ಕತ್ತಲ ಲೋಕದಲ್ಲಿ ಬಂಗಾರದ ದೀಪಗಳ ಸಾಲು

Public TV
2 Min Read

ಕೋಲಾರದ ದಕ್ಷಿಣ ಕಾಶಿ ಅಂತರಗಂಗೆಯಲ್ಲಿ ಶಿವದೀಪೋತ್ಸವದ ಬೆಗರು

ಕೋಲಾರ: ಜಿಲ್ಲೆಯ ದಕ್ಷಿಣ ಕಾಶಿ ಅಂತರಗಂಗೆಯ ಬೆಟ್ಟದಲ್ಲಿ ಹುಣ್ಣಿಮೆಯ ರಾತ್ರಿಯನ್ನು ಮತ್ತಷ್ಟು ಉಜ್ವಲಗೊಳಿಸಿದ್ದು ಶುಕ್ರವಾರದಂದು ನಡೆದ ದಕ್ಷಿಣಕಾಶಿ ಶ್ರೀಕಾಶಿವಿಶ್ವೇಶ್ವರಸ್ವಾಮಿ ದೇವಾಲಯದ ಶಿವದೀಪೋತ್ಸವ.

ದಕ್ಷಿಣಕಾಶಿ ಶ್ರೀಕಾಶಿ ವಿಶ್ವೇಶ್ವರಸ್ವಾಮಿ ದೇವಾಲಯದಲ್ಲಿ ಶಿವದೀಪೋತ್ಸವವನ್ನು ಬಹಳ ವಿಜೃಂಭಣೆಯಿಂದ ನಡೆಸಲಾಯ್ತು. ಈ ದೇವಾಲಯದ ವಿಶೇಷವೇನೆಂದ್ರೆ ಕಾಶಿಗೆ ಹೋಗದವರು ದಕ್ಷಿಣಕಾಶಿ ಅಂತರಗಂಗೆಗೆ ಬಂದು ಬಸವನ ಬಾಯಲ್ಲಿ ಕಾಶಿಯಿಂದಲೇ ಹರಿದು ಬರುವ ಆ ಗಂಗೆಯನ್ನು ಕುಡಿದು ಪುನೀತರಾಗುತ್ತಾರೆ. ಕಾರ್ತಿಕ ಮಾಸದಲ್ಲಿ ಬರುವ ಹುಣ್ಣಿಮೆ ದಿನದಂದು ಶಿವನು ರಾಕ್ಷಸರನ್ನು ಸಂಹರಿಸಿದ್ದನು ಎಂದು ಪುರಾಣದಲ್ಲಿದೆ. ಆ ಕಾರಣಕ್ಕೆ ಪ್ರತಿವರ್ಷ ಕಾರ್ತಿಕ ಮಾಸದ ಹುಣ್ಣಿಮೆ ದಿನದಂದು ಕಾಶಿ ವಿಶ್ವೇಶ್ವರನಿಗೆ ವಿಶೇಷವಾಗಿ ವಜ್ರಾಲಂಕಾರ ಮಾಡಿ ಶಿವ ದೀಪೋತ್ಸವವನ್ನು ಆಚರಿಸಲಾಗುತ್ತದೆ. ಈ ದಿನದಂದು ಬೆಟ್ಟದಲ್ಲಿ ಎತ್ತ ನೋಡಿದರತ್ತ ದೀಪಗಳ ಸಾಲು, ಇಲ್ಲಿ ಬಂದವರಿಗಂತೂ ಇದೇನು ಭೂ ಲೋಕವೋ ಇಲ್ಲಾ, ದೇವಲೋಕವೋ ಎಂಬ ಅನುಮಾನ. ಕತ್ತಲ ಲೋಕದಲ್ಲಿ ಬಂಗಾರದ ದೀಪಗಳು ಅಂತರಗಂಗೆಯ ಬೆಟ್ಟದಲ್ಲಿ ಪ್ರಜ್ವಲಿಸುತ್ತಿತ್ತು.

ಕಳೆದ ಹಲವು ವರ್ಷಗಳಿಂದ ಪೊಲೀಸ್ ಪೇದೆ ಗೋಪಾಲ್ ಕಾಶಿವಿಶ್ವೇಶ್ವರನ ಅನುಗ್ರಹದಿಂದ ಅಂತರಗಂಗೆಯಲ್ಲಿ ಲಕ್ಷ ದೀಪೋತ್ಸವವನ್ನು ಮಾಡುವ ಮೂಲಕ ಶಿವನಿಗೆ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ತನ್ನ ವರ್ಷದ ಇಡೀ ಸಂಬಳವನ್ನು ತನ್ನ ಖರ್ಚಿಗೆ ಬೇಕಾದಷ್ಟು ಬಳಸಿಕೊಂಡು ಉಳಿದ ಸಂಬಳವನ್ನು ದೇವರ ಸೇವೆಗೆ ಮುಡುಪಾಗಿಟ್ಟಿದ್ದಾರೆ.

ಈ ವಿಶೇಷ ದಿನದಂದು ಲಕ್ಷ ದೀಪ ಹಚ್ಚಿ ಶಿವನನ್ನು ಪ್ರಾರ್ಥನೆ ಮಾಡಿದ್ರೆ ಜನರ ಇಷ್ಟಾರ್ಥಗಳು ಈಡೇರುತ್ತವೆ ಅನ್ನೋ ನಂಬಿಕೆ ಇಲ್ಲಿದೆ. ಹಾಗಾಗಿ ಇಂಥಾದೊಂದು ಸುಂದರ ಕ್ಷಣಗಳನ್ನು ಸವಿಯಲು ಕೋಲಾರ ಸೇರಿದಂತೆ ಇತರ ತಾಲೂಕು ಹಾಗೂ ಅಕ್ಕ ಪಕ್ಕದ ಜಿಲ್ಲೆಗಳಿಂದಲೂ ಸಾವಿರಾರು ಜನರು ಅಂತರಗಂಗೆ ಬೆಟ್ಟಕ್ಕೆ ಬಂದು ಶಿವನ ಕೃಪೆಗೆ ಪಾತ್ರರಾಗುತ್ತಾರೆ. ಹಾಗೆಯೇ ಬಂದ ಸಾವಿರಾರು ಜನಕ್ಕೂ ಇಲ್ಲಿ ಪ್ರಸಾದ, ಕುಡಿಯುವ ನೀರು, ಸೇರಿದಂತೆ ಸಕಲ ವ್ಯವಸ್ಥೆಗಳನ್ನು ವ್ಯವಸ್ಥೆ ಮಾಡಲಾಗಿತ್ತು.

ದೀಪೋತ್ಸವದ ಸುಂದರ ದೃಶ್ಯಗಳು ಎಂತಹವರನ್ನು ಮಂತ್ರ ಮುಗ್ಧಗೊಳಿಸಿತ್ತು, ಭಕ್ತಿಯ ಪರಾಕಾಷ್ಠೆ ಹುಕ್ಕಿ ಆಕಾಶದ ಬೆಳ್ಳಿ ಚುಕ್ಕಿಯ ಸಾಲಿನಂತಿದ್ದ ದೀಪಗಳ ಸಾಲು ಕಂಡು ಭಕ್ತಾಧಿಗಳು ಸಂತೋಷಪಟ್ಟರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *