ಈ ರಾಜ್ಯ ಸರ್ಕಾರ ಜನರ ಪಾಲಿಗೆ ಬದುಕಿಲ್ಲ, ಸತ್ತೋಗಿದೆ: ಬಿಎಸ್‍ವೈ

Public TV
1 Min Read

ಶಿವಮೊಗ್ಗ: ಈ ರಾಜ್ಯದಲ್ಲಿ ಮೈತ್ರಿ ಸರ್ಕಾರ ಬದುಕಿಲ್ಲ ಸತ್ತು ಹೋಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಶಿವಮೊಗ್ಗ ಗ್ರಾಮಾಂತರ ಮತದಾರರಿಗೆ ಮತ್ತು ಸಾರ್ವಜನಿಕರಿಗೆ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಯಡಿಯೂರಪ್ಪನವರು, ಈ ಹಿಂದೆ ಗುತ್ತಿಗೆ ನೀಡಲಾಗಿದ್ದ 3,667 ಎಕರೆ ಜಾಗವನ್ನು ಜಿಂದಾಲ್ ಸಂಸ್ಥೆಗೆ ಒಳವ್ಯವಹಾರ ಮಾಡಿಕೊಂಡು ಮಾರಲು ಹೊರಟಿದ್ದಾರೆ. ಸರ್ಕಾರಿ ಆಸ್ತಿ ಮಾರಾಟ ಮಾಡಲು ಹೊರಟಿರುವ ಈ ರೀತಿಯ ಸರ್ಕಾರ ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಕೆಟ್ಟ ಪರಿಸ್ಥಿತಿ ಇದೆ. ಧರ್ಮಸ್ಥಳದಲ್ಲಿ ಕುಡಿಯಲು ನೀರಿಲ್ಲ ಬರಬೇಡಿ ಎಂದು ಅಲ್ಲಿನ ಧರ್ಮಾಧಿಕಾರಿ ಹೇಳುವ ಪರಿಸ್ಥಿತಿ ಬಂದಿದೆ. ನನಗೆ ನೆನಪು ಇರುವ ಹಾಗೆ 45 ವರ್ಷದಿಂದ ಈ ಪರಿಸ್ಥಿತಿ ಬಂದಿರಲಿಲ್ಲ. ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಇತಿಹಾಸ ಬರೆಯಲು ಯಾರಾದರೂ ಕುಳಿತರೆ ಎಷ್ಟು ಬರೆದರೂ ಸಾಲದು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರ ಕ್ಷೇತ್ರದಲ್ಲಿ 7 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದು ಇತಿಹಾಸ ನಿರ್ಮಿಸಿದೆ. ಪ್ರಧಾನಿ ಮೋದಿ ಮತ್ತು ನನ್ನ ಬಗ್ಗೆ ಹಲವಾರು ಜನರು ಕೇವಲವಾಗಿ ಮಾತನಾಡಿದರು. ಆದರೆ ಮತದಾರರು ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ನಮ್ಮ ಪರವಾಗಿದ್ದಾರೆ. ಸುಮಲತಾ ಸೇರಿ ನಾವು 26 ಕ್ಷೇತ್ರ ಗೆದ್ದಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.

ಇದೇ ವೇಳೆ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ವಿರುದ್ಧ ಲೇವಡಿ ಮಾಡಿದ ಯಡಿಯೂರಪ್ಪ, ಲೋಕಸಭೆಗೆ ಹೋಗುತ್ತೇನೆ ಎಂದುಕೊಂಡು ಹಿಂದಿ ಕಲಿಯಲು ಆರಂಭಿಸಿದರು. ಹಿಂದಿ ಕಲಿಯೋದು ಬಿಡಬೇಡಿ, ಮುಂದಿನ ಐದು ವರ್ಷದ ನಂತರ ಮತ್ತೆ ಬೇಕಾಗುತ್ತದೆ ಎಂದು ಕಾಲೆಳೆದರು.

ಯಾವುದೇ ರಾಜಕೀಯ ಪಕ್ಷ ಮತ್ತೊಮ್ಮೆ ಶಿವಮೊಗ್ಗದಲ್ಲಿ ನಮ್ಮ ಎದುರು ಸ್ಪರ್ಧೆ ಮಾಡಬಾರದು. ಆ ರೀತಿಯ ಪಾಠವನ್ನು ನಮ್ಮ ಕಾರ್ಯಕರ್ತರು ಕಲಿಸಿದ್ದಾರೆ. ಮೋದಿ ಮುಂದೆ ಯಾರು ಚುನಾವಣೆಯಲ್ಲಿ ನಿಲ್ಲಲು ಆಗಲಿಲ್ಲ. ಲೋಕಸಭಾ ಚುನಾವಣೆಗೆ ಮೂರು ತಿಂಗಳ ಮೊದಲೇ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿತ್ತು. ಇದೇ ಬಿಜೆಪಿ ಗೆಲುವಿನ ಗುಟ್ಟು ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *