ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು- ಪೊಲೀಸರಿಗೂ ಚಾಕು ಇರಿಯಲು ಮುಂದಾದ ಕಿಡಿಗೇಡಿ

Public TV
2 Min Read

ಶಿವಮೊಗ್ಗ: ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಮಿಂದೇಳಬೇಕಿದ್ದ ಶಿವಮೊಗ್ಗ ಬೂದಿಮುಚ್ಚಿದ ಕೆಂಡವಾಗಿದೆ. ವೀರಸಾವರ್ಕರ್-ಟಿಪ್ಪು ಫ್ಲೆಕ್ಸ್ ವಿವಾದ ಎಬ್ಬಿಸಿದ್ದ ಪ್ರಕರಣದಲ್ಲಿ ಶಿವಮೊಗ್ಗದಲ್ಲಿ ಬೆಳಗ್ಗಿನ ಜಾವ 4 ಗಂಟೆಗೆ ಕೂಡ ಗುಂಡಿನ ಸದ್ದು ಕೇಳಿದೆ.

ಪ್ರೇಮ್ ಸಿಂಗ್‍ಗೆ ಚೂರಿ ಇರಿದ ಪ್ರಕರಣದಲ್ಲಿ ಆರೋಪಿಗಳ ಬಂಧಿಸಲು ಹೋದ ಪೊಲೀಸರ ಮೇಲೆ ಆರೋಪಿ ಜಬೀವುಲ್ಲಾ (30) ಅನ್ನೋ ಕಿಡಿಗೇಡಿ ಚಾಕು ತೋರಿಸಿ ಬೆದರಿಸಿದ್ದಾನೆ. ದುಷ್ಕರ್ಮಿಗೆ ಬಿಸಿ ಮುಟ್ಟಿಸಿದ ವಿನೋಬಾನಗರ ಠಾಣೆ ಪಿಎಸ್‍ಐ ಮಂಜುನಾಥ್ ಕುರಿ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಪೊಲೀಸರಿಗೆ ಇರಿಯೋಕೆ ಮುಂದಾದ ಕಿಡಿಗೇಡಿ ಜಬೀವುಲ್ಲಾನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.

ಫಾಲಕ್ ಪ್ಯಾಲೇಸ್ ಹಿಂಭಾಗದ ಪ್ರದೇಶದಲ್ಲಿ ಘಟನೆ ನಡೆದಿದ್ದು, ಜಬೀವುಲ್ಲಾನನ್ನು ಪೊಲೀಸರು ಮೆಗ್ಗಾನ್‍ಗೆ ದಾಖಲಿಸಿದ್ದಾರೆ. ಗಲಾಟೆ ಬೆನ್ನಲ್ಲೇ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ರು. ಖುದ್ದು ಲಾಠಿ ಹಿಡಿದು ಪರಿಶೀಲನೆಗೆ ಇಳಿದ್ರು. ಇದನ್ನೂ ಓದಿ: ಸಾವರ್ಕರ್ ಫೋಟೋ ವಿವಾದ – ಎರಡು ಗುಂಪುಗಳ ಮಧ್ಯೆ ಘರ್ಷಣೆ, ಶಿವಮೊಗ್ಗದಲ್ಲಿ ನಿಷೇಧಾಜ್ಞೆ

ಐಜಿಪಿ ತ್ಯಾಜರಾಜನ್, ಎಸ್‍ಪಿ ಲಕ್ಷ್ಮಿಪ್ರಸಾದ್ ಬಳಿ ಮಾಹಿತಿ ಸಂಗ್ರಹಿಸಿದ್ರು. ತ್ರಿಬಲ್ ರೈಡಿಂಗ್, ಅನಗತ್ಯ ಸಂಚಾರ ಮಾಡುವವರ ಪರಿಶೀಲಿಸಿದ್ರು. ಬಳಿಕ ಘರ್ಷಣೆ ವೇಳೆ ಪ್ರೇಮ್ ಸಿಂಗ್ ಎಂಬಾತನಿಗೆ ಚಾಕು ಇರಿದ ಸಂಬಂಧ ನದೀಮ್ (25), ಅಬ್ದುಲ್ ರೆಹಮಾನ್ (25) ಅನ್ನೋವ್ರನ್ನ ಬಂಧಿಸಲಾಗಿದೆ. ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸ್ತಿದ್ದಾರೆ.

ಸದ್ಯ ಶಿವಮೊಗ್ಗದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ಪರಿಸ್ಥಿತಿ ಕಂಟ್ರೋಲ್‍ಗೆ ತರುವ ಸಲುವಾಗಿ ಶಿವಮೊಗ್ಗ ನಗರ ಹಾಗೂ ಭದ್ರಾವತಿ ನಗರ ಪ್ರದೇಶದಲ್ಲಿ ಆ.18ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. 144 ಸೆಕ್ಷನ್ ಜಾರಿ ಹಿನ್ನೆಲೆ ಶಿವಮೊಗ್ಗ ಹಾಗೂ ಭದ್ರಾವತಿ ನಗರದ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ, ಕುವೆಂಪು ವಿವಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ.

ಗಲಾಟೆ ನಡೆದ ಪ್ರದೇಶಕ್ಕೆ ನಿರ್ಬಂಧ ವಿಧಿಸಲಾಗಿದ್ದು, ವಾಹನ ಸವಾರರಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ. ನಗರದಲ್ಲಿ ಬಂದೋಬಸ್ತ್‍ಗಾಗಿ ಈ ಹಿಂದೆ ಇಲ್ಲೇ ಕರ್ತವ್ಯ ನಿರ್ವಹಿಸಿದ್ದ ಪೊಲೀಸ್ ಅಧಿಕಾರಿಗಳನ್ನು ಕರೆಸಿಕೊಳ್ಳಲಾಗಿದೆ. 10 ಕೆಎಸ್‍ಆರ್‍ಪಿ, 10 ಡಿಎಆರ್ ಹಾಗು ಆರ್‍ಎಎಫ್ ತುಕಡಿ ಜಿಲ್ಲೆಗೆ ಆಗಮಿಸಿವೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಪರಿಸ್ಥಿತಿ ಉದ್ವಿಗ್ನ – ಯುವಕನಿಗೆ ಚಾಕು ಇರಿತ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *