ರಾಷ್ಟ್ರದ ಜನ ಮೋದಿ ಮತ್ತು ಶಾರನ್ನು ಎರಡು ಕಣ್ಣುಗಳಂತೆ ನೋಡುತ್ತಿದ್ದಾರೆ: ಈಶ್ವರಪ್ಪ

Public TV
1 Min Read

ಶಿವಮೊಗ್ಗ: ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಮಾಜಿ ಸಿಎಂ ಸಿದ್ದರಾಮಯ್ಯ ಹಿಟ್ಲರ್‍ಗೆ ಹೋಲಿಸಿದ್ದು, ಹಿಟ್ಲರ್‍ಗೆ ಆದ ಗತಿ ಇವರಿಗೂ ಆಗುತ್ತದೆ ಅಂತಿದ್ದಾರೆ. ಆದರೆ ರಾಷ್ಟ್ರದ ಮಂದಿ ಮೋದಿ ಮತ್ತು ಅಮಿತ್ ಶಾ ಅವರನ್ನು ಎರಡು ಕಣ್ಣುಗಳಂತೆ ನೋಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಹೇಳಿದ್ದಾರೆ.

ನಗರದ ಬಸ್ ನಿಲ್ದಾಣದಲ್ಲಿ ಇಂದು ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಸಚಿವರು ಮಾತನಾಡಿದರು. ಧರ್ಮದ ವಿಚಾರದಲ್ಲಿ ಮುಸಲ್ಮಾನರು ಪಾಕಿಸ್ತಾನಕ್ಕೆ ತೆರಳಲಿ. ಹಿಂದೂಗಳು ಭಾರತದಲ್ಲಿ ಇರಲಿ ಎಂದು ಅಂಬೇಡ್ಕರ್ ಅವರೇ ಹೇಳಿದ್ದರು. ಆದರೆ ದೇಶದಲ್ಲಿರುವ ಮುಸಲ್ಮಾನರನ್ನು ಜೊತೆಗೆ ತೆಗೆದುಕೊಂಡು ಹೋಗುವ ಕೆಲಸವನ್ನು ಮೋದಿಯವರು ಮಾಡುತ್ತಿದ್ದಾರೆ ಎಂದರು.

ಪೌರತ್ವ ಕಾಯ್ದೆಯಿಂದ ಯಾವುದೇ ಮುಸಲ್ಮಾನರಿಗೂ ತೊಂದರೆ ಆಗುವುದಿಲ್ಲ. ರಾಷ್ಟ್ರದ ಹಿತದೃಷ್ಟಿಯಿಂದ ಮೋದಿಯವರು ಈ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಚುನಾವಣೆಯಲ್ಲಿ ಸೋಲು ಅನುಭವಿಸಿದ ಕಾಂಗ್ರೆಸ್ಸಿನವರ ಕುತಂತ್ರ ಈ ದೇಶದಲ್ಲಿ ನಡೆಯುತ್ತಿದೆ. ಭಾರತ ಮತ್ತು ಪಾಕಿಸ್ತಾನವನ್ನು ತುಂಡು ಮಾಡಿದ್ದು ಈ ಕಾಂಗ್ರೆಸ್ಸಿನವರೇ. ಕಾಂಗ್ರೆಸ್ ನವರು ಎಷ್ಟೇ ಗೊಂದಲ ಉಂಟು ಮಾಡಿದರೂ ಕೂಡ ರಾಷ್ಟ್ರ ಹಾಗೂ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಮುಂದೆಯೂ ಮೋದಿಯವರೇ ಪ್ರಧಾನಿಯಾಗಿ ಇರುತ್ತಾರೆ ಎಂದು ಕೈ ನಾಯಕರ ಮೇಲೆ ಕಿಡಿಕಾರಿದರು.

ಈ ಹಿಂದೆ ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗಲೇ ಪೌರತ್ವ ಕಾಯ್ದೆ ಜಾರಿಗೆ ತರಲು ಮುಂದಾಗಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಈಗ ಮೋದಿಯವರು ಈ ಕಾಯ್ದೆ ಜಾರಿಗೆ ತರುವ ಮೂಲಕ ಉತ್ತಮ ಕೆಲಸ ಮಾಡಿದ್ದಾರೆ ಎಂದು ಈಶ್ವರಪ್ಪ ಶ್ಲಾಘಿಸಿದರು.

Share This Article
Leave a Comment

Leave a Reply

Your email address will not be published. Required fields are marked *