ಮಾರಿಕಾಂಬ ದೇವಿ ಗದ್ದುಗೆ ವಿಷಯಕ್ಕೆ ಎರಡು ಕೋಮಿನ ನಡುವೆ ಘರ್ಷಣೆ

Public TV
1 Min Read

ಶಿವಮೊಗ್ಗ: ಮಾರಿಕಾಂಬ ದೇವಿ ಗದ್ದುಗೆ ಜಾಗದ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಕೋಮುಗಳ ನಡುವೆ ಘರ್ಷಣೆ ಸಂಭವಿಸಿರುವ ಘಟನೆ ತಾಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಎರಡು ಕೋಮುಗಳ ನಡುವೆ ಪರಸ್ಪರ ಕಲ್ಲು ತೂರಾಟ ಕೂಡ ನಡೆದಿದ್ದು, ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಘರ್ಷಣೆಯಲ್ಲಿ ರಾಮರಾಮ್ ಕೋರೆ ಎಂಬವರ ಮೇಲೆ ಇನ್ನೊಂದು ಕೋಮಿನವರು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾಗಿ ಗಾಯಗೊಂಡಿರುವ ರಾಮರಾವ್ ಕೋರೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದೇ ತಿಂಗಳ 31ರಂದು ಗ್ರಾಮದಲ್ಲಿ ಮಾರಿಕಾಂಬ ಜಾತ್ರೆ ನಡೆಯಲಿದೆ. ಹೀಗಾಗಿ ಗ್ರಾಮದ ಒಂದು ಕೋಮಿನವರು ಇಂದು ಸ್ಥಳವನ್ನು ಸ್ವಚ್ಛಗೊಳಿಸಿ ಪೆಂಡಾಲ್ ಹಾಕಲು ಸಿದ್ಧತೆ ನಡೆಸುತ್ತಿದ್ದರು. ಈ ವೇಳೆ ಮತ್ತೊಂದು ಕೋಮಿನ ಗುಂಪು ಈ ಜಾಗ ನಮಗೆ ಸೇರಿದ್ದು ಇಲ್ಲಿ ಗದ್ದುಗೆ ನಿರ್ಮಾಣ ಮಾಡಬೇಡಿ ಎಂದು ಗಲಾಟೆ ತೆಗೆದಿದೆ.

ಪರಿಸ್ಥಿತಿ ಅರಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜ್ ಹಾಗೂ ಸ್ಥಳೀಯ ಶಾಸಕ ಅಶೋಕ್ ಕುಮಾರ್ ನಾಯ್ಕ್ ಗ್ರಾಮಕ್ಕೆ ಭೇಟಿ ನೀಡಿ ಎರಡು ಕೋಮಿನವರನ್ನು ಸಮಾಧಾನ ಪಡಿಸುವ ಪ್ರಯತ್ನ ನಡೆಸಿದರು. ಗಲಭೆ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *