ಪೌರತ್ವ ಮಸೂದೆಗೆ ಲೋಕಸಭೆಯಲ್ಲಿ ಬೆಂಬಲ ನೀಡಿ ಯೂಟರ್ನ್ ಹೊಡೆದ ಶಿವಸೇನೆ

Public TV
1 Min Read

– ಬೆಂಬಲಿಸಿದ ಸಂಸದರ ವಿರುದ್ಧ ರಾಹುಲ್ ಕಿಡಿ
– ಗೊಂದಲದಲ್ಲಿ ಶಿವಸೇನೆ ಸಂಸದರು

ಮುಂಬೈ: ಲೋಕಸಭೆಯಲ್ಲಿ ಸೋಮವಾರ ರಾತ್ರಿ ಪೌರತ್ವ ತಿದ್ದುಪಡಿ ಮಸೂದೆ ಪರ ಮತ ಹಾಕಿದ್ದ ಶಿವಸೇನೆ ಈಗ ಯೂಟರ್ನ್ ಹೊಡೆದಿದ್ದು, ರಾಜ್ಯಸಭೆಯಲ್ಲಿ ಮಸೂದೆಗೆ ಬೆಂಬಲ ನೀಡಲ್ಲ ಎಂದು ಪಕ್ಷದ ಮುಖ್ಯಸ್ಥ, ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದ್ದಾರೆ.

ಮಹಾರಾಷ್ಟ್ರದ ಮೈತ್ರಿ ಸರ್ಕಾರ ಈಗಾಗಲೇ ತೊಂದರೆಯಲ್ಲಿದೆ. ಏಕೆಂದರೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಸೂದೆಯನ್ನು ಬೆಂಬಲಿಸಿದ ಪಕ್ಷ ಹಾಗೂ ಸಂಸದರನ್ನು ಖಂಡಿಸಿ ತೀಕ್ಷ್ಣವಾದ ಟ್ವೀಟ್ ಮಾಡಿದ್ದಾರೆ. ಈ ಬೆನ್ನಲ್ಲೇ ಮಸೂದೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಉದ್ಧವ್ ಠಾಕ್ರೆ, ಪೌರತ್ವ ತಿದ್ದುಪಡಿ ಮಸೂದೆಯ ವಿಷಯಗಳು ಸ್ಪಷ್ಟವಾಗದ ಹೊರತು ನಾವು ಬೆಂಬಲ ನೀಡುವುದಿಲ್ಲ. ಲೋಕಸಭೆಯಲ್ಲಿ ಸೋಮವಾರ ನಾವು ಕೇಳಿದ ಪ್ರಶ್ನೆಗಳಿಗೆ ಉತ್ತರಗಳು ಸಿಕ್ಕಿಲ್ಲ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರವು ಮಸೂದೆಯನ್ನು ರಾಜ್ಯಸಭೆಗೆ ತರುವಾಗ ಬದಲಾವಣೆಗಳನ್ನು ಮಾಡಬೇಕು. ನಾವು ಮಸೂದೆ ಪರ ಲೋಕಸಭೆಯಲ್ಲಿ ಮತ ಚಲಾಯಿಸಿದ್ದೇವೆ. ಆದರೆ ರಾಜ್ಯಸಭೆ ಅದು ಸಾಧ್ಯವಾಗದೆ ಇರಬಹುದು ಎಂದು ಉದ್ಧವ್ ಠಾಕ್ರೆ ಅವರ ಆಪ್ತ, ಶಿವಸೇನಾ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.

ರಾಜ್ಯಸಭೆಯಲ್ಲೂ ಮಸೂದೆಯನ್ನು ಪಕ್ಷವು ಬೆಂಬಲಿಸುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಶಿವಸೇನೆ ಸಂಸದ ಅರವಿಂದ ಸಾವಂತ್ ಅವರು, ನಮಗೆ ವಿಭಿನ್ನ ಪಾತ್ರಗಳಿವೆಯೇ? ಶಿವಸೇನೆ ರಾಷ್ಟ್ರೀಯ ಹಿತಾಸಕ್ತಿಯೊಂದಿಗೆ ನಿಂತಿದೆ. ಪಕ್ಷವು ಯಾರೊಬ್ಬರ ಏಕಸ್ವಾಮ್ಯವಲ್ಲ. ನಾವು ರಾಷ್ಟ್ರದ ಹಿತದೃಷ್ಟಿಯಿಂದ ಮಸೂದೆಯನ್ನು ಬೆಂಬಲಿಸಿದ್ದೇವೆ. ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಮಹಾರಾಷ್ಟ್ರದಲ್ಲಿ ಮಾತ್ರ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ.

ಸೈದ್ಧಾಂತಿಕವಾಗಿ ಭಿನ್ನಾಭಿಪ್ರಾಯದ ಶಿವಸೇನೆ-ಎನ್‍ಸಿಪಿ-ಕಾಂಗ್ರೆಸ್ ಮೈತ್ರಿಕೂಟವು ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿವೆ. ಆದರೆ ಶಿವಸೇನೆ ಕಾಂಗ್ರೆಸ್ ವಿರೋಧದ ನಡುವೆಯೂ ಪೌರತ್ವದ ತಿದ್ದುಪಡಿ ಮಸೂದೆ ಬೆಂಬಲಿಸಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ಹೀಗಾಗಿ ರಾಜ್ಯಸಭೆಯಲ್ಲಿ ಬೆಂಬಲ ನೀಡದಿರಲು ಶಿವಸೇವೆ ಮುಂದಾಗಿದೆ. ರಾಜ್ಯಸಭೆಯಲ್ಲಿ ಶಿವಸೇನೆಯ ಮೂವರು ಸದಸ್ಯರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *