ಸುದ್ದಿಗೋಷ್ಟಿಯಲ್ಲಿ ಅಪ್ಪು ನೆನೆದು ಕಣ್ಣೀರಿಟ್ಟರು.

ಪುನೀತ್ ಅಭಿನಯದ ಸಿನಿಮಾ ಜೇಮ್ಸ್ ಬಿಡುಗಡೆ ಬಳಿಕ ಮಾತನಾಡಿದ ಶಿವಣ್ಣ ಅಪ್ಪು ಟ್ಯಾಲೆಂಟ್ ಬಗ್ಗೆ ಮಾತಾಡಲು ಸಾಧ್ಯವೇ ಇಲ್ಲ. ಅವನ ಪ್ರತಿಯೊಂದು ಸಿನಿಮಾವನ್ನೂ ನಾನು ಎಂಜಾಯ್ ಮಾಡಿಕೊಂಡು ನೋಡುತ್ತಿದ್ದೆ. ಆಕ್ಷನ್, ಆಕ್ಟಿಂಗ್ ಎಲ್ಲವನ್ನೂ ಆತ ಚಿಕ್ಕ ವಯಸ್ಸಿನಲ್ಲೇ ಮೀರಿ ಬೆಳೆದಿದ್ದ. ಈ ಮೂಲಕ ಎಲ್ಲರಿಗೂ ಹತ್ತಿರವಾದಾತ ನಮ್ಮೊಂದಿಗೆ ಇಲ್ಲ ಎಂಬುದನ್ನು ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ ಎಂದು ಕಂಬನಿ ಮಿಡಿದರು. ಇದನ್ನೂ ಓದಿ: ನಾನು ಜೇಮ್ಸ್ ಸಿನಿಮಾ ನೋಡಲಾರೆ : ಅಶ್ವಿನಿ ಪುನೀತ್ ರಾಜ್ ಕುಮಾರ್

ಪುನೀತ್ ಪುಟ್ಟ ಮಗುವಿದ್ದಾಗದಿಂದ ಹಿಡಿದು ದೊಡ್ಡವನಾಗುವವರೆಗೂ ನೋಡಿದ್ದೇನೆ. ಕೇವಲ ನಟನೆಯಲ್ಲಿ ಮಾತ್ರವಲ್ಲ. ನಿಜ ಜೀವನದಲ್ಲೂ ಆತನ ಹೃದಯ ಶುದ್ಧ, ನಿಷ್ಕಲ್ಮಶವಾಗಿತ್ತು. ಈ ವಿಷಯವನ್ನೇ ಎಲ್ಲರೂ ಮೆಚ್ಚಿರುವುದು ಎಂದರು.

ಜೇಮ್ಸ್ ಚಿತ್ರವನ್ನು ತುಂಬಾ ಚೆನ್ನಾಗಿ ತೆರೆ ಮೇಲೆ ತಂದಿದ್ದಾರೆ. ಅದರ ಹಿಂದಿನ ಶ್ರಮ ಮೇಕಿಂಗ್‌ನಲ್ಲಿಯೇ ತಿಳಿಯುತ್ತದೆ. ಇಂದು ಜೇಮ್ಸ್ ಚಿತ್ರವನ್ನು ಒಬ್ಬ ಅಭಿಮಾನಿಯಾಗಿ ನೋಡಿದ್ದೇನೆ, ಎಂಜಾಯ್ ಮಾಡಿದ್ದೇನೆ. ಆದರೆ ಅಲ್ಲಲ್ಲಿ ಅಪ್ಪು ಇಲ್ಲ ಎಂಬುದು ನೆನೆಪಿಗೆ ಬರುತ್ತಿತ್ತು, ಕಣ್ಣಲ್ಲಿ ನೀರು ತರುತ್ತಿತ್ತು. ಅಪ್ಪು ಇಲ್ಲದೇ ಈ ಸಿನಿಮಾ ತೆರೆ ಮೇಲೆ ಬಂದಿರುವುದು ತುಂಬಾ ದುಃಖದ ವಿಷಯ ಎಂದರು. ಇದನ್ನೂ ಓದಿ: 80 ಕೋಟಿಗೆ ಜೇಮ್ಸ್ ಟಿವಿ ರೈಟ್ಸ್ ಸೇಲಾಯ್ತಾ? ಡಿಮಾಂಡಪ್ಪೋ ಡಿಮಾಂಡ್

ಈ ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಬಿಡುಗಡೆ ಹೊಂದಿದೆ ಎಂದರೆ ಹೆಮ್ಮೆ ಎನಿಸುತ್ತದೆ. ಒಂದು ಕಡೆ ದುಃಖ ಆದರೆ ಇನ್ನೊಂದು ಕಡೆ ಸಂತೋಷವೂ ಇದೆ. ಅಪ್ಪು ಅಭಿಮಾನಿಗಳ ಮನಸ್ಸಲ್ಲಿ ಬೆರೆತಿದ್ದಾನೆ. ಕರ್ನಾಟಕದಲ್ಲಿ ಮಾತ್ರವಲ್ಲದೇ ಇಡೀ ಭಾರತದಲ್ಲೂ ಸಿನಿಮಾ ಬಗ್ಗೆ ಒಳ್ಳೆ ಪ್ರತಿಕ್ರಿಯೆ ಬರುತ್ತಿದೆ ಎಂದು ಹೇಳಿದರು.

ಅಪ್ಪು ಸಿನಿಮಾದಲ್ಲಿ ಹೇಳಿರುವುದು ಕೇವಲ ಡೈಲಾಗ್ ಅಲ್ಲ. ಅವನ ವ್ಯಕ್ತಿತ್ವದಂತೆಯೇ ಡೈಲಾಗ್‌ಗಳನ್ನು ಬರೆಯಲಾಗಿದೆ. ಅಪ್ಪು ಸಿನಿಮಾಗೆ ನಾನು ಧ್ವನಿ ಕೊಟ್ಟಿರುವುದು ನನ್ನ ಭಾಗ್ಯ. ನಾನು ಸಿನಿಮಾ ನೋಡುತ್ತಿರುವಾಗ ತೆರೆ ಮೇಲೆ ಕೇವಲ ಅಪ್ಪು ಕಾಣಿಸುತ್ತಿದ್ದ. ನನ್ನ ಧ್ವನಿ ಅಲ್ಲ. ಇದನ್ನು ಅಭಿಮಾನಿಗಳು ಇಷ್ಟ ಪಟ್ಟರೆ ಅಷ್ಟೇ ನನಗೆ ಸಂತೋಷ ಎಂದು ಭಾವುಕರಾದರು.

Share This Article
Leave a Comment

Leave a Reply

Your email address will not be published. Required fields are marked *